ಬುಧವಾರ, ಜನವರಿ 17, 2018

ಸುಗ್ಗಿಯ ಸಂಭ್ರಮವನ್ನು ಕಣದಲ್ಲಿ ನೋಡಿ

ಸುಗ್ಗಿಯ ಸಂಭ್ರಮವನ್ನು ಕಣದಲ್ಲಿ ನೋಡಿ

ಅರಸೀಕೆರೆ ತಾಲ್ಲೂಕಿನಾದ್ಯಂತ ಕಳೆದ ವರ್ಷಾಂತ್ಯದಲ್ಲಿ ಆದ ಮಳೆಯಿಂದ ಈ ಬಾರಿ ಉತ್ತಮ ಬೆಳೆ ಬಂದಿದೆ. ಸಂಕ್ರಾಂತಿಯ ಈ ಸಮಯದಲ್ಲಿ ತಾಲ್ಲೂಕಿನಾದ್ಯಂತ ಕಣಗಳಲ್ಲಿ ಬಿಡುವಿಲ್ಲದ ಕೆಲಸ ನಡೆಯುತ್ತಿದೆ.

ಫಾಸ್ಟ್ ಫುಡ್ ಯುಗದಲ್ಲಿ ಬೆಳೆಯುತ್ತಿರುವ ಇಂದಿನ ಯುವ ಪೀಳಿಗೆಯ ಬಹುತೇಕ ಮಕ್ಕಳಿಗೆ ಆಹಾರ ಧಾನ್ಯಗಳು ಬೆಳೆಯುವ ರೀತಿ, ಬೆಳೆದ ಪೈರನ್ನು ಧಾನ್ಯವನ್ನಾಗಿಸುವ ಪ್ರಕ್ರಿಯೆ, ಕಣ ಪದ್ಧತಿಯಲ್ಲಿ ಬಳಸುವ ಬಣವೆ, ರೋಣಗಲ್ಲು, ಉತ್ತ್ರಾಣೆಬರ್ಲು, ಧಾನ್ಯ ತೂರಲು ಬಳಸುವ ಮೊರ, ಸಗಣಿಯಿಂದ ಸಾರಿಸಿದ ಒಕ್ಕಲು ಕಣ, ಧಾನ್ಯಗಳ ರಾಶಿ ಪೂಜೆ ಇತ್ಯಾದಿಗಳ ಬಗ್ಗೆ ಒಂದಿಷ್ಟೂ ಮಾಹಿತಿ ಇರುವುದಿಲ್ಲ. ಹಾಗಾಗಿ ಇವರುಗಳಿಗೆ ತಿನ್ನುವ ಆಹಾರದ ಬಗ್ಗೆ ಗೌರವದ ಭಾವನೆ ಇರುವುದಿಲ್ಲ. ಒಂದೊಂದು ಕಾಳು ಉತ್ಪಾದನೆ ಮಾಡಲು ರೈತರು ಪಡುವ ಪರಿಶ್ರಮವನ್ನು ಹತ್ತಿರದಿಂದ ನೋಡಿದರೆ ಸಾಕು, ಅವರು ಯಾವುದೇ ವಯೋಮಾನದವರಾಗಿರಲಿ ಮುಂದೆ ತಟ್ಟೆಯಲ್ಲಿ ಆಹಾರವನ್ನು ಖಂಡಿತವಾಗಿಯೂ ಚೆಲ್ಲುವುದಿಲ್ಲ.

ಅರಸೀಕೆರೆ ಪಟ್ಟಣದಲ್ಲಿ ವಾಸಿಸುವವರು ಸಾಧ್ಯವಾದರೆ ಪಟ್ಟಣದಿಂದ ಕೇವಲ ನಾಲ್ಕೈದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಕಣಗಳನ್ನು ತಮ್ಮ ಕುಟುಂಬ ಸಮೇತರಾಗಿ ನೋಡಿಕೊಂಡು ಬನ್ನಿ, ಅರಸೀಕೆರೆ ಕಸಬಾ ಹೋಬಳಿ ವ್ಯಾಪ್ತಿಯ ಬಹುತೇಕ ಎಲ್ಲ ಹಳ್ಳಿಗಳಲ್ಲೂ ಕಣದ ಕೆಲಸ ನಡೆಯುತ್ತಿದೆ. ಶಾಲಾ ಮುಖ್ಯಸ್ಥರೂ ಕೂಡ ತಮ್ಮ ವಿದ್ಯಾರ್ಥಿಗಳನ್ನು ಕಣಕ್ಕೆ ಕರೆದುಕೊಂಡು ಹೋಗಿ ಮಕ್ಕಳಿಗೆ ಬೇಸಾಯ ಪದ್ಧತಿ, ಆಹಾರದ ಮಹತ್ವವನ್ನು ತಿಳಿಸಿಕೊಡುವ ಕಾರ್ಯಕ್ರಮ ಮಾಡಬಹುದು.
ನೆನಪಿರಲಿ, ಕಣ ಎನ್ನುವುದು ಅತ್ಯಂತ ಪವಿತ್ರವಾದ ಜಾಗ. ಕಣವನ್ನು ಪ್ರವೇಶಿಸುವಾಗ ಕೆಲವೊಂದು ನಿಬಂಧನೆಗಳಿವೆ, ಅವುಗಳನ್ನು ಗೌರವದಿಂದ ಪಾಲಿಸಿ.

ಕಣವನ್ನು ಪ್ರವೇಶಿಸುವಾಗ ಚಪ್ಪಲಿ ಧರಿಸಬೇಡಿ, ಕಣದಲ್ಲಿ ಧೂಮಪಾನ, ಎಲೆಅಡಿಕೆ ಮೊದಲಾದ ಪದಾರ್ಥಗಳನ್ನು ತಿನ್ನಬಾರದು, ಕಣದಲ್ಲಿ ಕೈಕಟ್ಟಿ ನಿಲ್ಲಬಾರದು ಅಲ್ಲದೇ ಮಹಿಳೆಯರು ಕೆಲವೊಂದು ಸಮಯಗಳಲ್ಲಿ ಕಣದೊಳಗೆ ಪ್ರವೇಶಿಸಬಾರದು, ಇತ್ಯಾದಿ ನಿಯಮಗಳು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿವೆ. ಇಂದಿನ ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದರೂ ಈ ಪದ್ಧತಿಗಳು ಆಹಾರದ ಶುಚಿತ್ವಕ್ಕೆ ಅಂದಿನವರು ಅನುಸರಿಸಿದ ಕ್ರಮಗಳು ಎಂದು ತಿಳಿಯುತ್ತದೆ.

"ಕಣ ಪದ್ಧತಿ ಮುಂದಿನ ಪೀಳಿಗೆಗೆ ತಿಳಿಯಲಿ"

ಧನ್ಯವಾದಗಳು
ಶ್ರೀರಾಮ ಜಮದಗ್ನಿ
ಅರಸೀಕೆರೆ.








Share:

ಸೋಮವಾರ, ಜನವರಿ 15, 2018

ರೈತರ ಬಾಳಲ್ಲಿ ಸಿಹಿ ತರಲಿ ಈ ಸಂಕ್ರಾಂತಿ

ರೈತರ ಬಾಳಲ್ಲಿ ಸಿಹಿ ತರಲಿ ಈ ಸಂಕ್ರಾಂತಿ

ಕಳೆದ ಎರಡು ಮೂರು ವರ್ಷಗ ಭೀಕರ ಬರಗಾಲದಿಂದ ಮಳೆ-ಬೆಳೆ ಇಲ್ಲದೇ, ಜಾನುವಾರುಗಳಿಗೆ ಮೇವು ಹಾಗೂ ಮನುಷ್ಯರಿಗೂ ಕುಡಿಯುವ ನೀರಿಲ್ಲದೇ ತತ್ತರಿಸಿದ್ದ ಅರಸೀಕೆರೆ ತಾಲ್ಲೂಕಿನ ರೈತಾಪಿ ವರ್ಗದವರಿಗೆ ಈ ವರ್ಷದ ಆರಂಭ ಸ್ವಲ್ಪ ನೆಮ್ಮದಿಯನ್ನು ನೀಡಿದೆ. ಕಳೆದ ವರ್ಷಾಂತ್ಯದಲ್ಲಿ ಬಂದ ಸಾಧಾರಣ ಮಳೆಯಿಂದಾಗಿ ನಮ್ಮ ತಾಲ್ಲೂಕಿನ ಪ್ರಮುಖ ಬೆಳೆಯಾದ ರಾಗಿಯು ಉತ್ತಮ ಇಳುವರಿಯಾಗಿದ್ದು ರೈತರಲ್ಲಿ ಮಂದಹಾಸ ಮೂಡಿಸಿದೆ.

ಕಳೆದ ವರ್ಷ ನಮ್ಮ ತಾಲ್ಲೂಕಿನ ರೈತರು ಅನುಭವಿಸಿದ ಸಂಕಷ್ಟವನ್ನು ಹೇಳಲು ಅಸಾಧ್ಯ. ತಾವು ಸಾಕಿದ ಜಾನುವಾರುಗಳಿಗೆ ಮೇವು ನೀಡಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಮೇವು ಬ್ಯಾಂಕ್ ಗಳಿಗೆ ಹೋಗಿ ಹೊರೆ ಹುಲ್ಲನ್ನು ತಂದಿದ್ದು, ಜಾನುವಾರುಗಳಿಗೆ ನೀರೊದಗಿಸಲು ಸಾಧ್ಯವಾಗದೇ ಇದ್ದಾಗ, ತಾಲ್ಲೂಕಿನಾದ್ಯಂತ ಸರ್ಕಾರದಿಂದ ಪ್ರಾರಂಭಗೊಂಡಿದ್ದ ಗೋಶಾಲೆಗಳಿಗೆ ಕರೆದೊಯ್ದು ಅಲ್ಲಿಯೇ ಜಾನುವಾರುಗಳ ಜೊತೆ ವಾಸ ಮಾಡಿದ್ದು. ಗೋಶಾಲೆಯಲ್ಲಿ ಜಾನುವಾರುಗಳಿಗೆ ಮಾರಕ ಸಾಂಕ್ರಾಮಿಕ ರೋಗವಾದ ಕಾಲುಬಾಯಿ ಜ್ವರ ಕಂಡ ಹಿನ್ನೆಲೆಯಲ್ಲಿ ಗೋಶಾಲೆಗಳನ್ನು ಮುಚ್ಚಿದ ನಂತರ ಮತ್ತೆ ಜಾನುವಾರುಗಳನ್ನು ತಮ್ಮ ತಮ್ಮ ಸ್ಥಳಕ್ಕೆ ಕರೆದೊಯ್ದು ಅವುಗಳ ಆರೈಕೆ ಮಾಡಿದ್ದು. ಹೀಗೆ ಒಂದೇ ಎರಡೇ... ಈ ನಮ್ಮ ರೈತರು ಅನುಭವಿಸಿದ ಯಾತನೆ. ಈ ನಡುವೆ, ಅಂತರ್ಜಲ ಕುಸಿತದಿಂದಾಗಿ ತೋಟಗಳಲ್ಲಿ ಬೆಳದು ನಿಂತಿದ್ದ ಫಲಕೊಡುವ ಲಕ್ಷಾಂತರ ತೆಂಗಿನ ಮರಗಳು ತಾಲ್ಲೂಕಿನಾದ್ಯಂತ ಸುಳಿಬಿದ್ದು ನೆಲಕಚ್ಚಿದವು. ಅತ್ತದರಿ ಇತ್ತ ಪುಲಿ ಎಂಬ ಮಾತಿನಂತೆ, ಒಂದೆಡೆ ಕೃಷಿಯಿಂದಲೂ ಆದಾಯವಿಲ್ಲ ಜಾನುವಾರುಗಳ ಹಾಲು ಮಾರಿ ಜೀವನ ನಡೆಸೋಣವೆಂದರೆ, ಈ ಜಾನುವಾರುಗಳಿಗೇ ನೀರು ಮೇವಿಲ್ಲದಂತಹ ಪರಿಸ್ಥಿತಿ.

ಇಷ್ಟಾದರೂ ಛಲಬಿಡದ ತ್ರಿವಿಕ್ರಮನಂತೆ ಮತ್ತೆ ಕೃಷಿ ಕಾಯಕದಲ್ಲಿ ತೊಡಗಿದ ನಮ್ಮ ರೈತರಿಗೆ ಕಳೆದ ವರ್ಷಾಂತ್ಯದಲ್ಲಿ ಮಳೆಯು ವರವಾಗಿ ಬಂದಿತು. ಬಹುತೇಕ ಎಲ್ಲ ಕೃಷಿಕರು ಬಿತ್ತನೆ ಮಾಡಿದ್ದ ಪೈರುಗಳು ಹುಲುಸಾಗಿ ಬೆಳೆದು ಉತ್ತಮ ಫಸಲು ಬಂದಿತು. ಜಾನುವಾರುಗಳನ್ನು ಸಾಕಿದ್ದವರು ಹಿಂದೆ ಅನುಭವಿಸಿದ್ದ ಘಟನೆಯಿಂದಾಗಿ ಪಾಠ ಕಲಿತಂತಾಗಿ, ಈಗ ಬಂದಿರುವ ರಾಗಿ, ಜೋಳದ ಹುಲ್ಲನ್ನು ಮೇವಿಗಾಗಿ ಶೇಖರಿಸಿಟ್ಟಿರುವುದು ಎಲ್ಲೆಡೆ ಕಾಣಬಹುದು.

ಸಂಕ್ರಾತಿ ಹಬ್ಬವು ರೈತರಿಗೆ ಸಂತೋಷ ನೀಡುವ ಹಬ್ಬ. ಈ ಸಮಯದಲ್ಲಿ ಜಮೀನಿನಲ್ಲಿ ಬೇಳೆ ಕಾಳುಗಳ ಪೈರು ಬಂದಿದ್ದು, ಅವುಗಳನ್ನು ಕಟಾವು ಮಾಡಿ, ಕಣವನ್ನು ನಿರ್ಮಿಸಿ, ಕುಯ್ದ ಫಸಲನ್ನು ಹಸನುಮಾಡಿ ಧಾನ್ಯವನ್ನಾಗಿಸುವ ಪ್ರಕ್ರಿಯೆ ಈ ಸಂಕ್ರಾತಿಯ ಸಮಯದಲ್ಲಿ ನಡೆಯುತ್ತದೆ.

ಸೂರ್ಯನು ತನ್ನ ಪಥವನ್ನು ಇವತ್ತಿನಿಂದ ಬದಲಾಯಿಸುವಂತೆ, ನಮ್ಮ ತಾಲ್ಲೂಕಿನ ರೈತರ ಸಂಕಷ್ಟಗಳೂ ಸಹ ಇಂದಿನಿಂದ ಕೊನೆಗೊಂಡು, ಮುಂಬರುವ ದಿನಗಳಲ್ಲಿ ನಮ್ಮ ತಾಲ್ಲೂಕಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ರೈತರ ಮೊಗದಲ್ಲಿ ಸಂತಸ ತರಲಿ ಎಂದು ಪ್ರಾರ್ಥಿಸೋಣ.

ಅರಸೀಕೆರೆ ತಾಲ್ಲೂಕಿನ ಜಾಜೂರು ಗ್ರಾಮದ ಕಣವೊಂದರಲ್ಲಿ ನೆನ್ನೆ ರಾಗಿಯನ್ನು ತೂರುತ್ತಿದ್ದ ರೈತರನ್ನು ಭೇಟಿ ಮಾಡಿದೆ. ಉತ್ತಮ ಬೆಳೆಯಾಗಿರುವುದಕ್ಕೆ ಅವರೆಲ್ಲರೂ ಸಂತಸದಿಂದಿದ್ದರು. ದೇವರ ಕೃಪೆಯಿಂದ ತಾವು ಬೆಳೆದ ರಾಗಿ ಮೊದಲಾದ ಬೆಳೆಗೆ ಉತ್ತಮ ದರ ಸಿಕ್ಕರೆ ಮತ್ತಷ್ಟು ಅನುಕೂಲವಾಗುತ್ತದೆ ಎಂದರು.

"ಸಂಕ್ರಾಂತಿಯ ಸಿಹಿ ನಾಡಿನ ಎಲ್ಲ ರೈತಬಾಂಧವರಿಗೆ ದೊರೆಯಲಿ" ಎಂದು ಹಾರೈಸುತ್ತೇನೆ.

ವಂದನೆಗಳೊಂದಿಗೆ
ಶ್ರೀರಾಮ ಜಮದಗ್ನಿ
ಅರಸೀಕೆರೆ



Share:

ಭಾನುವಾರ, ಜನವರಿ 14, 2018

ಅರಸೀಕೆರೆಯಲ್ಲಿ ಜಾನಪದ ಸಿರಿ ಸಂಭ್ರಮ

ಜಾನಪದ ಸಿರಿ ಸಂಭ್ರಮ


ಅರಸೀಕೆರೆಯ ಸಾಧು ವೀರಶೈವ ಸಮಾಜ, ತರಳಬಾಳು ಯುವ ವೇದಿಕೆ, ಶಿವಕುಮಾರ ಬಳಗ ಹಾಗೂ ತರಳಬಾಳು ನೌಕರರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ, ಜಾನಪದ ಕಲಾ ಪ್ರಾಕಾರಗಳನ್ನು ಪರಿಚಯಿಸುವ ಜಾನಪದ ಸಿರಿ ಸಂಭ್ರಮವು ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿರುವ ಶ್ರೀ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ದಿನಾಂಕ 13-01-2018, ಶನಿವಾರ ಸಂಜೆ ಜರುಗಿತು.

ಜನಪದರ ಸಂಸ್ಕೃತಿಯ ಪ್ರತಿ ಹೆಜ್ಜೆಯಲ್ಲೂ ಜನಪದ ಕಲೆಗಳು ಹಾಸುಹೊಕ್ಕಾಗಿವೆ.  ತಮ್ಮ ದಿನನಿತ್ಯದ ದುಡಿಮೆಯಲ್ಲಿನ ಆಯಾಸ, ಬದುಕಿನ ಏಕಾನತೆ, ಬೇಸರಿಕೆ ಹೋಗಲಾಡಿಸಲು ಮನುಷ್ಯ ಕಲೆಯ ಮೊರೆಹೊಕ್ಕ.  ಕಾಲಗತಿಯಲ್ಲಿ ಮೂಲ ಜನಪದ ಕಲೆಗಳು ಮರೆಯಾಗಿ ಅವುಗಳು ಕೇವಲ ಯಾಂತ್ರಿಕ ಪ್ರದರ್ಶನಗಳಾಗಿವೆ.  ಇಂತಹ ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಸಿರಿಗೆರೆಯ ತರಳಬಾಳು ಕಲಾ ಸಂಘವು ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಜಾನಪದ ಸಿರಿ ಸಂಭ್ರಮವನ್ನು ನಾಡಿನಾದ್ಯಂತ ಪ್ರದರ್ಶನ ನೀಡುತ್ತಿದೆ.

ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿವಿಧ ವಯೋಮಾನದ 350ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯ ಸಮಯದಲ್ಲಿ ಸಿರಿಗೆರೆಯ ತರಳಬಾಳು ಕಲಾಸಂಘದಲ್ಲಿ ವಿಶೇಷ ಶಿಬಿರವನ್ನು ಏರ್ಪಡಿಸಿ, 15ಕ್ಕೂ ಅಧಿಕ ಜಾನಪದ ಕಲಾ ಪ್ರಾಕಾರಗಳನ್ನು ಅವುಗಳ ಮೂಲ ಕಲಾವಿದರುಗಳಿಂದ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗಿದೆ.

ಅರಸೀಕೆರೆಯಲ್ಲಿ ಶನಿವಾರದಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ನಮ್ಮ ರಾಜ್ಯದ ಪ್ರಮುಖ ಜಾನಪದ ಕಲಾ ಪ್ರಾಕಾರಗಳಾದ ದೇವರ ಗುಡ್ಡರು ಹಾಡುವ ಮಲೆಮಾದೇಶ್ವರನ ಬೀಸು ಕಂಸಾಳೆ ನೃತ್ಯ, ಶಕ್ತಿದೇವತೆಯ ಆರಾಧನೆಯ ಸಂಕೇತವಾದ ಪೂಜಾ ಕುಣಿತ, ಮೈಸೂರು ಪ್ರಾಂತ್ಯದ ಪಟಾ ಕುಣಿತ, ತುಳುನಾಡಿನ ಗೊಡ್ಡ ಜನಾಂಗದ ಸಾಂಪ್ರದಾಯಕ ಆಚರೆಣೆಯಾದ ಕಂಗೀಲು ನೃತ್ಯ, ಕೊಡಗಿನ ಪಾರಂಪರಿಕ ಉಮ್ಮತ್ತಾಟ್ ನೃತ್ಯ, ಉಡುಪಿ ಜಿಲ್ಲೆಯ ಕುಡುಬಿ ಜನಾಂಗದವರ ಕುಲದೇವತೆಯಾದ ಚಂಡಿಕಾ ದೇವಿ ಮಾರಿಯಮ್ಮ ಹಾಗೂ ಯಲ್ಲಮ್ಮನ ಪೂಜಿಸುವ ಕರಗ ಕೋಲಾಟ, ಚಾಮರಾಜನಗರದ ಸೋಲಿಗರ ನೃತ್ಯ,  ಮಧ್ಯಕರ್ನಾಟಕದ ವಿಶಿಷ್ಠ ಕಲೆಯಾದ ಶೈವ ಸಂಪ್ರದಾಯದ ವೀರಗಾಸೆ ನೃತ್ಯ, ಹಾಲುಮತ ಸಮುದಾಯದ ಆರಾಧ್ಯದೈವ ಬೀರಪ್ಪನ ಭಕ್ತರ ಡೊಳ್ಳು ಕುಣಿತ, ಲಂಬಾಣಿ ಜನಾಂಗದ ವರ್ಣರಂಜಿತ ಲಂಬಾಣಿ ನೃತ್ಯ, ಭಾರತದ ಪ್ರಾಚೀನ ಕ್ರೀಡೆಗಳಲ್ಲಿ ಒಂದಾದ ಪ್ರೇಕ್ಷಕರ ಮೈನವಿರೇಳಿಸುವ ಮಲ್ಲಕಂಬ ಹಾಗೂ ಮಲ್ಲಿಹಗ್ಗ ಮೊದಲಾದ ಜಾನಪದ ಕಲೆಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.  ಕಿಕ್ಕಿರಿದು ತುಂಬಿದ್ದ ಕಲಾಭಿಮಾನಿಗಳು ವಿದ್ಯಾರ್ಥಿಗಳ ಕಲಾ ನೈಪುಣ್ಯತೆಗೆ ಮನಸೋತರು.




















Share:

ಶುಕ್ರವಾರ, ಜನವರಿ 5, 2018

ಶಾಲಾ ಶತಮಾನೋತ್ಸವ

ಶಾಲಾ ಶತಮಾನೋತ್ಸವ ಸಮಾರಂಭ

ಅರಸೀಕೆರೆ ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ (ರಾಮಣ್ಣ ಸ್ಕೂಲ್) ಇದೀಗ ಶತಮಾನೋತ್ಸವದ ಸಂಭ್ರಮ.

28 ಸೆಪ್ಟೆಂಬರ್ 1917 ರಂದು ಹಾಸನದ ಅಂದಿನ ಡೆಪ್ಯೂಟಿ ಕಮಿಷನರ್ ರವರಾಗಿದ್ದ ಜಿ.ವೆಂಕಟ ರಾವ್ Esq ರವರು ಶಾಲೆಯ ಪ್ರಾರಂಭೋತ್ಸವದ ಶಿಲಾನ್ಯಾಸವನ್ನು ನೆರವೇರಿಸಿದ್ದರು. ಈ ಶಾಲೆಯ ಕಟ್ಟಡವನ್ನು ಮರುಳಸಿದ್ದಪ್ಪ ಮತ್ತು ರುದ್ರಪ್ಪ ಎನ್ನುವರು ದಾನವಾಗಿ ನೀಡಿದ್ದರು ಎಂದು ತಿಳಿಸುವ ಶಿಲಾಫಲಕ ಇಂದಿಗೂ ಶಾಲೆಯ ಆವರಣದಲ್ಲಿದೆ.

Esq : ಕುರಿತು ಕಿರು ಮಾಹಿತಿ
ಅಂದಿನ ಬ್ರಿಟಿಷ್ ಆಳ್ವಿಕೆಯಲ್ಲಿ ಸರ್ಕಾರದ ಹಿರಿಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವರಿಗೆ ಗೌರವ ಸೂಚಕವಾಗಿ Esq (Esquire) ಇಸ್ಕ್ವೈರ್ ಎಂಬ ಪದನಾಮ ಬಳಸಲಾಗುತ್ತಿತ್ತು.  ಈ ಪದನಾಮ ಹೊಂದಲು ಅವರು ಇಂಗ್ಲೇಂಡಿನ ಆಕ್ಸ್ ಫರ್ಡ್, ಕೇಂಬ್ರಿಂಜ್ ಅಥವಾ ಲಂಡನ್ ಯೂನಿವರ್ಸಿಟಿಗಳಲ್ಲಿ ವ್ಯಾಸಂಗ ಮಾಡಿರಬೇಕಿತ್ತು. ಇಲ್ಲವೇ ಲಂಡನ್ನಿನಲ್ಲಿ ಬ್ಯಾರಿಸ್ಟರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಬೇಕಿತ್ತು. 

ಅಂದರೆ, ಈ ಶಾಲೆಯ ಶಿಲಾನ್ಯಾಸವನ್ನು ಮಾಡಿದ್ದಂತಹ ವ್ಯಕ್ತಿ ಅಂದಿನ ಕಾಲಕ್ಕೆ ಅತ್ಯಂತ ಮೇಧಾವಿ ಹಾಗೂ ಪ್ರಭಾವಶಾಲಿ ವ್ಯಕ್ತಿಯೇ ಆಗಿದ್ದರು.  ಬ್ರಿಟಿಷರ ಆಳ್ವಿಕೆಯ ಸಮಯದಲ್ಲೇ ಹಾಸನ ಜಿಲ್ಲೆಯ ಡೆಪ್ಯೂಟಿ ಕಮಿಷನ್ ಆಗಿದ್ದರು ಎಂದರೆ ಅವತ್ತಿನ ಅವರ ವರ್ಚಸ್ಸು ಹೇಗಿರಬಹುದೆಂದು ಊಹಿಸಿಕೊಳ್ಳಬಹುದು.  ಇಂತಹ ಘನತೆವೆತ್ತ ವ್ಯಕ್ತಿಯಿಂದ ಪ್ರಾರಂಭಗೊಂಡ ಶಾಲೆಯು ಇಂದು ಶತಮಾನದ ಸಂಭ್ರಮಕ್ಕೆ ಅಣಿಯಾಗಿದೆ.

ಕಳೆದ ಒಂದು ನೂರು ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ.  ಇವರೆಲ್ಲರೂ ಸಂಭ್ರಮಿಸುವ ಸಂದರ್ಭ ಇದೀಗ ಬಂದಿದೆ.

ದಿನಾಂಕ 06-01-2018, ಶನಿವಾರ, ಅಂದರೆ ನಾಳೆ ಸಂಜೆ 4 ಗಂಟೆಗೆ ಶಾಲೆಯ ಆವರಣದಲ್ಲಿ ಶತಮಾನೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.  ಕಾರ್ಯಕ್ರಮದಲ್ಲಿ ಭಾರತದ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ.ಹೆಚ್.ಡಿ.ದೇವೇಗೌಡರು, ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ಎ.ಮಂಜುರವರು, ಅರಸೀಕೆರೆ ಕ್ಷೇತ್ರದ ಶಾಸಕರಾದ ಶ್ರೀ. ಕೆ.ಎಂ.ಶಿವಲಿಂಗೇಗೌಡರು ಸೇರಿದಂತೆ ಅನೇಕ ಗಣ್ಯವ್ಯಕ್ತಿಗಳು ಮತ್ತು ಈ ಶಾಲೆಯಲ್ಲಿ ವ್ಯಾಸಂಗ ಮಾಡಿದಂತಹ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಖಾಸಗಿ ಶಾಲೆಗಳ ಅಬ್ಬರದಲ್ಲಿ ಇಂದಿಗೂ ಉತ್ತಮ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೊಂದಿ, ಶತಮಾನ ಪೂರೈಸಿದ ನಮ್ಮೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ.

ವಂದನೆಗಳೊಂದಿಗೆ,

ಇದೇ ಶಾಲೆಯಲ್ಲಿ 1982 ರಿಂದ 1989 ರವರೆಗೆ ವ್ಯಾಸಂಗ ಮಾಡಿದ ಹೆಮ್ಮೆಯ ವಿದ್ಯಾರ್ಥಿ

ಶ್ರೀರಾಮ ಜಮದಗ್ನಿ
ಅರಸೀಕೆರೆ.









Share:

ಗುರುವಾರ, ಜನವರಿ 4, 2018

ಅರಸೀಕೆರೆಯಲ್ಲಿ ಮುಖ್ಯಮಂತ್ರಿಗಳಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ

ಅರಸೀಕೆರೆಯಲ್ಲಿ ಮುಖ್ಯಮಂತ್ರಿಗಳಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಿಗ್ಗೆ ಅರಸೀಕೆರೆ ತಾಲ್ಲೂನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಯೋಜನೆಗಳಡಿ ನೆರವು ಪಡೆಯಲಿರುವ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದರು.

ಇಂದು ಬೆಳಗ್ಗೆ 11.45 ಕ್ಕೆ ಹೆಲಿಕಾಪ್ಟರಿನಲ್ಲಿ ಅರಸೀಕೆರೆ ಜೇನುಕಲ್ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್ ಗೆ ಆಗಮಿಸದ ಮುಖ್ಯಮಂತ್ರಿಗಳಿಗೆ ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಗೌರವ ಸಮರ್ಪಣೆ ನೀಡಲಾಯಿತು.   ನಂತರ, ಪಟ್ಟಣದ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ, ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಎ.ಮಂಜು, ಅರಸೀಕೆರೆ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

















Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....