ಸೋಮವಾರ, ನವೆಂಬರ್ 20, 2017

ಅರಸೀಕೆರೆ ಬಳಿ ಭೀಕರ ರಸ್ತೆ ಅಪಘಾತ - 40 ಜನರಿಗೆ ಗಾಯ

Arsikere


ಅರಸೀಕೆರೆ ತಾಲ್ಲೂಕು ಕಸಬಾ ಹೋಬಳಿ ಮೈಲನಹಳ್ಳಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಭಾನುವಾರ ತಡರಾತ್ರಿ ಬಸ್ ಮತ್ತು ಲಾರಿಯ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಚಾಲಕರು ಸೇರಿದಂತೆ 40 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಬೆಂಗಳೂರಿನಿಂದ  ಸಿಮೆಂಟ್ ಚೀಲಗಳನ್ನು ಕೊಂಡೊಯ್ಯುತ್ತಿದ್ದ ಕೊಂಡೊಯ್ಯುತ್ತಿದ್ದ ಲಾರಿಯ ನಡುವೆ ಮೈಲನ ಹಳ್ಳಿ ಗ್ರಾಮದ ಬಳಿ ಇರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯ ತಿರುವಿನಲ್ಲಿ ಅಪಘಾತವಾಗಿದೆ.  ಅಪಘಾತದ ತೀವ್ರತೆಗೆ ಲಾರಿ ಮತ್ತು ಬಸ್ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಗಾಯಗೊಂಡ ಕೆಲವರಿಗೆ ತಿಪಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೆ ಕೆಲವರಿಗೆ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗಳಿಗೆ ಕಳಿಸಿಕೊಡಲಾಗಿದೆ. ಅಪಘಾತದ ಪರಿಣಾಮ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಕೆಲವು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.  ಅರಸೀಕೆರೆ ಮತ್ತು ತಿಪಟೂರು ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.  ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರಮಾಹಿತಿ : ಪೊಲೀಸ್ ಇಲಾಖೆ





Share:

ಗುರುವಾರ, ನವೆಂಬರ್ 16, 2017

ಅರಸೀಕೆರೆಯಲ್ಲಿ ಮುಂಜಾನೆಯ ಮಂಜು



ಅರಸೀಕೆರೆ ಪಟ್ಟಣದಲ್ಲಿ ಗುರುವಾರ ಮುಂಜಾನೆ ದಟ್ಟವಾದ ಮಂಜು ಕವಿದು ನೋಡಲು ಮಲೆನಾಡಿನಂತೆ ಕಾಣುತ್ತಿತ್ತು.  ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾದ ಮಂಜು ನೋಡನೋಡುತ್ತಿದ್ದಂತೆ ದಟ್ಟವಾಗತೊಡಗಿತು.   8 ಗಂಟೆಯ ಹೊತ್ತಿಗೆ ಮಂಜು ಸಂಪೂರ್ಣ ಕರಗಿಹೋಯಿತು.







Share:

ಸೋಮವಾರ, ನವೆಂಬರ್ 6, 2017

ಅರಸೀಕೆರೆಯಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ

"ಪರಿವರ್ತನಾ ಯಾತ್ರೆ"


ನವ ಕರ್ನಾಟಕದ ನಿರ್ಮಾಣಕ್ಕಾಗಿ ಭಾರತೀಯ ಜನತಾ ಪಕ್ಷವು ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಯು ಇಂದು ಬೆಳಿಗ್ಗೆ ಅರಸೀಕೆರೆಗೆ ಆಗಮಿಸಿತು. ಮಾಜಿ ಮುಖ್ಯಮಂತ್ರಿ ಶ್ರೀ.ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಆಗಮಿಸಿದ ಈ ರಥಯಾತ್ರೆಯು ಅರಸೀಕೆರೆಗೆ ಬರುವ ಹೊತ್ತಿಗೆ ಪಟ್ಟಣದಲ್ಲಿ ಜೋರಾದ ಮಳೆ ಬರುತ್ತಿತ್ತು.  ನೂರಾರು ಕಾರ್ಯಕರ್ತರುಗಳು ಮಳೆಯನ್ನು ಲೆಕ್ಕಿಸದೇ ರಥಯಾತ್ರೆಯ ಜೊತೆ ಬೈಕ್ ರಾಲಿಯಲ್ಲಿ ಪಾಲ್ಗೊಂಡರು.  ರಥಯಾತ್ರೆಗೆಂದೇ ನಿರ್ಮಿಸಿರುವ ವಾಹನದಲ್ಲಿ ಮಾಜಿ ಸಚಿವರಾದ ವಿ.ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆಯವರು ಉಪಸ್ಥಿತರಿದ್ದರು.

ಪಟ್ಟಣದ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಗೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪನವರು, ಇಂದು "ಕನಕ ಜಯಂತಿ" ಇದ್ದದ್ದರಿಂದ, ಮೊದಲಿಗೆ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ವೇದಿಕೆಯನ್ನೇರಿದರು. ಈ ಸಮಯದಲ್ಲಿ ಸ್ವಲ್ಪ ಹೊತ್ತು ಮಳೆ ನಿಂತಿದ್ದರಿಂದ ಕಾರ್ಯಕ್ರಮ ಸುಗಮವಾಗಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾಜಿ ಸಂಸದೆ ತೇಜಸ್ವಿನಿ ರಮೇಶ್, ಮಾಜಿ ಸಚಿವರಾದ ಶ್ರೀರಾಮುಲು, ವಿ.ಸೋಮಣ್ಣ, ಅರಸೀಕೆರೆಯ ಮಾಜಿ ಶಾಸಕರುಗಳಾದ ಕೆ.ಪಿ.ಪ್ರಭುಕುಮಾರ್, ಎ.ಎಸ್.ಬಸವರಾಜು, ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಿವಿಟಿ ಬಸವರಾಜು ಹಾಗೂ ಮುಖಂಡರುಗಳು ಮಾತನಾಡಿದರು.

ಕೊನೆಯದಾಗಿ ಬಿ.ಎಸ್.ಯಡಿಯೂರಪ್ಪನವರು ಸಭೆಯನ್ನುದ್ದೇಶಿಸಿ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ ಮತ್ತೆ ಜೋರಾದ ಮಳೆ ಪ್ರಾರಂಭವಾಯಿತು.  ಶಾಮಿಯಾನದಿಂದ ಮಳೆನೀರು ಕೆಳಗೆ ಬೀಳತೊಡಗಿದಾಗ ಜನರು ಅನಿವಾರ್ಯವಾಗಿ ಕುಳಿತ ಕುರ್ಚಿಯನ್ನೇ ತಲೆಯಮೇಲೆ ಹಿಡಿದು ಮಳೆಯಿಂದ ರಕ್ಷಣೆ ಪಡೆದರು. ವೇದಿಕೆಯ ಮೇಲಿದ್ದ ಗಣ್ಯರುಗಳೂ ಸಹ ಮಳೆಯಿಂದ ರಕ್ಷಣೆ ಪಡೆಯಲು ಹರಸಾಹಸ ಪಟ್ಟರು.  ಯಡಿಯೂರಪ್ಪನವರು ತಾವು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಯೋಜನೆಗಳು, ಅರಸೀಕೆರೆ ತಾಲ್ಲೂಕಿಗೆ ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿ, ಹಾಲಿ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಿದರು.

ಕಾರ್ಯಕ್ರಮದಲ್ಲಿ ಅರಸೀಕೆರೆ ನಗರ ಬಿಜೆಪಿ ಅಧ್ಯಕ್ಷ ಮನೋಜ್ ಕುಮಾರ್ ಸ್ವಾಗತಿಸಿದರು, ಬಿಜೆಪಿ ವಕ್ತಾರ ಎನ್.ಡಿ.ಪ್ರಸಾದ್ ನಿರೂಪಣೆ ಮಾಡಿದರು. ಸ್ಥಳೀಯ ಬಿಜೆಪಿ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ರಥಯಾತ್ರೆಯು ಅರಸೀಕೆರೆಯಿಂದ ಬಾಣಾವರ, ಜಾವಗಲ್ ಮಾರ್ಗವಾಗಿ ಹಳೇಬೀಡು ತಲುಪಿತು.

















Share:

ಬುಧವಾರ, ನವೆಂಬರ್ 1, 2017

ಅರಸೀಕೆರೆಯಲ್ಲಿ ೬೨ನೇ ಕನ್ನಡ ರಾಜ್ಯೋತ್ಸವ

ಅರಸೀಕೆರೆಯಲ್ಲಿ ೬೨ನೇ ಕನ್ನಡ ರಾಜ್ಯೋತ್ಸವ

ಅರಸೀಕೆರೆ ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿರುವ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಇಂದು ಕನ್ನಡ ರಾಜ್ಯೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಅರಸೀಕೆರೆ ತಹಶೀಲ್ದಾರ್ ಶ್ರೀ ಎನ್.ವಿ.ನಟೇಶ್ ರವರು ರಾಷ್ಟ್ರಧ್ವಜಾರೋಹಣ ನಡೆಸಿದರು. ನಂತರ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ಕನ್ನಡ ಧ್ವಜಾರೋಹಣ ನಡೆಸಿದರು. ಪಟ್ಟಣದ ಸಂತ ಮರಿಯ ಪ್ರೌಢಶಾಲಾ ಮಕ್ಕಳು ರಾಷ್ಟ್ರಗೀತೆ, ಧ್ವಜಗೀತೆ, ನಾಡಗೀತೆ ಮತ್ತು ರೈತಗೀತೆಯನ್ನು ಹಾಡಿದರು.  ಪಟ್ಟಣದ ವಿವಿಧ ಶಾಲೆಗಳ ಮಕ್ಕಳುಗಳಿಂದ ಆಕರ್ಶಕ ಪಥಸಂಚಲನ ನಡೆಯಿತು. ಸಭೆಯನ್ನುದ್ದೇಶಿಸಿ ತಹಶೀಲ್ದಾರ್, ನಗರಸಭಾ ಅಧ್ಯಕ್ಷ ಎಂ.ಸಮೀಉಲ್ಲಾ ಮತ್ತು ಶಾಸಕ ಕೆ.ಎಂ.ಶಿವಲಿಂಗೇಗೌಡರು ಮಾತನಾಡಿದರು.

ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆ ಪತ್ರಿಕೆಯಲ್ಲಿ ತಾಲ್ಲೂಕಿಗೆ ಅತಿಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪುರಸ್ಕಾರ ಮಾಡಲಾಯಿತು. ವಿವಿಧ ಇಲಾಖೆಗಳಲ್ಲಿ ಉತ್ತಮ ಸಾಧನೆ ತೋರಿದವರಿಗೆ ಸನ್ಮಾನಿಸಲಾಯಿತು.  ಸ್ಕೌಟ್ಸ್ ಗೈಡ್ಸ್ ಹಾಗೂ ಕ್ರೀಡೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕನ್ನಡ ನಾಡು, ನುಡಿ, ಜಲದ ಹಿರಿಮೆಯನ್ನು ಬಿಂಬಿಸುವ ಸಾಂಸ್ಕೃತಿಕ ನೃತ್ಯಗಳನ್ನು ಶಾಲಾ ಮಕ್ಕಳು ನಡೆಸಿಕೊಟ್ಟರು.

ತಾ.ಪಂ ಅಧ್ಯಕ್ಷೆ ಮಂಜುಳಾಬಾಯಿ, ಜಿಲ್ಲಾಪಂಚಾಯತ್ ಸದಸ್ಯರುಗಳು,ಅರಸೀಕೆರೆ ನಗರಸಭೆ ಉಪಾಧ್ಯಕ್ಷ ಪಾರ್ಥಸಾರಥಿ, ತಾ.ಪಂ.ಸದಸ್ಯರುಗಳು, ನಗರಸಭಾ ಸದಸ್ಯರುಗಳು, ಚುನಾಯಿತ ಪ್ರತಿನಿಧಿಗಳು, ತಾ.ಪಂ. ಇಓ ಕೃಷ್ಣಮೂರ್ತಿ,  ಅರಸೀಕೆರೆ ಪೊಲೀಸ್ ಉಪವಿಭಾಗದ ಡಿವೈಎಸ್.ಪಿ ಸದಾನಂದ ತಿಪ್ಪಣ್ಣನವರ್ ರವರು, ನಗರಸಭಾ ಪೌರಾಯುಕ್ತ ಸಿ.ಆರ್.ಪರಮೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸದಸ್ಯರುಗಳು, ಶಿಕ್ಷಕರುಗಳು ಹಾಗೂ ಗಣ್ಯರುಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ನಂತರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧ ಕಲಾ ತಂಡಗಳೊಡನೆ ಮೆರವಣಿಗೆ ಸಾಗಿತು.














Share:

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....