ರಾಜಕೀಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ರಾಜಕೀಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಫೆಬ್ರವರಿ 3, 2018

ಅರಸೀಕೆರೆ ಬಂದ್

ಅರಸೀಕೆರೆ ಬಂದ್

ಅರಸೀಕೆರೆ ತಾಲ್ಲೂಕಿನಲ್ಲಿ ಫಸಲು ಬಿಡುತ್ತಿದ್ದ ತೆಂಗಿನ ಮರಗಳ ಪೈಕಿ ತೀವ್ರ ಬರಗಾಲದಿಂದಾಗಿ ಸುಮಾರು 8 ಲಕ್ಷಕ್ಕೂ ಅಧಿಕ ಮರಗಳು ಸುಳಿಬಿದ್ದು ಸಂಪೂರ್ಣ ನಾಶ ಹೊಂದಿದ್ದು, ಪ್ರಸ್ತುತ ಆರ್ಥಿಕ ಸಂಕಷ್ಟಕ್ಕೀಡಾಗಿರುವ ರೈತರುಗಳಿಗೆ ಸೂಕ್ತ ಪರಿಹಾರವನ್ನು ನೀಡುವಂತೆ ಈ ಹಿಂದೆ ಹಲವುಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಮತ್ತು ಬೆಳಗಾವಿ ಅಧಿವೇಶನದಲ್ಲಿ ನಿಯಮ 69ರ ಅಡಿಯಲ್ಲಿ ಚರ್ಚೆ ಮಾಡಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು  ತೆಂಗು ಬೆಳೆಗಾರರಿಗೆ ಯಾವುದೇ ರೀತಿಯ ಪರಿಹಾರ ನೀಡಲು ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ಅರಸೀಕೆರೆ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ಕರೆ ನೀಡಿದ್ದ ಅರಸೀಕೆರೆ ಬಂದ್ ಗೆ ಪಟ್ಟಣವು ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸಿತ್ತು.  ಆರೋಗ್ಯ ಸೇವೆಯನ್ನು ಹೊರತುಪಡಿಸಿ ಬೇರೆ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. 

ಶಾಸಕ ಕೆ.ಎಂ.ಶಿವಲಿಂಗೇಗೌಡರು ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿ ಸಹಸ್ರಾರು ರೈತಪರ ಬೆಂಬಲಿಗರ ಜೊತೆ ಮೆರವಣಿಗೆ ನಡೆಸಿ, ಪಿ.ಪಿ.ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.  ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ ಸೇರಿದಂತೆ ಅನೇಕ ರಾಜಕೀಯ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಶಾಸಕರಿಗೆ ಜೊತೆ ನೀಡಿದರು.







Share:

ಬುಧವಾರ, ಜನವರಿ 31, 2018

ಅರಸೀಕೆರೆ ಶಾಸಕರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ

ಅರಸೀಕೆರೆ ತಾಲ್ಲೂಕಿನಲ್ಲಿ ಫಸಲು ಬಿಡುತ್ತಿದ್ದ ತೆಂಗಿನ ಮರಗಳ ಪೈಕಿ ತೀವ್ರ ಬರಗಾಲದಿಂದಾಗಿ ಸುಮಾರು 8 ಲಕ್ಷಕ್ಕೂ ಅಧಿಕ ಮರಗಳು ಸುಳಿಬಿದ್ದು ಸಂಪೂರ್ಣ ನಾಶ ಹೊಂದಿದ್ದು, ಪ್ರಸ್ತುತ ಆರ್ಥಿಕ ಸಂಕಷ್ಟಕ್ಕೀಡಾಗಿರುವ ರೈತರುಗಳಿಗೆ ಸೂಕ್ತ ಪರಿಹಾರವನ್ನು ನೀಡುವಂತೆ ಈ ಹಿಂದೆ ಹಲವುಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಮತ್ತು ಬೆಳಗಾವಿ ಅಧಿವೇಶನದಲ್ಲಿ ನಿಯಮ 69ರ ಅಡಿಯಲ್ಲಿ ಚರ್ಚೆ ಮಾಡಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು  ತೆಂಗು ಬೆಳೆಗಾರರಿಗೆ ಯಾವುದೇ ರೀತಿಯ ಪರಿಹಾರ ನೀಡಲು ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ, ಅರಸೀಕೆರೆ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು, ತಾಲ್ಲೂಕಿನ ಗೀಜಿಹಳ್ಳಿ ಗ್ರಾಮದ ತೋಟದಲ್ಲಿ ದಿನಾಂಕ 29-01-2018 ರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ.





Share:

ಸೋಮವಾರ, ಜನವರಿ 22, 2018

ಕರ್ನಾಟಕ ವಿಧಾನಸಭೆಯಲ್ಲಿ ಅರಸೀಕೆರೆ ಕ್ಷೇತ್ರವನ್ನು ಪ್ರತಿನಿಧಿಸಿದ ಶಾಸಕರುಗಳು

ಕರ್ನಾಟಕ ವಿಧಾನಸಭೆಯಲ್ಲಿ ಅರಸೀಕೆರೆ ಕ್ಷೇತ್ರವನ್ನು ಪ್ರತಿನಿಧಿಸಿದ ಶಾಸಕರುಗಳು

1952 ರಲ್ಲಿ ನಡೆದ ಪ್ರಥಮ ಸಾರ್ವತ್ರಿಕ ಚುನಾವಣೆಯ ಸಮಯದಿಂದಲೂ ಅರಸೀಕೆರೆ ತಾಲ್ಲೂಕಿನಲ್ಲಿ 2 ವಿಧಾನಸಭಾ ಕ್ಷೇತ್ರಗಳನ್ನು ರಚಿಸಲಾಗಿತ್ತು. 1952 ರ ಚುನಾವಣೆಯಲ್ಲಿ ಅರಸೀಕೆರೆ ಮತ್ತು ಜಾವಗಲ್ ಕ್ಷೇತ್ರವೆಂದು ವಿಗಂಡಿಸಲಾಗಿತ್ತು. ನಂತರದ ಚುನಾವಣೆಯಲ್ಲಿ ಜಾವಗಲ್ ಕ್ಷೇತ್ರವು ಗಂಡಸಿ ಕ್ಷೇತ್ರವೆಂದು ಬದಲಾಯಿತು. 2008ರಲ್ಲಿ ನಡೆದ ಕ್ಷೇತ್ರಗಳ ವಿಂಗಡನೆಯಲ್ಲಿ ಗಂಡಸಿ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಗ್ರಾಮಗಳು ಬೇರೆಬೇರೆ ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆಯಾಗಿ ಗಂಡಸಿ ಕ್ಷೇತ್ರವು ಇತಿಹಾಸದ ಪುಟ ಸೇರಿತು.

ಅರಸೀಕೆರೆ ಕ್ಷೇತ್ರದ ಶಾಸಕರುಗಳು :-

1) 1952 ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಲ್ಲಿ ಒಟ್ಟು 40,884 ಜನ ಮತದಾರರಿದ್ದರು. ಇವರುಗಳ ಪೈಕಿ ಶೇ.45.67% ರಷ್ಟು ಅಂದರೆ, 18,671 ಜನ ಮತದಾನ ಮಾಡಿದ್ದರು. ಅರಸೀಕೆರೆ ಕ್ಷೇತ್ರದಿಂದ ಮೂವರು ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಇವರು ಪೈಕಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೆ.ಪಂಚಾಕ್ಷರಯ್ಯನವರು 8631 ಮತಗಳನ್ನು ಪಡೆದು ಅರಸೀಕೆರೆ ಕ್ಷೇತ್ರದ ಪ್ರಥಮ ಶಾಸಕರಾಗಿ ಆಯ್ಕೆಯಾದರು. ಇವರ ಪ್ರತಿಸ್ಪರ್ಧಿಗಳಾದ ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿಯ ಪಿ.ಬಿ.ಬೊಮ್ಮಣ್ಣನವರು 8348 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ಕೆ.ಎಂ.ಬಸವರಾಜ್ ರವರು 1692 ಮತಗಳನ್ನು ಪಡೆದಿದ್ದರು.

2) ರಾಜ್ಯ ವಿಧಾನಸಭೆಯ ಎರಡನೇ ಸಾರ್ವತ್ರಿಕ ಚುನಾವಣೆ 1957 ರಲ್ಲಿ ಜರುಗಿತು. ಅರಸೀಕೆರೆ ಕ್ಷೇತ್ರದಿಂದ ಮೂವರು ಸ್ಪರ್ಧಿಸಿದ್ದರು. ಒಟ್ಟು ಮತದಾರ ಸಂಖ್ಯೆ 45,101, ಇವರಲ್ಲಿ 26,646 (ಶೇ.59.08%) ಜನ ಮತದಾನ ಮಾಡಿದ್ದರು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಡಾ. ಎ.ಆರ್.ಕರಿಸಿದ್ದಪ್ಪನವರು 14,834 ಮತಗಳನ್ನು ಪಡೆದು ಜಯಶಾಲಿಯಾದರು. ಇವರ ಪ್ರತಿಸ್ಪರ್ಧಿಗಳಾದ ಪಕ್ಷೇತರ ಅಭ್ಯರ್ಥಿ ವೈ.ಧರ್ಮಪ್ಪ ರವರು 10,469 ಮತಗಳನ್ನು ಹಾಗೂ ಪ್ರಜಾ ಸೋಶಿಯಲಿಷ್ಟ್ ಪಾರ್ಟಿಯ ಕೆ.ಎಂ.ಬಸವರಾಜು 1343 ಮತಗಳನ್ನು ಪಡೆದರು.

3) 1962ರಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಲ್ಲಿ 52,573 ಮತದಾರರಿದ್ದರು ಇವರ ಪೈಕಿ 30,155 (ಶೇ.57.36%) ರಷ್ಟು ಜನ ಮತ ಚಲಾಯಿಸಿದ್ದರು. ಅರಸೀಕೆರೆ ಕ್ಷೇತ್ರದಲ್ಲಿ ನಾಲ್ಕು ಜನ ಅರ್ಭ್ಯರ್ಥಿಗಳಿದ್ದರು. ಪ್ರಜಾ ಸೋಶಿಯಲಿಷ್ಟ್ ಪಾರ್ಟಿಯಿಂದ ಕಣಕ್ಕಿಳಿದಿದ್ದ ಪಿ.ಬಿ.ಬೊಮ್ಮಣ್ಣನವರು 14,639 ಮತಗಳನ್ನು ಪಡೆದು ಕ್ಷೇತ್ರದ ಮೂರನೇ ಶಾಸಕರಾಗಿ ಆಯ್ಕೆಯಾದರು. 1957ರಲ್ಲಿ ಶಾಸಕರಾಗಿದ್ದ ಕಾಂಗ್ರೆಸ್ ಪಕ್ಷದ ಡಾ.ಎ.ಆರ್.ಕರಿಸಿದ್ದಪ್ಪನವರು 11,655 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಪಕ್ಷೇತರ ಅಭ್ಯರ್ಥಿ ಟಿ. ಮೊಹಮದ್ ಇಸ್ಮಾಯಿಲ್ ರವರು 928 ಮತಗಳನ್ನು ಹಾಗೂ ಜನಸಂಘದಿಂದ ಸ್ಪರ್ಧಿಸಿದ್ದ ಕೆ.ಎಂ.ಬಸವರಾಜು ರವರು 824 ಮತಗಳನ್ನು ಪಡೆದಿದ್ದರು.

4) 1967ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜಿ.ಚನ್ನಬಸಪ್ಪನವರು 22,847 ಮತಗಳನ್ನು ಪಡೆದು ಜಯಶಾಲಿಯಾದರೆ, ಪ್ರತಿಸ್ಪರ್ಧಿಗಳಾದ ಸ್ವತಂತ್ರ ಪಕ್ಷದ ಹೆಚ್.ಎಸ್.ಸಿದ್ದಪ್ಪ (ಮಿಲ್ಟ್ರಿ ಸಿದ್ದಪ್ಪ) ರವರು 15,942 ಮತಗಳನ್ನು ಹಾಗೂ ಭಾರತೀಯ ಜನಸಂಘದ ಕೆ.ಎನ್.ದುರ್ಗಪ್ಪಶೆಟ್ಟಿ ರವರು 2,082 ಮತಗಳನ್ನು ಪಡೆದರು. ಒಟ್ಟು 62,060 ಮತದಾರರ ಪೈಕಿ 42,958 (ಶೇ.69.22%) ಜನ ಮತದಾನ ಮಾಡಿದ್ದರು.

5) 1972 ರಲ್ಲಿ ನಡೆದ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಲ್ಲಿ 73,120 ಮತದಾರರಿದ್ದರು. 49,747 (68.03%) ಜನ ಮತ ಚಲಾಯಿಸಿದರು. ಸಂಸ್ಥಾ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಹೆಚ್.ಎಸ್.ಸಿದ್ದಪ್ಪ (ಮಿಲ್ಟ್ರಿ ಸಿದ್ದಪ್ಪ) ರವರು 23,026 ಮತಗಳನ್ನು ಪಡೆದು ಅರಸೀಕೆರೆಯ ಐದನೇ ಶಾಸಕರಾಗಿ ಆಯ್ಕೆಯಾದರು. ಕಾಂಗ್ರೆಸ್ (ಐ) ನಿಂದ ಸ್ಪರ್ಧಿಸಿದ್ದ ಗಂಗಾಧರಪ್ಪನವರು 21,925 ಮತಗಳನ್ನು, ಭಾರತೀಯ ಜನಸಂಘದ ಎನ್.ಎಮ್.ಬಸವರಾಜು ರವರು 1,668 ಮತಗಳನ್ನು, ಪಕ್ಷೇತರ ಅರ್ಭ್ಯರ್ಥಿಗಳಾದ ಪಾಪಯ್ಯ ರವರು 837 ಮತಗಳನ್ನು ಮತ್ತು ಬಸಪ್ಪ ಒಡೆಯರ್ ರವರು 745 ಮತಗಳನ್ನು ಪಡೆದರು.

ಹೆಚ್.ಎಸ್.ಸಿದ್ದಪ್ಪನವರು ಶಾಸಕರಾಗಿದ್ದ ಅವಧಿಯಲ್ಲೇ ನಿಧನಹೊಂದಿದರು. ಅವರ ಅಕಾಲಿಕ ನಿಧನದಿಂದ ತೆರೆವಾದ ಸ್ಥಾನಕ್ಕೆ 1974 ರಲ್ಲಿ ನಡೆದ ಉಪಚುನಾವಣೆಯಲ್ಲಿ ಸಂಸ್ಥಾ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಆನಿವಾಳದ ನಂಜಪ್ಪನವರು ಅರಸೀಕೆರೆಯ ಆರನೇ ಶಾಸಕರಾಗಿ ಆಯ್ಕೆಯಾದರು.

6) 1978ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಅರಸೀಕೆರೆ ಕ್ಷೇತ್ರದ ಮತದಾರ ಸಂಖ್ಯೆ 86,981 ಆಗಿತ್ತು. ಈ ಪೈಕಿ 65,210 (ಶೇ.74.97%) ಜನ ಮತ ಚಲಾಯಿಸಿದ್ದರು. ಚುನಾವಣಾ ಕಣದಲ್ಲಿ ನಾಲ್ಕು ಜನ ಸ್ಪರ್ಧಿಸಿದ್ದರು. ಕಾಂಗ್ರೆಸ್ (ಐ) ನಿಂದ ಸ್ಪರ್ಧಿಸಿದ್ದ ಡಿ.ಬಿ.ಗಂಗಾಧರಪ್ಪನವರು 36,062 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾದರು. ಜನತಾ ಪಾರ್ಟಿಯ ಕೆ.ಎನ್.ದುರ್ಗಪ್ಪಶೆಟ್ಟಿ ರವರು 19,585 ಮತಗಳನ್ನು, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಜಿ.ಎಸ್.ಬಸವರಾಜು ರವರು 7563 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ಕೃಷ್ಣಾನಾಯ್ಕ ರವರು 575 ಮತಗಳನ್ನು ಪಡೆದರು.

7) 1983ರ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಿಂದ ಮೂವರು ಸ್ಪರ್ಧಿಸಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಬಸವರಾಜು ರವರು 32,877 ಮತಗಳನ್ನು ಪಡೆದು ಜಯಶಾಲಿಯಾದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಿ.ಬಿ.ಗಂಗಾಧರಪ್ಪ ರವರು 19,095 ಮತಗಳನ್ನು ಹಾಗೂ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಭ್ಯರ್ಥಿಯಾಗಿದ್ದ ಕೆ.ಎನ್.ದುರ್ಗಪ್ಪಶೆಟ್ಟಿ ರವರು 11,950 ಮತಗಳನ್ನು ಪಡೆದರು. ಒಟ್ಟು ಮತದಾರ ಸಂಖ್ಯೆ 95,307 ರ ಪೈಕಿ 65,048 (ಶೇ.68.25%) ಜನ ಮತದಾನ ಮಾಡಿದ್ದರು.

1983 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಗಳಿಗೆ ಸ್ಪಷ್ಟ ಬಹುಮತ ದೊರೆಯಲಿಲ್ಲ. 95 ಸ್ಥಾನಗಳಲ್ಲಿ ಜಯಶಾಲಿಯಾಗಿದ್ದ ಜನತಾಪಕ್ಷವು ಬಿಜೆಪಿ ಹಾಗೂ ಇತರೆ ಪಕ್ಷಗಳ ಬಾಹ್ಯ ಬೆಂಬಲ ಪಡೆದು, ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ರಚಿಸಿ ರಾಮಕೃಷ್ಣಹೆಗ್ಡೆ ರವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿತು. ಆದರೆ 1984 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಜನತಾ ಪಕ್ಷವು ಕೇವಲ 4 ಲೋಕಸಭಾ ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. ಈ ಬೆಳವಣಿಗೆಯಿಂದ ರಾಮಕೃಷ್ಣಹೆಗ್ಡೆಯವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ವಿಧಾನಸಭೆಯನ್ನು ವಿಸರ್ಜಿಸಿದರು.

8) 1985ರ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ದೊರೆತು ರಾಮಕೃಷ್ಣ ಹೆಗ್ಡೆ ಯವರು ಮತ್ತೆ ಮುಖ್ಯಮಂತ್ರಿಯಾದರು. ಅರಸೀಕೆರೆ ಕ್ಷೇತ್ರದಿಂದ ಜನತಾ ಪಕ್ಷದ ಡಿ.ಬಿ.ಗಂಗಾಧರಪ್ಪನವರು ಆಯ್ಕೆಯಾಗಿ ಅರಸೀಕೆರೆಯಲ್ಲಿ ಎರಡು ಸಲ ಶಾಸಕರಾಗಿ ಆಯ್ಕೆಯಾದ ಮೊದಲ ವ್ಯಕ್ತಿ ಎಂದೆನಿಸಿದರು. ಚುನಾವಣಾ ಕಣದಲ್ಲಿ ಒಟ್ಟು 15 ಜನ ಸ್ಪರ್ಧಿಸಿದ್ದರು. ಡಿ.ಬಿ.ಗಂಗಾಧರಪ್ಪ 35,356 ಮತ, ಕಾಂಗ್ರೆಸ್ ಪಕ್ಷದ ಜಿ.ಎಸ್.ಬಸವರಾಜು 30,148, ಬಿಜೆಪಿಯ ಎ.ಎಸ್.ಬಸವರಾಜು 3,902 ಮತಗಳನ್ನು ಪಡೆದರು. ಉಳಿದ ಅಭ್ಯರ್ಥಿಗಳಾದ ವೆಂಕಟರಮಣಪ್ಪ (604), ಜಿ.ಕೆಂಚಪ್ಪ (547), ಕೆ.ಕೆ.ಹೆಚ್.ಅಬ್ದುಲ್ ಖಲೀಲ್ (331), ಹೆಚ್.ಎಸ್.ಅಮೀರ್ (293), ಜಿ.ಇಕ್ಬಾಲ್ ಅಹಮದ್ (288), ಚಲದೇವ ಬೋವಿ (275), ಮೂಡಲಪ್ಪ (213), ಎ.ಹೆಚ್.ರಮೇಶ (175), ಬಿ.ಎಸ್.ಶ್ರೀನಾಥ (174), ಕೆ.ನಾಗರಾಜ (137), ವೆಂಕಟರಾಜು (131), ಪುಟ್ಟಯ್ಯ (66) ಮತಗಳನ್ನು ಪಡೆದರು. ಈ ಚುನಾವಣೆಯಲ್ಲಿ ಅರಸೀಕೆರೆ ಮತದಾರರ ಸಂಖ್ಯೆ ಒಂದು ಲಕ್ಷಕ್ಕೆ ಏರಿತ್ತು. ಒಟ್ಟು 1,06,704 ಮತದಾರರ ಪೈಕಿ 73,845 (ಶೇ.69.21%) ಮತದಾನ ಮಾಡಿದ್ದರು.

9) 1989ರ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಿಂದ ಇದುವರೆಗಿದ ದಾಖಲೆ ಪ್ರಮಾಣದ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಒಟ್ಟು 19 ಜನ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಪಕ್ಷದ ಕೆ.ಪಿ.ಪ್ರಭುಕುಮಾರ್ ರವರು 30,533 ಮತಗಳನ್ನು ಪಡೆದು ಜಯಶಾಲಿಯಾದರು. ಜನತಾ ದಳದ ಜಿ.ಎಸ್.ಪರಮೇಶ್ವರಪ್ಪ 19,591 ಮತಗಳು, ಜನತಾ ಪಕ್ಷದ ಡಿ.ಬಿ.ಗಂಗಾಧರಪ್ಪ 15,776 ಮತಗಳು, ಬಿಜೆಪಿಯ ಎ.ಎಸ್.ಬಸವರಾಜು 13,622 ಮತಗಳನ್ನು ಪಡೆದರು. ಪಕ್ಷೇತರ ಅಭ್ಯರ್ಥಿಗಳಾದ ಜಿ.ಉರಲಿಂಗಪ್ಪ (2278), ಬಿ.ಪಿ.ದಯಾನಂದ (891), ಡಿ.ಭೀಮಾನಾಯ್ಕ (426), ಜಿ.ಕೆಂಚಪ್ಪ (392), ಹೆಚ್.ಕೆ.ಗೋಪಾಲನಾಯ್ಕ (371), ಲಕ್ಷ್ಮಾಬೋವಿ (284), ಬಸಪ್ಪ ಒಡೆಯರ್ (256), ಸಣ್ಣಚಲುವಯ್ಯ (140), ಪಿ.ಎಸ್.ಗೋಪಾಲಕೃಷ್ಣ (118), ಅನಂತಸ್ವಾಮಿ (106), ಪಿ.ಚಂದ್ರಪ್ಪ (105), ಮೂಡ್ಲಯ್ಯ (97), ಎಸ್.ಸಿ.ಸಿದ್ದರಾಮಪ್ಪ (96), ರುದ್ರಾಣಮ್ಮ (91), ಜಗದೀಶಮೂರ್ತಿ (75) ಮತಗಳನ್ನು ಪಡೆದರು. ಒಟ್ಟು 1,31,362 ಮತದಾರ ಪೈಕಿ 91,058 (ಶೇ.69.32%) ಮತದಾನ ಮಾಡಿದ್ದರು.

10) 1994 ರ ವಿಧಾನಸಭಾ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರ ಅಚ್ಚರಿಯ ಫಲಿತಾಂಶ ನೀಡಿ ರಾಜ್ಯದ ಗಮನ ಸೆಳೆಯಿತು. ಹಿರಿಯ ರಾಜಕೀಯ ಮುತ್ಸದ್ಧಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಹಾರನಹಳ್ಳಿ ರಾಮಸ್ವಾಮಿಯವರು ಈ ಚುನಾವಣೆಯಲ್ಲಿ ಪರಾಭವಗೊಂಡರು. ಜನತಾದಳದಿಂದ ಸ್ಪರ್ಧಿಸಿದ್ದ ಜಿ.ಎಸ್.ಪರಮೇಶ್ವರಪ್ಪನವರು 31,845 ಮತಗಳನ್ನು ಪಡೆದು ಅರಸೀಕೆರೆ ಶಾಸಕರಾಗಿ ಆಯ್ಕೆಯಾದರು. ಹಾರನಹಳ್ಳಿ ರಾಮಸ್ವಾಮಿಯವರಿಗೆ 29,113 ಮತಗಳು, ಬಿಜೆಪಿಯ ಎ.ಎಸ್.ಬಸವರಾಜು ರವರಿಗೆ 20,326 ಮತಗಳು ಕರ್ನಾಟಕ ಕಾಂಗ್ರೆಸ್ ಪಕ್ಷದ ಎಸ್.ಸಿ.ಸಿದ್ದರಾಮಪ್ಪ ರವರಿಗೆ 12,636 ಮತಗಳು ಲಭಿಸಿದವು. ಉಳಿದ ಸ್ಪರ್ಧಿಗಳಾದ ಕೆ.ಆರ್.ಚಂದ್ರಶೇಖರ್ (2668), ಶಿವರುದ್ರಪ್ಪ (635), ಆರ್.ಸಿದ್ದೇಗೌಡ (430), ಕೃಷ್ಣಮೂರ್ತಿ (137), ಜಿ.ಕೆಂಚಪ್ಪ (82), ಜಿ.ಮೋಹನ್ ಲಾಲ್ (49) ಮತಗಳನ್ನು ಪಡೆದರು. ಒಟ್ಟು 1,39,970 ಮತದಾರರ ಪೈಕಿ 99,753 (ಶೇ. 71.27%) ಮತದಾನ ಮಾಡಿದ್ದರು.

11) 1999 ರ ವಿಧಾನಸಭಾ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದ ಮತದಾರ ಸಂಖ್ಯೆ 1,46,857 ಆಗಿತ್ತು. ಒಟ್ಟು 1,04,522 (ಶೇ. 71.17%) ರಷ್ಟು ಜನ ಮತದಾನ ಮಾಡಿದ್ದರು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಜಿ.ವಿ.ಸಿದ್ದಪ್ಪನವರು 43,224 ಮತಗಳನ್ನು ಪಡೆದು ಅರಸೀಕೆರೆ ಕ್ಷೇತ್ರದ ಹನ್ನೆರಡನೇ ಶಾಸಕರಾಗಿ ಆಯ್ಕೆಯಾದರು. ಬಿಜೆಪಿಯ ಎ.ಎಸ್.ಬಸವರಾಜು 32,235 ಮತಗಳು, ಜೆಡಿಎಸ್ ನ ಕೆ.ಪಿ.ಪ್ರಭುಕುಮಾರ್ 22,208 ಮತಗಳು ಹಾಗು ಪಕ್ಷೇತರ ಅಭ್ಯರ್ಥಿಗಳಾದ ಎಸ್.ಎನ್.ರಾಮಚಂದ್ರ ಶಾಸ್ತ್ರಿ 1238 ಮತಗಳು, ಎ.ಟಿ.ತಿಮ್ಮಪ್ಪ 1194, ಎ.ಬಿ.ಶ್ರೀನಿವಾಸ (ವಾಟಾಳ್) 318 ಮತ ಹಾಗೂ ಎಸ್.ಎಂ.ರಮೇಶ್ 222 ಮತಗಳನ್ನು ಪಡೆದರು.

12) 2004 ರ ವಿಧಾನಸಭಾ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಬಳಸಲಾಯಿತು. ಭಾರತೀಯ ಜನತಾ ಪಕ್ಷವು ಅರಸೀಕೆರೆಯಲ್ಲಿ ಮೊದಲ ಸಲ ಖಾತೆ ತೆರೆಯಿತು. ಸತತ ನಾಲ್ಕುಬಾರಿ ಸ್ಪರ್ಧಿಸಿ ಸೋತಿದ್ದ ಬಿಜೆಪಿಯ ಎ.ಎಸ್.ಬಸವರಾಜು ರವರು ತಮ್ಮ ಐದನೇ ಪ್ರಯತ್ನದಲ್ಲಿ 36,867 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಕಾಂಗ್ರೆಸ್ ನ ಜಿ.ವಿ.ಸಿದ್ದಪ್ಪ 30,418, ಜೆಡಿಎಸ್ ನ ಕೆ.ಪಿ.ಪ್ರಭುಕುಮಾರ್ 20,381, ಪಕ್ಷೇತರ ಅಭ್ಯರ್ಥಿಗಳಾದ ಬಿಳಿಚೌಡಯ್ಯ 9996, ಬಿ.ಎನ್.ವಿದ್ಯಾಧರ 5497, ಜಿ.ಎಮ್.ಉರಲಿಂಗಪ್ಪ 1397 ಹಾಗೂ ಬಿ.ಆರ್.ತೋಂಟದಾರ್ಯ 1036 ಮತಗಳನ್ನು ಪಡೆದರು. ಒಟ್ಟು 1,57,442 ಮತದಾರ ಪೈಕಿ 1,05,234 (ಶೇ.66.83%) ಜನ ಮತದಾನ ಮಾಡಿದ್ದರು.

13) 2008 ರಲ್ಲಿ ಕರ್ನಾಟಕದ ವಿಧಾನಸಭಾ ಕ್ಷೇತ್ರಗಳ ಮರುವಿಂಗಡನೆಯಾಯಿತು. ಈ ಸಮಯದಲ್ಲಿ ಅರಸೀಕೆರೆ ತಾಲ್ಲೂಕಿನ ಗಂಡಸಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಗ್ರಾಮಗಳನ್ನು ಬೇರೆಬೇರೆ ಕ್ಷೇತ್ರಗಳಿಗೆ ಹಂಚಿಕೆ ಮಾಡಿದ್ದರಿಂದ ಗಂಡಸಿ ಕ್ಷೇತ್ರವು ಇಲ್ಲವಾಯಿತು. 2004 ರ ಚುನಾವಣೆಯಲ್ಲಿ ಗಂಡಸಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಎಂ.ಶಿವಲಿಂಗೇಗೌಡರು ಕೇವಲ 18 ಮತಗಳಿಂದ ಸೋಲನ್ನು ಅನುಭವಿಸಿದ್ದರು. 2008ರಲ್ಲಿ ನಡೆದ ಕ್ಷೇತ್ರ ಮರು ವಿಂಗಡಣೆ ಬಳಿಕ ಗಂಡಸಿ ಕ್ಷೇತ್ರ ಕಳೆದುಕೊಂಡ ಕೆ.ಎಂ.ಶಿವಲಿಂಗೇಗೌಡರು, ಅರಸೀಕೆರೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು 74,025 ಮತಗಳನ್ನು ಪಡೆದು ಅರಸೀಕೆರೆಯ ಹದಿನಾಲ್ಕನೆಯ ಶಾಸಕರಾಗಿ ಚುನಾಯಿತರಾದರು. ಇವರ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ನ ಜಿ.ವಿ.ಸಿದ್ದಪ್ಪ 39,799 ಮತಗಳು, ಬಿಜೆಪಿಯ ಬಿ.ಎನ್.ರವಿ 19,774 ಮತಗಳು, ಬಹುಜನ ಸಮಾಜ ಪಕ್ಷದ ಕೆ.ಎಮ್.ಬಸವರಾಜು 2301 ಮತಗಳು, ಪಕ್ಷೇತರ ಅಭ್ಯರ್ಥಿ ಎಂ.ಪಿ.ಪ್ರವೀಣ 1949 ಮತಗಳು ಹಾಗೂ ಜೆಡಿಯು ನ ಬಿ.ಎನ್.ರಮೇಶ್ 1445 ಮತಗಳನ್ನು ಪಡೆದರು. ಕ್ಷೇತ್ರ ವಿಂಗಡನೆಯಲ್ಲಿ ಗಂಡಸಿ ಹೋಬಳಿ ಸೇರಿದಂತೆ ಹಿಂದಿನ ಗಂಡಸಿ ಕ್ಷೇತ್ರದ ಹಲವು ಗ್ರಾಮಗಳು ಅರಸೀಕೆರೆ ಕ್ಷೇತ್ರದಲ್ಲಿ ಸೇರ್ಪಡೆಯಾಗಿದ್ದರಿಂದ ಒಟ್ಟು ಮತದಾರ ಸಂಖ್ಯೆ 1,78,412 ಕ್ಕೆ ಏರಿತ್ತು, ಈ ಪೈಕಿ 1,38,935 (ಶೇ.77.87%) ಜನ ಮತದಾನ ಮಾಡಿದ್ದರು.

14) 2013ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಕೆ.ಎಂ.ಶಿವಲಿಂಗೇಗೌಡರು 76,579 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಬಿ.ಶಿವರಾಮ್ ರವರನ್ನು 29,631 ಮತಗಳ ಅಂತರದಿಂದ ಸೋಲಿಸಿ, ಅರಸೀಕೆರೆ ಕ್ಷೇತ್ರದಲ್ಲಿ ಸತತ ಎರಡು ಚುನಾವಣೆಗಳಲ್ಲಿ ಗೆದ್ದ ಪ್ರಥಮ ಶಾಸಕ ಎಂದೆನಿಸಿಕೊಂಡರು. ಕಾಂಗ್ರೆಸ್ ಅಭ್ಯರ್ಥಿ ಬಿ.ಶಿವರಾಮ್ 46,498 ಮತಗಳನ್ನು ಪಡೆದರೆ, ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಡಾ.ಡಿ.ಜಿ. ಲೋಕೇಶ್ 26,312 ಮತಗಳನ್ನು ಪಡೆದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಡಿ.ಬಿ.ಗಂಗಾಧರ್ (2464), ಪಕ್ಷೇತರ ಅಭ್ಯರ್ಥಿ ಗಂಗಾಧರಪ್ಪ (1557), ಕುಮಾರ ಬೋವಿ (1335), ಜೆ.ಪಿ.ಜಯಣ್ಣ (1244), ಎನ್.ಪಿ.ರಾಜೇಂದ್ರ ಪ್ರಸಾದ್ (745), ಬಿ.ಕೆ.ಸೋಮಶೇಖರ್ (605), ಟಿ.ಎಂ.ಚಂದ್ರಶೇಖರಯ್ಯ (561), ಆಟೋ ರವಿ (ಬೋಂಡ) 519 ಮತಗಳನ್ನು ಪಡೆದರು. ಅರಸೀಕೆರೆ ಕ್ಷೇತ್ರದ ಒಟ್ಟು 1,97,265 ಮತದಾರರ ಪೈಕಿ 1,58,869 (ಶೇ. 80.47%) ರಷ್ಟು ಮತದಾನ ನಡೆದಿತ್ತು.

(ಚುನಾವಣಾ ಅಂಕಿಅಂಶಗಳು ಹಾಗೂ ಇತರೆ ಮಾಹಿತಿಗಳನ್ನು ಅಂತರ್ಜಾಲದಲ್ಲಿ ದೊರತ ವಿವಿಧ ಮೂಲಗಳಿಂದ ಸಂಗ್ರಹಿಸಿರುತ್ತೇನೆ, ಶಾಸಕರುಗಳ ಭಾವಚಿತ್ರಗಳನ್ನು ಅವರ ಕುಟುಂಬದ ಸದಸ್ಯರುಗಳಿಂದ ಸಂಗ್ರಹಿಸಿರುತ್ತೇನೆ.)
ಮೇಲ್ಕಂಡ ವಿವರಗಳಲ್ಲಿ ಸಾಧ್ಯವಾದಷ್ಟೂ ಅಧಿಕೃತವಾದ ಮಾಹಿತಿಗಳನ್ನು ಸಂಗ್ರಹಿಸಿದ್ದೇನೆ. ಅಕಸ್ಮಾತ್ ಯಾವುದೇ ವಿವರಗಳಲ್ಲಿ ವೆತ್ಯಾಸವೇನಾದರೂ ಕಂಡುಬಂದರೆ ಅಥವಾ ತಮ್ಮಲ್ಲಿ ಹೆಚ್ಚಿನ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ. ತಮ್ಮ ಪ್ರತಿಕ್ರಿಯೆಗೆ ಕಾಯುತ್ತಿರುತ್ತೇನೆ.

ಧನ್ಯವಾದಗಳು
ಶ್ರೀರಾಮ ಜಮದಗ್ನಿ
ಅರಸೀಕೆರೆ.


Share:

ಗುರುವಾರ, ಜನವರಿ 4, 2018

ಅರಸೀಕೆರೆಯಲ್ಲಿ ಮುಖ್ಯಮಂತ್ರಿಗಳಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ

ಅರಸೀಕೆರೆಯಲ್ಲಿ ಮುಖ್ಯಮಂತ್ರಿಗಳಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಿಗ್ಗೆ ಅರಸೀಕೆರೆ ತಾಲ್ಲೂನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಯೋಜನೆಗಳಡಿ ನೆರವು ಪಡೆಯಲಿರುವ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದರು.

ಇಂದು ಬೆಳಗ್ಗೆ 11.45 ಕ್ಕೆ ಹೆಲಿಕಾಪ್ಟರಿನಲ್ಲಿ ಅರಸೀಕೆರೆ ಜೇನುಕಲ್ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್ ಗೆ ಆಗಮಿಸದ ಮುಖ್ಯಮಂತ್ರಿಗಳಿಗೆ ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಗೌರವ ಸಮರ್ಪಣೆ ನೀಡಲಾಯಿತು.   ನಂತರ, ಪಟ್ಟಣದ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ, ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಎ.ಮಂಜು, ಅರಸೀಕೆರೆ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

















Share:

ಸೋಮವಾರ, ನವೆಂಬರ್ 6, 2017

ಅರಸೀಕೆರೆಯಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ

"ಪರಿವರ್ತನಾ ಯಾತ್ರೆ"


ನವ ಕರ್ನಾಟಕದ ನಿರ್ಮಾಣಕ್ಕಾಗಿ ಭಾರತೀಯ ಜನತಾ ಪಕ್ಷವು ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಯು ಇಂದು ಬೆಳಿಗ್ಗೆ ಅರಸೀಕೆರೆಗೆ ಆಗಮಿಸಿತು. ಮಾಜಿ ಮುಖ್ಯಮಂತ್ರಿ ಶ್ರೀ.ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಆಗಮಿಸಿದ ಈ ರಥಯಾತ್ರೆಯು ಅರಸೀಕೆರೆಗೆ ಬರುವ ಹೊತ್ತಿಗೆ ಪಟ್ಟಣದಲ್ಲಿ ಜೋರಾದ ಮಳೆ ಬರುತ್ತಿತ್ತು.  ನೂರಾರು ಕಾರ್ಯಕರ್ತರುಗಳು ಮಳೆಯನ್ನು ಲೆಕ್ಕಿಸದೇ ರಥಯಾತ್ರೆಯ ಜೊತೆ ಬೈಕ್ ರಾಲಿಯಲ್ಲಿ ಪಾಲ್ಗೊಂಡರು.  ರಥಯಾತ್ರೆಗೆಂದೇ ನಿರ್ಮಿಸಿರುವ ವಾಹನದಲ್ಲಿ ಮಾಜಿ ಸಚಿವರಾದ ವಿ.ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆಯವರು ಉಪಸ್ಥಿತರಿದ್ದರು.

ಪಟ್ಟಣದ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಗೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪನವರು, ಇಂದು "ಕನಕ ಜಯಂತಿ" ಇದ್ದದ್ದರಿಂದ, ಮೊದಲಿಗೆ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ವೇದಿಕೆಯನ್ನೇರಿದರು. ಈ ಸಮಯದಲ್ಲಿ ಸ್ವಲ್ಪ ಹೊತ್ತು ಮಳೆ ನಿಂತಿದ್ದರಿಂದ ಕಾರ್ಯಕ್ರಮ ಸುಗಮವಾಗಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾಜಿ ಸಂಸದೆ ತೇಜಸ್ವಿನಿ ರಮೇಶ್, ಮಾಜಿ ಸಚಿವರಾದ ಶ್ರೀರಾಮುಲು, ವಿ.ಸೋಮಣ್ಣ, ಅರಸೀಕೆರೆಯ ಮಾಜಿ ಶಾಸಕರುಗಳಾದ ಕೆ.ಪಿ.ಪ್ರಭುಕುಮಾರ್, ಎ.ಎಸ್.ಬಸವರಾಜು, ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಿವಿಟಿ ಬಸವರಾಜು ಹಾಗೂ ಮುಖಂಡರುಗಳು ಮಾತನಾಡಿದರು.

ಕೊನೆಯದಾಗಿ ಬಿ.ಎಸ್.ಯಡಿಯೂರಪ್ಪನವರು ಸಭೆಯನ್ನುದ್ದೇಶಿಸಿ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ ಮತ್ತೆ ಜೋರಾದ ಮಳೆ ಪ್ರಾರಂಭವಾಯಿತು.  ಶಾಮಿಯಾನದಿಂದ ಮಳೆನೀರು ಕೆಳಗೆ ಬೀಳತೊಡಗಿದಾಗ ಜನರು ಅನಿವಾರ್ಯವಾಗಿ ಕುಳಿತ ಕುರ್ಚಿಯನ್ನೇ ತಲೆಯಮೇಲೆ ಹಿಡಿದು ಮಳೆಯಿಂದ ರಕ್ಷಣೆ ಪಡೆದರು. ವೇದಿಕೆಯ ಮೇಲಿದ್ದ ಗಣ್ಯರುಗಳೂ ಸಹ ಮಳೆಯಿಂದ ರಕ್ಷಣೆ ಪಡೆಯಲು ಹರಸಾಹಸ ಪಟ್ಟರು.  ಯಡಿಯೂರಪ್ಪನವರು ತಾವು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಯೋಜನೆಗಳು, ಅರಸೀಕೆರೆ ತಾಲ್ಲೂಕಿಗೆ ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿ, ಹಾಲಿ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಿದರು.

ಕಾರ್ಯಕ್ರಮದಲ್ಲಿ ಅರಸೀಕೆರೆ ನಗರ ಬಿಜೆಪಿ ಅಧ್ಯಕ್ಷ ಮನೋಜ್ ಕುಮಾರ್ ಸ್ವಾಗತಿಸಿದರು, ಬಿಜೆಪಿ ವಕ್ತಾರ ಎನ್.ಡಿ.ಪ್ರಸಾದ್ ನಿರೂಪಣೆ ಮಾಡಿದರು. ಸ್ಥಳೀಯ ಬಿಜೆಪಿ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ರಥಯಾತ್ರೆಯು ಅರಸೀಕೆರೆಯಿಂದ ಬಾಣಾವರ, ಜಾವಗಲ್ ಮಾರ್ಗವಾಗಿ ಹಳೇಬೀಡು ತಲುಪಿತು.

















Share:

ಶನಿವಾರ, ಸೆಪ್ಟೆಂಬರ್ 16, 2017

ಅರಸೀಕೆರೆ ಎಪಿಎಂಸಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ

Arsikere

ಬಹು ಕುತೂಹಲ ಮೂಡಿಸಿದ್ದ ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ಆಯ್ಕೆ ಜರುಗಿತು.  ಅಧ್ಯಕ್ಷರಾಗಿ ಕಣಕಟ್ಟೆ ಕ್ಷೇತ್ರದಿಂದ ಆಯ್ಕೆಯಾಗಿರುವ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಚಂದ್ರಶೇಖರ್ ಮತ್ತು ಉಪಾಧ್ಯಕ್ಷರಾಗಿ ಕುರುವಂಕ ಕ್ಷೇತ್ರದಿಂದ ಆಯ್ಕೆಯಾಗಿರುವ  ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಶಿಧರ ರವರು ಲಾಟರಿ ಮೂಲಕ ಆಯ್ಕೆಯಾದರು.

ಬೆಳಿಗ್ಗೆ ನಾಮಪತ್ರ ಸಲ್ಲಿಕೆ ನಡೆಯಿತು.  ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಚಂದ್ರಶೇಖರ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಉಂಡಿಗನಾಳು ದೇವರಾಜ್ ರವರು ನಾಮಪತ್ರ ಸಲ್ಲಿಸಿದರು.  ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅರ್ಭ್ಯರ್ಥಿ ಕೆಲ್ಲೆಂಗೆರೆ ಕುಮಾರ್ ಮತ್ತು ಬಿಜೆಪಿ ಬೆಂಬಲಿತ ಅರ್ಭ್ಯರ್ಥಿ ಶಶಿಧರ ರವರು ನಾಮಪತ್ರ ಸಲ್ಲಿಸಿದರು. ನಾಮಪತ್ರ ಪರಿಶೀಲನೆಯ ನಂತರ ಚುನಾವಣಾಧಿಕಾರಿಗಳಾದ ಹಾಸನ ಜಿಲ್ಲಾ ಉಪವಿಭಾಗಾಧಿಕಾರಿ ಡಾ|| ಹೆಚ್.ಎಲ್.ನಾಗರಾಜು ರವರು ಮತದಾನಕ್ಕೆ ಆದೇಶ ನೀಡಿದರು. 

16 ಸದಸ್ಯರ ಬಲಾಬಲ ಉಳ್ಳ ಅರಸೀಕೆರೆ ಎಪಿಎಂಸಿಯಲ್ಲಿ, ಜೆಡಿಎಸ್ ಬೆಂಬಲಿತ 8 ಸದಸ್ಯರು, ಕಾಂಗ್ರೆಸ್ ಬೆಂಬಲಿತ 7 ಸದಸ್ಯರು ಮತ್ತು ಒಬ್ಬರು ಬಿಜೆಪಿ ಬೆಂಬಲಿತ ಸದಸ್ಯರಿದ್ದರು.   ಚುನಾವಣೆಯಲ್ಲಿ 8 – 8 ಸಮಬಲದ ಮತದಾನವಾದ್ದರಿಂದ, ಚುನಾವಣಾಧಿಕಾರಿಗಳು ಆಯ್ಕೆ ಪ್ರಕ್ರಿಯೆಯನ್ನು ಚೀಟಿ ಎತ್ತುವುದರ ಮೂಲಕ ನಡೆಸುವಂತೆ ನಿರ್ದೇಶನ ನೀಡಿದರು.  ಲಾಟರಿ ಆಯ್ಕೆಯಲ್ಲಿ ಚಂದ್ರಶೇಖರ್ ರವರು ಅಧ್ಯಕ್ಷರಾಗಿ ಮತ್ತು ಶಶಿಧರ್ ರವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ್ ರವರನ್ನು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡರು ಅಭಿನಂದಿಸಿದರು. ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.


ಅರಸೀಕೆರೆ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ರವರಾದ ಎನ್.ವಿ.ನಟೇಶ್ ರವರು ಮತ್ತು ಎಪಿಎಂಸಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಚುನಾವಣೆಯ ಪ್ರಯುಕ್ತ ಎಪಿಎಂಸಿ ಕಚೇರಿಯ ಸುತ್ತಲೂ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.


ಅರಸೀಕೆರೆ ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಚಂದ್ರಶೇಖರ್

ಆರಸೀಕೆರೆ ಎಪಿಎಂಸಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶಶಿಧರ್


Share:

ಬುಧವಾರ, ಸೆಪ್ಟೆಂಬರ್ 6, 2017

ತೆಂಗು ಬೆಳೆಗಾರರಿಗೆ ಬರ ಪರಿಹಾರ ಒದಗಿಸಲು ಅರಸೀಕೆರೆ ಶಾಸಕರಿಂದ ಕೇಂದ್ರ ಕೃಷಿ ಸಚಿವರ ಭೇಟಿ

Arsikere



ಸತತ ಮೂರು ವರ್ಷಗಳಿಂದ ಸರಿಯಾಗಿ ಮಳೆಯಾಗದೇ ಬರಗಾಲದಿಂದ ಕಂಗೆಟ್ಟಿರುವ ತೆಂಗು ಮತ್ತು ಅಡಿಕೆ ಬೆಳೆಗಾರರಿಗೆ  2477.26 ಕೋಟಿ ರೂಪಾಯಿಗಳ ವಿಶೇಷ ಬರ ಪರಿಹಾರ ಘೋಷಿಸುವಂತೆ ಕೇಂದ್ರ ಸಚಿವರಿಗೆ ಇಂದು ಮನವಿ ಮಾಡಲಾಯಿತು.


ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಮತ್ತು ತೋಟಗಾರಿಕಾ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ರವರ ನೇತೃತ್ವದ ನಿಯೋಗ ಇಂದು ಕೇಂದ್ರ ಕೃಷಿ ಸಚಿವರಾದ ರಾಧಾ ಮೋಹನ ಸಿಂಗ್ ರವರನ್ನು ದೆಹಲಿಯ ಕೃಷಿ ಭವನದಲ್ಲಿ ಭೇಟಿ ಮಾಡಿ ಬರದಿಂದ ಹಾನಿಗೊಳಗಾಗಿರುವ ತೆಂಗು ಮತ್ತು ಅಡಿಕೆ ಬೆಳೆಗಾರರಿಗೆ 2477.22 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮನವಿ ಮಾಡಿದರು.  ಅರಸೀಕೆರೆ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ಮತ್ತು ಚನ್ನರಾಯಪಟ್ಟಣದ ಶಾಸಕರಾದ ಸಿ.ಎನ್.ಬಾಲಕೃಷ್ಣ ರವರು ನಿಯೋಗದಲ್ಲಿ ಇದ್ದರು.


Share:

ಶನಿವಾರ, ಆಗಸ್ಟ್ 12, 2017

ಅರಸೀಕೆರೆ ಎಪಿಎಂಸಿ ಚುನಾವಣಾ ಫಲಿತಾಂಶ

Arsikere


ಬಹು ಕುತೂಹಲ ಮೂಡಿಸಿದ್ದ ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣಾ ಫಲಿತಾಂಶ ಇಂದು ಪ್ರಕಟವಾಯಿತು.  ಬೆಳಿಗ್ಗೆ 8 ಗಂಟೆಗೆ ಪಟ್ಟಣದ ಸಂತ ಮರಿಯ ಪ್ರೌಢಶಾಲೆಯಲ್ಲಿ ಪ್ರಾರಂಭಗೊಂಡ ಮತ ಎಣಿಕೆಯು ಮಧ್ಯಾನ್ಹ 3 ಗಂಟೆಯ ಹೊತ್ತಿಗೆ ಮುಕ್ತಾಯವಾಯಿತು.

ತಾಲ್ಲೂಕಿನ ಮಾರುಕಟ್ಟೆ ಸಮಿತಿಯ ಒಟ್ಟು 13 ಸ್ಥಾನಗಳ ಪೈಕಿ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯು ಅವಿರೋಧವಾಗಿ ಆಯ್ಕೆಯಾದ್ದರಿಂದ 12 ಸ್ಥಾನಗಳಿಗೆ ದಿನಾಂಕ 10-08-2017 ರಂದು ಚುನಾವಣೆ ನಡೆದಿತ್ತು.

12 ಸ್ಥಾನಗಳ ಪೈಕಿ 7 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲಿಯಾದರೆ, 4 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರು. 1 ಸ್ಥಾನ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲವು ಪಡೆದರು.


ಚುನಾವಣೆಯ ಉಸ್ತುವಾರಿಯನ್ನು ಅರಸೀಕೆರೆ ತಾಲ್ಲೂಕು ದಂಡಾಧಿಕಾರಿಯವರು ವಹಿಸಿದ್ದರು. ಚುನಾವಣಾಧಿಕಾರಿಗಳಾಗಿ ಬಿಇಓ ನಟರಾಜ್ ರವರು ಕಾರ್ಯ ನಿರ್ವಹಿಸಿದರು.  ಅರಸೀಕೆರೆ ಪೊಲೀಸ್ ಉಪವಿಭಾಗಾಧಿಕಾರಿಗಳಾದ ದಶರಥ ಮೂರ್ತಿ ರವರ ನೇತೃತ್ವದಲ್ಲಿ ತಾಲ್ಲೂಕಿನಾದ್ಯಂತ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು.














Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....