ಮಂಗಳವಾರ, ಮೇ 30, 2017

ಅರಸೀಕೆರೆ ಕೆರೆಯ ಹೂಳೆತ್ತಿಲ್ಲವೇಕೆ !

Arsikere


ಮೊನ್ನೆ ಮೊನ್ನೆ ಅರಸೀಕೆರೆ ಕೆರೆಯ ಏರಿ ಮೇಲೆ ಬಸ್ಸಿನಲ್ಲಿ ಹೋಗುವಾಗ ಕಂಡ ದೃಶ್ಯವದು.  ಈಗ್ಗೆ ಎರಡು ವರ್ಷಗಳ ಹಿಂದೆ ತುಂಬಿ ತುಳುಕುತ್ತಿದ್ದ ಕೆರೆ ಈಗ ಬರಡು ಮೈದಾನದಂತಾಗಿದೆ. ಕೆರೆಯಲ್ಲಿದ್ದ ಅಷ್ಟೂ ನೀರು ಬಸಿದು, ಆವಿಯಾಗಿ ಖಾಲಿಯಾಗಿದೆ. ಕೆರೆಯ ತಳ ಕಾಣುತ್ತಿದೆ. ತಳದಲ್ಲಿರುವ ಆಳೆತ್ತರದ ಹೂಳೂ ಕಾಣುತ್ತಿದೆ.

ಊರಿಂದೂರಿಗೆ ಏರಿ ಮೇಲೆ ಪ್ರಯಾಣಿಸುವ ನಮ್ಮ ಕಣ್ಣಿಗೇ ಕೆರೆಯಲ್ಲಿನ ಹೂಳು ಕಾಣುತ್ತದೆ. ಅಲ್ಲೇ ಇರುವ ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳ ಕಣ್ಣಿಗೆ ಹೂಳು ಬೀಳುತ್ತಿಲ್ಲವೇ ?

ಮಳೆಗಾಲ ಆರಂಭವಾಗಿತ್ತಿದೆ. ಅಷ್ಟರೊಳಗೆ ಹೂಳೆತ್ತಿದರೆ, ಹೆಚ್ಚು ಮಳೆ ನೀರು ಸಂಗ್ರಹಣೆಯಾಗುತ್ತದೆ. ಹೇಮಾವತಿ, ಹಾರನಹಳ್ಳಿ ಕೆರೆಗಳಿಂದ ನೀರು ತರುವುದು ತಪ್ಪುತ್ತದೆ. ಕೆರೆಯಲ್ಲಿನ ರೈತರ ಜಮೀನಿಗೆ ಎರೆಗೋಡಾಗುತ್ತದೆ. ಇದ್ಯಾವುದೂ ಆಗದಿದ್ದರೆ, ಹೂಳಿರುವ ಕೆರೆ ಒಂದೇ ಮಳೆಗೆ ತುಂಬುತ್ತದಷ್ಟೇ. ಆ ನೀರು ಹೆಚ್ಚು ದಿನ ಇರುವುದಿಲ್ಲ. ಎಂದಿನಂತೆ ಅರಸೀಕೆರೆ ಮಹಾಜನತೆಯ ತೆರಿಗೆ ಹಣ ಖರ್ಚು ಮಾಡಿ ಹೇಮೆಯಿಂದ ನೀರು ತರುವ ಭಾರೀ ಭಗೀರಥ ಪ್ರಯತ್ನವಂತೂ ನಡೆಯುತ್ತದೆ.

ಇದೆಲ್ಲ ಆಗಬಾರದೆಂದಿದ್ದರೆ ಕೂಡಲೇ ಹೂಳೆತ್ತಬೇಕು. ಈಗಾಗಲೇ ಬರಪೀಡಿತ ತಾಲೂಕಿನ ಪಟ್ಟಿಗೆ ಸೇರಿರುವ ಅರಸೀಕೆರೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಜಾಬ್ ಕಾರ್ಡ್ ಪಡೆದವರು ಕೆಲಸವಿಲ್ಲದೆ ಕುಳಿತಿದ್ದಾರೆ. ಅವರನ್ನೆಲ್ಲಾ ಬಳಸಿಕೊಳ್ಳಲು ಅನುಮತಿ ಸಿಕ್ಕರೆ ಕೆರೆಯ ಹೂಳು ರೈತರ ಜಮೀನಿಗೆ ಚಿನ್ನದಂಥ ಗೊಬ್ಬರವಾದೀತು. ಹೂಳು ತುಂಬಿ ಮೈದಾನದಂತಾಗಿರುವ ಕೆರೆಯ ಹೂಳು ಕರಗಿದರೆ ಕೆರೆ ಕೆರೆಯಂತಾಗುವುದರಲ್ಲಿ ಸಂದೇಹವಿಲ್ಲ.

ಆಳುವವರು ಈ ಕೆಲಸ ಮಾಡದಿದ್ರೂ ಪರ್ವಾಗಿಲ್ಲ ಎನ್ನುವವರು, ತಾವಾಗಿಯೇ ಕೆರೆಗಿಳಿದು ಹೂಳೆತ್ತಬಹುದು.

ಸಾಮಗ ಶೇಷಾದ್ರಿ
ಬೆಂಗಳೂರು
https://www.facebook.com/samaga.sheshadri

ಹೂಳು ತುಂಬಿ ಮೈದಾನದಂತಾಗಿರುವ ಅರಸೀಕೆರೆ ಕೆರೆ

Share:

ಬುಧವಾರ, ಮೇ 24, 2017

ಅರಸೀಕೆರೆ ಬಳಿ ರಸ್ತೆ ಅಪಘಾತ - 1 ಸಾವು, 20 ಜನರಿಗೆ ಗಾಯ

Accident near Arsikere - 1 Died, 20 injured


ಗೋಕರ್ಣದಿಂದ ಬೆಂಗಳೂರಿಗೆ ಹೋಗುತ್ತಿದ್ದ ಶ್ರೀಕುಮಾರ್ ಟ್ರಾವಲ್ಸ್ ಗೆ ಸೇರಿದ ಖಾಸಗಿ ಸಾರಿಗೆ ಬಸ್ಸು ಅರಸೀಕೆರೆ ಕಸಬಾ ಹೋಬಳಿ ಕಲ್ಲನಾಯ್ಕನಹಳ್ಳಿ ಗೇಟ್ ಬಳಿ (ಕಾಫಿ ಡೇ ಹತ್ತಿರ) ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಇಂದು ಮುಂಜಾನೆ ಸುಮಾರು 4 ಗಂಟೆಯ ಸಮಯದಲ್ಲಿ ರಸ್ತೆಬದಿಯಿದ್ದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಬಸ್ ಚಾಲಕ ಸಿದ್ದಾಪುರ ಮೂಲದ ಮಂಜುನಾಥ ನಾಯಕ್ (38 ವರ್ಷ) ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.  ಬಸ್ಸಿನಲ್ಲಿದ್ದ 20 ಜನ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಮತ್ತು  ಬೆಂಗಳೂರಿಗೆ ಕಳಿಸಿಕೊಡಲಾಗಿದೆ.

ಈ ಅಪಘಾತಕ್ಕೆ ಬಸ್ಸಿನ ಚಾಲಕರಿಗೆ ನಿದ್ರೆ ಮಂಪರು ಕಾರಣ ಎಂದು ಊಹಿಸಲಾಗಿದೆ.  ಬಸ್ಸು ಸಂಪೂರ್ಣವಾಗಿ ರಸ್ತೆಯ ಬಲಭಾಗಕ್ಕೆ ಬಂದು ಮರಕ್ಕೆ ಗುದ್ದಿದೆ.  ಬಸ್ ಡಿಕ್ಕಿ ಹೊಡೆದದ್ದರಿಂದ ರಸ್ತೆಬದಿಯ ಮರ ಸಂಪೂರ್ಣ ಬುಡಮೇಲಾಗಿದೆ ಎಂದರೆ, ಬಸ್ಸಿನ ವೇಗ ಎಷ್ಟಿರಬಹುದೆಂದು ಅಂದಾಜಿಸಬಹುದು.

ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಚಿತ್ರ ಮಾಹಿತಿ : ಪೊಲೀಸ್ ಇಲಾಖೆ, ಅರಸೀಕೆರೆ)

ಅರಸೀಕೆರೆ ಬಳಿ ರಸ್ತೆ ಅಪಘಾತ - 1 ಸಾವು, 20 ಜನರಿಗೆ ಗಾಯ

ಅರಸೀಕೆರೆ ಬಳಿ ರಸ್ತೆ ಅಪಘಾತ - 1 ಸಾವು, 20 ಜನರಿಗೆ ಗಾಯ

ಅರಸೀಕೆರೆ ಬಳಿ ರಸ್ತೆ ಅಪಘಾತ - 1 ಸಾವು, 20 ಜನರಿಗೆ ಗಾಯ


ಅರಸೀಕೆರೆ ಬಳಿ ರಸ್ತೆ ಅಪಘಾತ - 1 ಸಾವು, 20 ಜನರಿಗೆ ಗಾಯ

Share:

ಗುರುವಾರ, ಮೇ 18, 2017

ಅರಸೀಕೆರೆ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿಯವರ ರಥೋತ್ಸವ

ಅರಸೀಕೆರೆ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿಯವರ ರಥೋತ್ಸವ


ಅರಸೀಕೆರೆ ಗ್ರಾಮದೇವತೆ ಶ್ರೀ ಕರಿಯಮ್ಮನವರ ರಥೋತ್ಸವವು ಇಂದು ಮಧ್ಯಾನ್ಹ ಜರುಗಿತು.  ಗ್ರಾಮದೇವತೆ ಶ್ರೀ ಕರಿಯಮ್ಮ ದೇವಿ, ಶ್ರೀ ಮಲ್ಲಿಗೆಮ್ಮದೇವಿ ಹಾಗೂ ಶ್ರೀ ಕೆಂಚರಾಯ ಸ್ವಾಮಿಯವರನ್ನು ರಥದಲ್ಲಿ ಪ್ರತಿಷ್ಟಾಪಿಸಿ, ಚಲುವರಾಯ ಸ್ವಾಮಿ ಹಾಗೂ ದೂತರಾಯ ಸ್ವಾಮಿಯವರ ನೇತೃತ್ವದಲ್ಲಿ ಭಕ್ತಾಧಿಗಳು ಜಯಘೋಷ ಮೊಳಗುತ್ತಾ ರಥವನ್ನೆಳೆದರು.  ರಥೋತ್ಸವಕ್ಕೆ ಬಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.  ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಹಾಗೂ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.  ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.  ಕರಿಯಮ್ಮನವರ ದೇವಾಲಯದ ಸುತ್ತ ಮುತ್ತ ವಿವಿಧ ಸಂಘ ಸಂಸ್ಥೆಯವರು, ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ ಹಾಗೂ ಪ್ರಸಾದಗಳನ್ನು ವಿತರಿಸಿದರು.

ಅರಸೀಕೆರೆ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿಯವರ ರಥೋತ್ಸವ

ಅರಸೀಕೆರೆ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿ ಮೂಲಸ್ಥಾನ

ಅರಸೀಕೆರೆ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿ

ಚಲುವರಾಯ ಸ್ವಾಮಿ ಹಾಗೂ ದೂತರಾಯ ಸ್ವಾಮಿಯವರು

ಶ್ರೀ ಮಲ್ಲಿಗೆಮ್ಮದೇವಿ

ಅರಸೀಕೆರೆ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿಯವರ ರಥೋತ್ಸವ
ಅರಸೀಕೆರೆ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿಯವರ ರಥೋತ್ಸವ


Share:

ಬುಧವಾರ, ಮೇ 17, 2017

ಅರಸೀಕೆರೆ ಗ್ರಾಮದೇವತೆ ಕರಿಯಮ್ಮದೇವಿಯವರ ಉತ್ಸವ

Arsikere


ನಾಳೆ ಜರುಗಲಿರುವ ಅರಸೀಕೆರೆ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಸಂಜೆ 8 ಗಂಟೆಗೆ ಪಟ್ಟಣದ ವಾಚನಾಲಯ ರಸ್ತೆಯಲ್ಲಿರುವ ಶ್ರೀ ಭವಾನಿ ಶಂಕರ ದೇವಾಲಯದ ಆವರಣದಿಂದ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿ, ಶ್ರೀ ಮಲ್ಲಿಗೆಮ್ಮ ದೇವಿ, ಕೆಂಚರಾಯ ಸ್ವಾಮಿ, ಚಲುವರಾಯ ಸ್ವಾಮಿ ಹಾಗೂ ದೂತರಾಯ ಸ್ವಾಮಿಯವರ ಉತ್ಸವ ಹೊರಟು ಪಟ್ಟಣದ ಬಿಹೆಚ್ ರಸ್ತೆ, ಪೇಟೆ ಬೀದಿ ಮಾರ್ಗವಾಗಿ ಸಾಗಿ ಕರಿಯಮ್ಮ ದೇವಾಲಯ ತಲುಪಿತು.

ನಾಳೆ ಬೆಳಿಗ್ಗೆ 11 ಗಂಟೆಯಿಂದ 1 ಗಂಟೆಯೊಳಗೆ ಸಲ್ಲುವ ಶುಭ ಲಗ್ನದಲ್ಲಿ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿಯವರ ದಿವ್ಯ ರಥೋತ್ಸವ ಜರುಗಲಿದೆ.
ಅರಸೀಕೆರೆ ಗ್ರಾಮದೇವತೆ ಕರಿಯಮ್ಮದೇವಿಯವರ ಉತ್ಸವ

ಅರಸೀಕೆರೆ ಗ್ರಾಮದೇವತೆ ಕರಿಯಮ್ಮದೇವಿಯವರ ಉತ್ಸವ

ಚಲುವರಾಯ ಸ್ವಾಮಿ

ದೂತರಾಯ ಸ್ವಾಮಿ

ಶ್ರೀ ಮಲ್ಲಿಗೆಮ್ಮ ದೇವಿ

Share:

ಸೋಮವಾರ, ಮೇ 15, 2017

ಅರಸೀಕೆರೆ ಪಟ್ಟಣದಲ್ಲಿ ಸರ್ಕಾರದ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟನೆ

Arsikere :


ಆಧುನಿಕ ಸಮಾಜದಲ್ಲಿ  ಬೃಹದಾಕಾರವಾಗಿ ಬೆಳೆಯುತ್ತಿರುವ ಯುವ ಜನತೆ, ಸ್ವಾವಲಂಭಿ ಜೀವನ ನಡೆಸಲು ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷಿ ಯೋಜನೆ ಕೌಶಲ್ಯ ಕಾರ್ಯಕ್ರಮದಿಂದ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿದ್ದು, ಯುವಕರು ಉದಾಸೀನ ಮನೋಭಾವ ತೊರೆದು ನೋಂದಣಿ ಮಾಡಿಸಿಕೊಳ್ಳುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಸೋಮವಾರ ತಿಳಿಸಿದರು.

ನಗರದ ವಾಚನಾಲಯ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಕಲಾಭವನದಲ್ಲಿ ಆಯೋಜಿಸಿದ್ದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಕೌಶಲ್ಯ  ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ಇಂದು ಬೆಂಗಳೂರಿನಲ್ಲಿ ಕೌಶಲ್ಯ ಮಿಶನ್ ಯೋಜನೆಯಡಿ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದ್ದು, 18 ರಿಂದ 35 ವರ್ಷದೊಳಗಿರುವ ಗ್ರಾಮೀಣ ಭಾಗದ ಹಾಗೂ ನಗರ ವ್ಯಾಪ್ತಿಯ ಎಲ್ಲಾ ಯುವಕರು, ಯುವತಿಯರು ವಿದ್ಯಾವಂತ, ಅವಿದ್ಯಾವಂತ ನಿರುದ್ಯೋಗ ಯುವಕ ಯುವತಿಯರು ಹೆಸರು ನೋಂದಾಯಿಸಿಕೊಂಡಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಪ್ರಸ್ತುತ ದೇಶದಲ್ಲಿ ನಿರುದ್ಯೋಗ ಎಂಬುದು ಯುವಕರನ್ನುಪೆಡಂಬೂತವಾಗಿ ಕಾಡುತ್ತಿದೆ. ಅಲ್ಲದೆ ನಿರುದ್ಯೋಗ ಎಂಬುದು ದೇಶದ ಪ್ರಧಾನ ಸಮಸ್ಯೆಯಾಗಿದೆ. ಪ್ರತಿ ವರ್ಷ ಎಸ್.ಎಸ್. ಎಲ್.ಸಿ, ಪಿಯುಸಿ, ಮತ್ತು ಪದವಿಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಉದ್ಯೋಗವಿಲ್ಲದೆ  ನಿರುದ್ಯೋಗಿಗಳಾಗಿ ಕಾಲಹರಣ ಮಾಡುವಂತಾಗಿದೆ.  ಈ ನಿಟ್ಟಿನಲ್ಲಿ ನಿರುದ್ಯೋಗಿ ಯುವಕ,ಯುವತಿಯರಿಗೆ ಕುಶಲ ತರಬೇತಿ ಕಾರ್ಯಕ್ರಮ ಸುವರ್ಣಾವಕಾಶ ಒದಗಿಸಿದ್ದು, ಈ ದಿಶೆಯಲ್ಲಿ ಆಸಕ್ತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡು ಸ್ವಾವಲಂಬಿಗಳಾಗಿ ಎಂದು ಅವರು ಹೇಳಿದರು.

ತಾ.ಪಂ ಅಧ್ಯಕ್ಷೆ ಮಂಜುಳಾಬಾಯಿ, ಉಪಾಧ್ಯಕ್ಷ ಮಹೇಶ್ವರಪ್ಪ, ಜಿ.ಪಂ ಸದಸ್ಯ ಆಶೋಕ್, ತಹಶೀಲ್ದಾರ್ ನಟೇಶ್, ಬಿಇಒ ನಟರಾಜ್, ಸಿಡಿಪಿಒ ಪ್ರಕಾಶ್ ಬಿ.ಸಿಎಂ. ಅಧಿಕಾರಿ ಶಿವಣ್ಣ ಉಪಸ್ಥಿತರಿದ್ದರು.



ಅರಸೀಕೆರೆ ಪಟ್ಟಣದಲ್ಲಿ ಸರ್ಕಾರದ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಅರಸೀಕೆರೆ ಪಟ್ಟಣದಲ್ಲಿ ಸರ್ಕಾರದ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಅರಸೀಕೆರೆ ಪಟ್ಟಣದಲ್ಲಿ ಸರ್ಕಾರದ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಅರಸೀಕೆರೆ ಪಟ್ಟಣದಲ್ಲಿ ಸರ್ಕಾರದ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟನೆ

Share:

ಶುಕ್ರವಾರ, ಮೇ 12, 2017

ಅರಸೀಕೆರೆ ಪಟ್ಟಣದಲ್ಲಿ ಕರಗ ಮಹೋತ್ಸವ

Arsikere


ಅರಸೀಕೆರೆ ಪಟ್ಟಣದ ಹಾಸನ ರಸ್ತೆಯಲ್ಲಿರುವ ಶ್ರೀ ಮುತ್ತುಮಾರಿಯಮ್ಮ ದೇವಿಯವರ ಕರಗ ಮಹೋತ್ಸವದ ಅಂಗವಾಗಿ ಅಮ್ಮನವರ ಉತ್ಸವವು ಇಂದು ಬೆಳಿಗ್ಗೆ ಪಟ್ಟಣದ ಕಂತೇನಹಳ್ಳಿ ಶನಿದೇವರ ದೇವಾಲಯದಿಂದ ಹೊರಟು ನಗರದ ಪ್ರಮುಖ ರಸ್ತೆಗಳ ಮೂಲಕ ಹಾಸನರಸ್ತೆಯಲ್ಲಿರುವ ದೇವಾಲಯ ತಲುಪಿತು.  ಬಾಯಿಬೀಗ ಹಾಗೂ ಬೆನ್ನಿಗೆ ಕೊಕ್ಕೆ ಹಾಕಿಕೊಂಡ ಭಕ್ತರು ದೇವರ ರಥ ಹಾಗೂ ಟ್ರಾಕ್ಟರ್ ಎಳೆಯುವುದರ ಮೂಲಕ ತಮ್ಮ ಹರಕೆಗಳನ್ನು ತೀರಿಸಿದರು.

ಅರಸೀಕೆರೆ ಪಟ್ಟಣದಲ್ಲಿ ಕರಗ ಮಹೋತ್ಸವ 
ಅರಸೀಕೆರೆ ಪಟ್ಟಣದಲ್ಲಿ ಕರಗ ಮಹೋತ್ಸವ

ಅರಸೀಕೆರೆ ಪಟ್ಟಣದಲ್ಲಿ ಕರಗ ಮಹೋತ್ಸವ

ಅರಸೀಕೆರೆ ಪಟ್ಟಣದಲ್ಲಿ ಕರಗ ಮಹೋತ್ಸವ

ಅರಸೀಕೆರೆ ಪಟ್ಟಣದಲ್ಲಿ ಕರಗ ಮಹೋತ್ಸವ

ಅರಸೀಕೆರೆ ಪಟ್ಟಣದಲ್ಲಿ ಕರಗ ಮಹೋತ್ಸವ

ಅರಸೀಕೆರೆ ಪಟ್ಟಣದಲ್ಲಿ ಕರಗ ಮಹೋತ್ಸವ

Share:

ಗುರುವಾರ, ಮೇ 11, 2017

ಅರಸೀಕೆರೆ ಬಸ್ ನಿಲ್ದಾಣದಲ್ಲಿ ಅವಘಡ : ಸಾರ್ವಜನಿಕರತ್ತ ನುಗ್ಗಿದ ಬಸ್

Arsikere


ಅರಸೀಕೆರೆ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ 7 ಗಂಟೆ ಸಮಯದಲ್ಲಿ  ಅವಘಡ ಸಂಭವಿಸಿದೆ.  ಹ್ಯಾಂಡ್ ಬ್ರೇಕ್ ಹಾಕದೇ ಪ್ಲಾಟ್ ಫಾರಂ ನಲ್ಲಿ ನಿಂತಿದ್ದ ಬಳ್ಳಾರಿ-ಸಕಲೇಶಪುರ ಬಸ್ಸಿಗೆ ಹಿಂಬದಿಯಿಂದ ಮತ್ತೊಂದು ಬಸ್ ಡಿಕ್ಕಿ ಹೊಡೆದಿದ್ದರಿಂದ ಮುಂದೆ ಚಲಿಸಿದ ಬಸ್, ಪ್ರಯಾಣಿಕರು ಕೂರಲು ನಿರ್ಮಿಸಿರುವ ಕಲ್ಲುಬೆಂಚಿಗೆ ಡಿಕ್ಕಿ ಹೊಡೆದಿದೆ.  ಅದೃಷ್ಟವಶಾತ್ ಆ ಜಾಗದಲ್ಲಿ ಯಾವುದೇ ಪ್ರಯಾಣಿಕರು ಇಲ್ಲದಿದ್ದರಿಂದ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದೆ.  ಬಸ್ ಗುದ್ದಿದ ಪರಿಣಾಮ ಎರಡು ಕಲ್ಲುಬೆಂಚುಗಳು ಸಂಪೂರ್ಣವಾಗಿ ಕಿತ್ತುಹೋಗಿವೆ.  ಬಸ್ ಚಾಲಕರ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.

(ಚಿತ್ರ ಮಾಹಿತಿ : ಹೆಚ್.ರಾಮಚಂದ್ರ)



Share:

ಬುಧವಾರ, ಮೇ 10, 2017

ಅರಸೀಕೆರೆ ಮಾರುತಿನಗರದಲ್ಲಿ ವನಮಹೋತ್ಸವ

Arsikere

ಅರಸೀಕೆರೆ ಪಟ್ಟಣದ ಮಾರುತಿ ನಗರ ವಾರ್ಡ್ ನಂಬರ್ 27 ರಲ್ಲಿ ಇಂದು ಬೆಳಗ್ಗೆ ನಗರಸಭೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ವಾರ್ಡಿನ ಪ್ರಮುಖ ರಸ್ತೆಬದಿಗಳಲ್ಲಿ ಹಾಗೂ ಪಾರ್ಕಿನಲ್ಲಿ ಸುಮಾರು 250ಕ್ಕೂ ಅಧಿಕ ವಿವಿಧ ಬಗೆಯ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು.  ನಗರಸಭಾಧ್ಯಕ್ಷ ಎಂ.ಸಮೀಉಲ್ಲ, ಪೌರಾಯುಕ್ತ ಪರಮೇಶ್, ನಗರಸಭಾ ಸದಸ್ಯರಾದ ಮೋಹನ್ ಕುಮಾರ್ (ಮನು) ಹಾಗೂ ವೃಕ್ಷಪ್ರೇಮಿಗಳು ಪಾಲ್ಗೊಂಡಿದ್ದರು.

(ಚಿತ್ರ ಮಾಹಿತಿ : ಮೋಹನ್ ಕುಮಾರ್)

Share:

ಅರಸೀಕೆರೆ ತಾಲ್ಲೂಕು ಜಾವಗಲ್ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ರಥೋತ್ಸವ

Arsikere

ಅರಸೀಕೆರೆ ತಾಲ್ಲೂಕಿನ ಜಾವಗಲ್ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಹೊಯ್ಸಳ ನಿರ್ಮಿತ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಯವರ ದಿವ್ಯ ರಥೋತ್ಸವವು ಇಂದು ಮಧ್ಯಾನ್ಹ  ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.

ಅರಸೀಕೆರೆ ತಾಲ್ಲೂಕು ಜಾವಗಲ್ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ರಥೋತ್ಸವ

ಅರಸೀಕೆರೆ ತಾಲ್ಲೂಕು ಜಾವಗಲ್ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ರಥೋತ್ಸವ

ಅರಸೀಕೆರೆ ತಾಲ್ಲೂಕು ಜಾವಗಲ್ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ


Share:

ಮಂಗಳವಾರ, ಮೇ 9, 2017

ಅರಸೀಕೆರೆ ತಾಲ್ಲೂಕು ಯಾದಾಪುರದ ಯಾತ್ರಿನಿವಾಸ : ಗುರುವಾರದಂದು ಲೋಕಾರ್ಪಣೆ

Arsikere


ಅರಸೀಕೆರೆ ತಾಲ್ಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಯಾದಾಪುರ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರ ದಿವ್ಯ ಸನ್ನಿಧಿಯ ಬೆಟ್ಟದ ತಪ್ಪಲಿನಲ್ಲಿ, ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ 44 ಕೊಠಡಿಗಳುಳ್ಳ ಯಾತ್ರಿನಿವಾಸವು ಇದೇ ಮೇ ತಿಂಗಳ 11 ನೇ ತಾರೀಖು ಗುರುವಾರದಂದು ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಲೋಕಾರ್ಪಣೆಗೊಳ್ಳಲಿದೆ.

(ಚಿತ್ರ ಮಾಹಿತಿ : ಮಾಡಾಳು ನಂದೀಶ)

ಅರಸೀಕೆರೆ ತಾಲ್ಲೂಕು ಯಾದಪುರದ ಯಾತ್ರಿನಿವಾಸ 
Share:

ಸೋಮವಾರ, ಮೇ 8, 2017

ನಾಳೆ (ಮಂಗಳವಾರ) ನರಸಿಂಹ ಜಯಂತಿ

ಅರಸೀಕೆರೆ ತಾಲ್ಲೂಕು ಹಾರನಹಳ್ಳಿ ಗ್ರಾಮದಲ್ಲಿ ಹೊಯ್ಸಳರಿಂದ ನಿರ್ಮಿಸಲ್ಪಟ್ಟಿರುವ ಶ್ರೀ ಚನ್ನಕೇಶವ ದೇವಾಲಯದ ಆವರಣದಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯವರಿಗೆ “ನರಸಿಂಹ ಜಯಂತಿ” ಅಂಗವಾಗಿ ನಾಳೆ ಮಂಗಳವಾರದಂದು ಬೆಳಿಗ್ಗೆ 7 ಗಂಟೆಯಿಂದ ಮಹಾಭಿಷೇಕ ಹಾಗೂ ಶ್ರೀವಾರಿಯವರ ಕಲ್ಯಾಣೋತ್ಸವ ಜರುಗಲಿದೆ.  ಮಧ್ಯಾನ್ಹ 12 ಗಂಟೆಗೆ ಮಹಾಮಂಗಳಾರತಿ ನಡೆಯಲಿದ್ದು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಯವರ ಕೃಪೆಗೆ ಪಾತ್ರರಾಗಬೇಕಾಗಿ ಕೋರಲಾಗಿದೆ.

ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ

Share:

ಶುಕ್ರವಾರ, ಮೇ 5, 2017

ರಾಜಾಸ್ಥಾನದಲ್ಲಿದ್ದ ಅರಸೀಕೆರೆಯ ಯುವತಿಯ ರಕ್ಷಣೆ

ರಾಜಾಸ್ಥಾನದಲ್ಲಿದ್ದ ಅರಸೀಕೆರೆಯ ಯುವತಿಯ ರಕ್ಷಣೆ


ಅರಸೀಕೆರೆ ಪಟ್ಟಣದ  ಯುವತಿಯೊಬ್ಬಳಿಗೆ ಬೆಂಗಳೂರಿನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಆಕೆಯನ್ನು ರಾಜಾಸ್ಥಾನದ ಪುರುಷನೊಂದಿಗೆ ವಿವಾಹ ಮಾಡಿಸಿದ್ದ ಪ್ರಕರಣವನ್ನು ಅರಸೀಕೆರೆ ನಗರ ಠಾಣೆ ಪೊಲೀಸರು ಭೇದಿಸಿ ಯುವತಿಯನ್ನು ರಕ್ಷಿಸಿದ್ದಾರೆ ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ. ರಾಹುಲ್ ಕುಮಾರ್ ಶಹಪೂರ್ವಾಡ್ ರವರು ಇಂದು ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದರು.


ಅರಸೀಕೆರೆಯ ಯುವತಿಯು ಕಳೆದ ವರ್ಷ ಕಾಣೆಯಾಗಿದ್ದಳು. ಆಕೆ ಕಾಣೆಯಾದ ಏಳು ತಿಂಗಳ ಬಳಿಕ ಯುವತಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು.  ಅರಸೀಕೆರೆ ಪೊಲೀಸರು ಯುವತಿಯ ತಾಯಿಯಿಂದ ಕೆಲವು ಮಹತ್ವದ ವಿಚಾರಗಳನ್ನು ಸಂಗ್ರಹಿಸಿ, ಯುವತಿಯು ರಾಜಾಸ್ಥಾನದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದುಕೊಂಡರು.  ಹಾಸನ ಎಸ್.ಪಿ ರವರ ಮಾರ್ಗದರ್ಶನದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಿ ಪ್ರಕರಣ ಪತ್ತೆ ಕಾರ್ಯ ಪ್ರಾರಂಭಿಸಲಾಯಿತು.

ಅರಸೀಕೆರೆ ಯುವತಿಗೆ ಬೆಂಗಳೂರಿನಲ್ಲಿ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಹೋಗಿ, ಆಕೆಯನ್ನು ಅಜ್ಞಾತ ಸ್ಥಳದಲ್ಲಿ ಬಂಧಿಯಾಗಿಟ್ಟು, ನಂತರ ಆಕೆಯನ್ನು ಚೆನ್ನೈಗೆ ಕರೆದೊಯ್ಯಲಾಗಿತ್ತು.  ಅಲ್ಲಿಂದ ರಾಜಾಸ್ಥಾನಕ್ಕೆ ಕರೆದೊಯ್ದು ಅಲ್ಲಿನ ಸ್ಥಳೀಯ ವ್ಯಕ್ತಿಯೊಬ್ಬರಿಂದ ಭಾರೀ ಪ್ರಮಾಣದ ಹಣ ಪಡೆದು ಆತನೊಂದಿಗೆ ವಿವಾಹ ಮಾಡಿಸಲಾಗಿತ್ತು.  ಈ ಯುವತಿಯ ಅಕ್ಕಪಕ್ಕದ ಮನೆಯಲ್ಲಿರುವ ವ್ಯಕ್ತಿಗಳೇ ಈ ಕೃತ್ಯವೆಸಗಿದ್ದು, ಸಧ್ಯ ಈ ಆರೋಪಿಗಳು ತಲೆಮರೆಸಿಕೊಂಡಿರುತ್ತಾರೆ.  ಈ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಎಸ್.ಪಿ. ರಾಹುಲ್ ಕುಮಾರ್ ಶಹಪೂರ್ವಾಡ್ ತಿಳಿಸಿದರು.

ಪತ್ರಿಕಾ ಗೊಷ್ಠಿಯಲ್ಲಿ ಹೆಚ್ಚುವರಿ ಎಸ್.ಪಿ ಹಾಗೂ ಅರಸೀಕೆರೆ ನಗರಠಾಣೆ ಇನ್ಸ್ ಪೆಕ್ಟರ್ ನಿರಂಜನ್ ಕುಮಾರ್ ಉಪಸ್ಥಿತರಿದ್ದರು.


(ಚಿತ್ರ: ವಾರ್ತಾ ಇಲಾಖೆ, ಹಾಸನ)


Share:

ಮದುವೆ ಕೂಡ ರಿಯಾಲಿಟಿ ಷೋ ಆಗುತ್ತಿರುವ ಹೊತ್ತಲ್ಲಿ....

ಅನುಸಂಧಾನ-೨೩

ಮದುವೆ ಕೂಡ ರಿಯಾಲಿಟಿ ಷೋ ಆದ ಹೊತ್ತಲ್ಲಿ

ತುಂಬ ಪರಿಚಯದವರ ಮನೆಯಲ್ಲಿ ಮದುವೆ. ಅವರು ಸಾಕಷ್ಟು ಇರುವವರು‌. ಸಮಾಜದಲ್ಲಿ ಗುರುತಿಸಿಕೊಂಡವರು. ಜೊತೆಗೆ ವ್ಯಾಪಾರ ವ್ಯವಹಾರಗಳ ಗಡಿಬಿಡಿ. ಹಾಗಾಗಿ ಮದುವೆಯ ಅಹ್ವಾನ ಪತ್ರಿಕೆಯನ್ನು ಅವರ ಸಹಾಯಕ ಊರ ತುಂಬ ಹಂಚುತ್ತಿದ್ದಾನೆ. ಮದುವೆಯ ಪತ್ರಿಕೆಯ ಜೊತೆಗೊಂದು ಕಾಗದ ಇದೆ. ಸಮಯಾವಕಾಶದ ಕೊರತೆಯಿಂದಾಗಿ ಖುದ್ದು ಆಹ್ವಾನಿಸಲಾಗುತ್ತಿಲ್ಲ. ಇದನ್ನೇ ವೈಯಕ್ತಿಕ ಆಹ್ವಾನವೆಂದು ಮನ್ನಿಸಿ, ಮದುವೆಗೆ ಬಂದು ವಧು-ವರರನ್ನು ಹಾರೈಸಿ ಇತ್ಯಾದಿ ಇತ್ಯಾದಿ. ಜೊತೆಗೇ ಅವರ ಸಹಾಯಕ ಅಹ್ವಾನ ಪತ್ರಿಕೆಯ ಜೊತೆಯಲ್ಲೇ ಆ ಪತ್ರವನ್ನೂ ಜೊತೆಗೆ ಉಡುಗೊರೆಯ ಪ್ಯಾಕೆಟ್ಟನ್ನೂ ಮನೆ ಮನೆಗೆ ತಲುಪಿಸುತ್ತಿದ್ದಾನೆ. ಅವನ ಕೈಯಲ್ಲಿ ಮೂರು ಬಗೆಯ ಆಹ್ವಾನಪತ್ರಿಕೆಗಳೂ, ವಿವಿಧ ಆಕಾರದ ಉಡುಗೊರೆ ಪೊಟ್ಟಣಗಳೂ ಇವೆ. ಅವನು ಈ ಮೊದಲೇ ಗುರುತು ಹಾಕಿಕೊಂಡಂತೆ ಪತ್ರಿಕೆ ತಲುಪಿಸಬೇಕಾದವರ ಮನೆಯ ಮುಂದೆ ಕಾರು ನಿಲ್ಲಿಸಿ, ಆ ಮನೆಗೆ ಸಲ್ಲಬೇಕಾದ ಪತ್ರಿಕೆಯನ್ನೂ ಉಡುಗೊರೆಯನ್ನೂ ಮದುವೆ ಮನೆಯವರ ಪರವಾಗಿ ತಲುಪಿಸುತ್ತಾನೆ.  ಆಹ್ವಾನ ಪತ್ರಿಕೆ ಅದ್ದೂರಿಯಾಗಿದೆ.‌ ಜೊತೆಗಿರುವ ಕೋರಿಕೆ ಪತ್ರಕ್ಕೆ ಖುದ್ದು ಅವರೇ ಸಹಿ ಹಾಕಿದ್ದಾರೆ. ಹಿಂದಿನ ದಿನ ಆರತಕ್ಷತೆ, ಮಾರನೇ ದಿನ ಮದುವೆ, ಅದಾದ ಮೇಲೆ ಬೀಗರೂಟ. ಎಲ್ಲ ವಿವರಗಳೂ ಸರಿಯಾಗಿಯೇ ಇವೆ. ಉಡುಗೊರೆ ಒಪ್ಪಿಸಿಕೊಂಡದ್ದಕ್ಕೆ ಮದುವೆಗೆ ಹೋಗಲೇ ಬೇಕಾದ ಅನಿವಾರ್ಯತೆಯಲ್ಲಿ ಅತಿಥಿ ಸಿಲುಕಿದ್ದಾನೆ.

ಇದ್ದ ಬದ್ದ ಕೆಲಸಗಳನ್ನೆಲ್ಲ ಬದಿಗೊತ್ತಿ ಟ್ರಾಫಿಕ್ಕಿನಿಕ್ಕಟ್ಟಿನಲ್ಲಿ ಅಂತೂ ಇಂತೂ ಮದುವೆ ಮನೆಗೆ ಹೋದರೆ ಅಲ್ಲಿ ಆಗಲೇ ಸರದಿಯ ಸಾಲು. ಈ ಅತಿಥಿಯೂ ಇತರೆ ಅತಿಥಿಗಳಂತೆಯೇ ಸರತಿಯ ಸಾಲು ಸೇರಿಕೊಳ್ಳುತ್ತಾನೆ. ಮದುಮಕ್ಕಳ ಕೈ ಕುಲುಕುವಾಗ ಮುಗುಳ್ನಗೆ. ಉಡುಗೊರೆಯ ಕವರಿನಲ್ಲಿ ಹಣವಿಟ್ಟು ಕವರಿನ ಮೇಲೆ ಚಿತ್ತಾಗದಂತೆ ಹೆಸರು ಬರೆದ ಕವರನ್ನು ಹಸ್ತಾಂತರಿಸಿ  ಅಭಿನಂದನೆ ಅಂತ ಹೇಳುವಾಗ ಅದು ಕೇಳದಂತೆ ಹಿನ್ನಲೆ ಸಂಗೀತ. ಹಿಂದಿನಿಂದ ದಬ್ಬುತ್ತಿರುವ ಸರತಿ ಸಾಲು. ಸಾಲಾಗಿ ನಿಲ್ಲಿ ಅನ್ನುವ ಛಾಯಾಗ್ರಾಹಕನ ಅಪ್ಪಣೆ. ಸಾಲಾಗಿ ನಿಲ್ಲುತ್ತಿದ್ದಂತೆ ಕ್ಲಿಕ್ಕೆನ್ನುವ ಕೆಮರಾ, ಪ್ಯಾನ್ ಆಗುವ ವಿಡಿಯೋ ಕ್ಯಾಮರಾ. ಅಲ್ಲಿಗೆ ಆ ಅತಿಥಿಯ ಕತೆ ಮುಗಿಯಿತು.

ಮದುಮಕ್ಕಳು ಅವರ ಜೊತೆಗಿರುವವರೂ ಸಾಲಿನ ತುದಿಗೆ ಬಂದ ಮತ್ತೊಬ್ಬರತ್ತ ಕಣ್ಣು ಹಾಯಿಸುತ್ತಾರೆ. ಮತ್ತೂ ಅಲ್ಲೇ ನಿಂತಿದ್ದರೆ, ಛಾಯಾಗ್ರಾಹಕನೇ ಪಕ್ಕಕ್ಕೆ ಸರೀರಿ ಅಂತ ಸಿಡುಕುತ್ತಾನೆ. ಅಲ್ಲಿಂದ ನಂತರ ಊಟದ ಮನೆಗೆ. ಅಲ್ಲಿ ಅಷ್ಟುದ್ದದ ಕ್ಯೂ. ಬಾಳೆ ಎಲೆ ಊಟ ಬೇಕಿದ್ದರೆ ಕಾಯಬೇಕು. ಬುಫೆಯೂಟ ಆದರೆ ತಟ್ಟೆ ಹಿಡಕೊಂಡು ನಿಂತುಕೊಂಡು ಭಿಕ್ಷಾನ್ನವನ್ನು ಅವಸರದಲ್ಲಿ ಮುಗಿಸಿ ಹೊರಗೆ ಬರಬೇಕು. ಮಿಕ್ಕವರಿಗೆ ಜಾಗ ಬಿಟ್ಟುಕೊಡಬೇಕು. ಒಮ್ಮೆ ಅಲ್ಲಿಂದ ಹೊರಗೆ ಬಿದ್ದರೆ ಮದುವೆ ಮುಗೀತು.
ಇದು ಈಚೆಗೆ ನಡೆಯುತ್ತಿರುವ ಮದುವೆ ಸಂಭ್ರಮ.

ಹಿಂದೆಲ್ಲ ಬರೀ ಮದುವೆಯೇ ಅಲ್ಲ, ಮನೆಯಲ್ಲಿ ನಡೆಯುತ್ತಿದ್ದ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲೂ  ನೆಂಟರಿಷ್ಟರ ಜೊತೆ ಸ್ನೇಹಿತರಿಗೂ ಅತಿಥಿಗಳಿಗೂ ಸ್ವತಃ ಆತಿಥೇಯರೇ ಖುದ್ದು ಕರೆ ಕೊಡುತ್ತಿದ್ದರು. ಆಹ್ವಾನ ಪತ್ರಿಕೆ ಹಂಚಲು ವಾರಗಟ್ಟಲೇ ಹಿಡಿಯುತ್ತಿತ್ತು. ಅಂಚೆಗೆ ಹಾಕಿದ ಪತ್ರಿಕೆಗಳು ತಲುಪಿದವೋ ಇಲ್ಲವೋ ಎಂಬ ಆತಂಕವೂ ಇರುತ್ತಿತ್ತು.

ಆದರೆ ಈಗಿನ ಮದುವೆಗಳು ಲಕ್ಷ ರೂಪಾಯಿ ಬಾಡಿಗೆಯ ಅದ್ದೂರಿ ಕಲ್ಯಾಣ ಮಂದಿರಗಳಲ್ಲಿ ನಡೆಯುತ್ತವಾದರೂ ಅಲ್ಲಿ ಪರಸ್ಪರ  ಕೂತು ಮಾತಾಡುವುದಕ್ಕೆ ಸಮಯವಿರುವುದಿಲ್ಲ. ಇನ್ನು ಅತಿಥಿಗಳಾಗಿ ಬಂದವರೇ ಪರಸ್ಪರ ಗುರ್ತಿಸಿ ಕೈ ಕುಲಿಕಿ ಇಲ್ಲದ ನಗೆಯನ್ನು ಹಂಚಿಕೊಳ್ಳಬೇಕು. ಇನ್ನು ಮಾತೇನಿದ್ದರೂ ಪಾರ್ಕಿಂಗ್ ಲಾಟ್ನಲ್ಲೋ ಗೇಟಲ್ಲೋ ಜರುಗಬೇಕು. ಅದು ಕೂಡ ಒಂದು ಕೈಲಿ ಮೊಬೈಲು,  ಮತ್ಯಾರದೋ ಜೊತೆ ಬೇಡದ ಮಾತಿನೊಂದಿಗೇ ಮುಗಿಯುತ್ತದೆ. ಇನ್ನೊಮ್ಮೆ ಸಿಗೋಣ ಅನ್ನೋದು ಜನಪ್ರಿಯ ಸಂಭಾಷಣೆ. ಎಷ್ಟು ದಿನ ಆಯ್ತೂರಿ ನಿಮ್ಮನ್ನು ನೋಡಿ ಅನ್ನೋದು ಬೋನಸ್ ಸಂಭಾಷಣೆ. ಮನೆಯವರೆಲ್ಲ ಚೆನ್ನಾಗಿದ್ದಾರಾ ಅಂತ ಯಾರಾದರೂ ಕೇಳಿದರೆ ಜನ್ಮಸಾರ್ಥಕ. ಮಿಕ್ಕಂತೆ ಎಲ್ಲವೂ ಸಾಂದರ್ಭಿಕ ಅನಿವಾರ್ಯ ಕರ್ಮ.

ಐದೈದು ದಿನ ಮದುವೆ ಮಾಡುತ್ತಾರೆ. ದುಡ್ಡು ಖರ್ಚು ಮಾಡುತ್ತಾರೆ. ನೂರಾರು ಮಂದಿಗೆ ಊಟ ಹಾಕುತ್ತಾರೆ ಅಂತ ಹಿಂದಿನ ಕಾಲದ ಮದುವೆಗಳನ್ನು ದೂರುತ್ತಿದ್ದರು. ಅದಕ್ಕೆ ಪರ್ಯಾಯವಾಗಿ ಒಂದೇ ದಿನದ ಮದುವೆ ಬಂತು.  ಅದು ಕ್ರಮೇಣ ಒಂದೇ ಹೊತ್ತಿಗೆ ಸೀಮಿತವಾಯಿತು. ಹಾಗಂತ ದುಡ್ಡು ಖರ್ಚು ಮಾಡುವುದೇನೂ ಕಮ್ಮಿಯಾಗಲಿಲ್ಲ. ಮನೆಯಲ್ಲಿ ನೆಂಟರ ಜೊತೆಗೆ ಐದು ದಿನ ಮಾಡುವುದಕ್ಕಿಂತ ಹತ್ತು ಪಟ್ಟು ದುಡ್ಡನ್ನು ಛತ್ರಗಳಿಗೆ ಕೊಡಬೇಕಾಗಿ ಬಂತು. ಛತ್ರಕ್ಕೆ ಹೋದರೆ ಹುಡುಗಿ ಕಡೆಯವರು ಯಾರು, ಹುಡುಗನ ಕಡೆಯವರು ಯಾರು, ಹುಡುಗಿಯ ಅಪ್ಪ ಅಮ್ಮ ತಮ್ಮ ತಂಗಿ ಯಾರು ಅನ್ನುವುದೇ ಗೊತ್ತಾಗದಂಥ ಪರಿಸ್ಥಿತಿ. ಎಲ್ಲವೂ ಕ್ಷಣಿಕ ಮತ್ತು ನೀರಮೇಲಿನ ಗುಳ್ಳೆ ಅನ್ನುವ ಫಿಲಾಸಫಿ ನಿಜವಾಗುತ್ತಿರುವುದು ಮದುವೆ ಮನೆಗಳಲ್ಲೇ.

ಇತ್ತೀಚೆಗೊಬ್ಬರು ಸಿಕ್ಕಿದ್ದರು. ಅವರ ಮಗನ ಮದುವೆ ಮುರಿದುಬಿದ್ದಿತ್ತು.ಮ್ಯಾಟ್ರಿಮೋನಿಯಲ್ ಏಜೆನ್ಸಿಯೊಂದರ ಮೂಲಕ ಕುದುರಿದ್ದ ಮದುವೆ ತಿಂಗಳ ಚಪ್ಪರ ತೆಗೆಯುವ ಮೊದಲೇ ಮುಗಿದು ಹೋಗಿತ್ತು. ಪರಸ್ಪರ ಸಂಸಾರಗಳ ವಿವರ ತಿಳಿಯದೇ ಅವರ ಇಷ್ಟಾನಿಷ್ಠಗಳು ಗೊತ್ತಾಗದೇ ಅವರವರ ವೈಯಕ್ತಿಕ ವಿಚಾರಸರಣಿಯೂ ತಿಳಿಯದೇ ಮದುವೆ ಮುರಿದಿತ್ತು. ಹೊಸ ಗಂಡು ಹೆಣ್ಣುಗಳು ಊಟ ತಿಂಡಿ ನಿದ್ರೆಯ ಸಮಯ ಶ್ವಪಚತನ ಸೋಂಭೇರಿತನ ಹೀಗೆ ಹತ್ತು ಹಲವು ವಿಚಾರಗಳು ಕುದುರದಾದಾಗ ಮದುವೆ ಮುರಿದುಕೊಳ್ಳುವುದು ಸಾಮಾನ್ಯವಾಗುತ್ತಿ ದೆ.
ಇಂಥ ಸಂಕಷ್ಟಗಳನ್ನು ಹೆಣ್ಣು ಹೆತ್ತವರೂ ಅನುಭವಿಸಿದ್ದನ್ನು ನೋಡುತ್ತೇವೆ. ದಿನಕ್ಕೊಂದು ಸಂಸಾರ ಒಡೆದ ಸುದ್ದಿ ಕಿವಿಗೆ ಬೀಳುತ್ತಿರುತ್ತದೆ. ಅವುಗಳಲ್ಲಿ ಆರೇಂಜ್ಡ್ ಮದುವೆಯ ಜೊತೆಗೇ ಪ್ರೇಮ ವಿವಾಹಗಳೂ ಇರುತ್ತವೆ.ಬಹುತೇಕ  ಅರೇಂಜ್ಡ್ ಮದುವೆ ಕೂಡ ಗೊತ್ತಾಗುವುದು ಮ್ಯಾಟ್ರಿಮೋನಿಯಲ್ ಸೈಟುಗಳಿಂದಲೇ. ಇದನ್ನೆಲ್ಲ ನೋಡುತ್ತಿದ್ದರೆ, ಹಳೆಯ ಕಾಲದ ಮದುವೆಗಳು ಎಷ್ಟು ಮುಖ್ಯವಾಗಿದ್ದವು ಅನ್ನುವುದು ಅರ್ಥವಾಗುತ್ತದೆ.
ಇದೀಗ ಮೂವತ್ತು ವರುಷಗಳ ಹಿಂದೆ ಮದುವೆಯೆಂದರೆ ಸುದೀರ್ಘ ಸಂಭ್ರಮ. ನೆಂಟರಿಷ್ಟರೆಲ್ಲ ದಿನಗಟ್ಟಲೆ ಮೊದಲೇ ಬರುತ್ತಿದ್ದರು. ಮನೆಯಲ್ಲಿ ಚಪ್ಪರ ಏಳುತ್ತಿತ್ತು. ಚಿಕ್ಕಮ್ಮ ದೊಡ್ಡಮ್ಮನ ಮಕ್ಕಳು, ಅತ್ತೆ ಮಗ, ಮಾವನ ಮಗಳು, ಅವರ ಪಕ್ಕದ ಮನೆಯ ಹುಡುಗ, ಕೊನೇ ಬೀದಿಯ ಹುಡುಗಿ- ಹೀಗೆ ಎಲ್ಲರೂ ಮದುವೆಗೆಂದು ಹೊರಟು ಬರುತ್ತಿದ್ದರು. ನಮ್ಮ ಹುಡುಗೀನೂ ಕರಕೊಂಡು ಹೋಗ್ರೀ, ಮದುವೆ ಮನೇಲಿ ನಾಲ್ಕು ಮಂದಿ ಕಣ್ಣಿಗೆ ಬೀಳಲಿ. ಲಗ್ನ ಕುದುರಿದರೆ ಪುಣ್ಯ ಅಂತ ಹೆತ್ತವರು ಕೂಡ ಮದುವೆ ವಯಸ್ಸಿಗೆ ಬಂದ ಹೆಣ್ಮಕ್ಕಳನ್ನು ಕಳಿಸಿಕೊಡುತ್ತಿದ್ದರು. ಆರೆಂಟು ದಿನ ಆ ಮದುವೆ ಸಂಭ್ರಮದಲ್ಲಿ ಕಳೆಯುತ್ತಾ, ಮದುವೆಯ ದಿನವೂ ಪಾನಕ ಹಂಚುತ್ತಾ, ಬಡಿಸುತ್ತಾ, ಕುಂಕುಮ ಕೊಡುತ್ತಾ ಓಡಾಡುತ್ತಿದ್ದ ಹೆಣ್ಮಕ್ಕಳು, ತೋರಣ ಕಟ್ಟುತ್ತಾ, ಸ್ವಾಗತಿಸುತ್ತಾ, ತರಲೆ ಮಾಡುತ್ತಾ ಇದ್ದ ತರುಣರು, ಅವರವರ ಮನೆಯವರು- ಹೀಗೆ ಅಲ್ಲೊಂದು ಪುಟ್ಟ ಹೊಸ ಜಗತ್ತು ತೆರೆದುಕೊಳ್ಳುತ್ತಿತ್ತು. ಅಲ್ಲೇ ಆ ಹುಡುಗಿ ಯಾರು ಅಂತ ವಿಚಾರಿಸಿಕೊಳ್ಳುತ್ತಿದ್ದರು. ಈ ಹುಡುಗನಿಗೆ ಮದುವೆ ಆಗಿದೆಯಾ ಅಂತ ಕೇಳುತ್ತಿದ್ದರು. ಅವನು ಇಂಥೋರ ಮಗ, ಅವನ ಚಿಕ್ಕಪ್ಪ ಹೀಗ್ಹೀಗೆ, ಅವನ ಅಪ್ಪ ಇಂತಿಂಥಾ ಕೆಲಸ ಮಾಡುತ್ತಾನೆ. ಅಪ್ಪ ಮದುವೆಯಾದದ್ದು ಇಂತಿಂಥಾ ಮನೆತನದ ಹೆಣ್ಣು, ದೊಡ್ಡ ಮಗಳನ್ನು ಎಲ್ಲಿಗೆ ಕೊಟ್ಟಿದ್ದಾರೆ ಎಂಬುದೆಲ್ಲ ಮಾತಲ್ಲಿ ಬಂದು ಹೋಗುತ್ತಿತ್ತು. ಒಬ್ಬ ಹುಡುಗನನ್ನು ನೋಡಿದ ತಕ್ಷಣ ಎಲ್ಲ ವಿವರಗಳೂ ಗೂಗಲ್ಲಿಗಿಂತ ವೇಗವಾಗಿ ಮತ್ತು ವಿವರವಾಗಿ ಕೈವಶವಾಗುತ್ತಿದ್ದವು. ಆಮೇಲೆ ಹುಡುಗಿ ನೋಡೋದು, ಹುಡುಗನ ಮನೆ ನೋಡೋದು- ಇತ್ಯಾದಿ ಶಾಸ್ತ್ರಗಳು ನಡೆದು ಮದುವೆ ನಡೆಯುತ್ತಿತ್ತು.
ಈ ಸೋಷಿಯಲ್ ಸೆಕ್ಯುರಿಟಿ ವ್ಯವಸ್ಥೆ ಎಷ್ಟು ಅದ್ಭುತವಾಗಿತ್ತು ಅನ್ನುವುದು ನಮಗೀಗ ಗೊತ್ತಾಗುತ್ತಿದೆ. ಎಲ್ಲೋ ಕೆಲವೊಮ್ಮೆ ಅಸುಖಿ ಕುಟುಂಬಗಳು ಇದ್ದಿರಬಹುದು. ಮದುವೆ ವಿಫಲವಾಗಿರಬಹುದು. ಆದರೆ, ಈಗೀಗ ಪತ್ತೆಯಾಗುತ್ತಿರುವ ಕಾರಣಗಳಿಗಂತೂ ಅಲ್ಲ. ಅವನ ಹಿನ್ನೆಲೆ ಗೊತ್ತಿರಲಿಲ್ಲ. ಅವನ ಅಭ್ಯಾಸಗಳ ಅರಿವಿರಲಿಲ್ಲ. ಅವನಿಗೆ ಮೊದಲೇ ಎರಡು ಮದುವೆ ಆಗಿತ್ತು ಎಂಬ ಕಾರಣಗಳಿಂದ ಮದುವೆ ಮುರಿದುಬೀಳುತ್ತಿರಲಿಲ್ಲ. ಗುಟ್ಟುಗುಟ್ಟಾಗಿ ಮದುವೆ ನಡೆದುಹೋಗುತ್ತಿರಲೂ ಇಲ್ಲ. ಪ್ರತಿಯೊಂದು ಮದುವೆ ಕೂಡ ವರ್ಷಗಟ್ಟಲೆ ನೆನಪಿರುತ್ತಿತ್ತು. ಅಲ್ಲಿ ಪ್ರೇಮವೊಂದು ಮೊಳೆಯುತ್ತಿತ್ತು. ಮದುವೆಯೊಂದು ಕುದುರುತ್ತಿತ್ತು. ಜೀವ ಝಲ್ಲೆನಿಸುವ ಕ್ಷಣಗಳಿರುತ್ತಿದ್ದವು. ಕತ್ತಲಲ್ಲಿ ಅವನು ಕೆನ್ನೆ ಚಿವುಟಿ ಓಡಿಹೋಗುತ್ತಿದ್ದ. ಅವಳು ದೀಪದ ಮುಂದೆ ಕೂತು ಅವನನ್ನೇ ದಿಟ್ಟಿಸಿ ನೋಡುತ್ತಿದ್ದಳು. ಬೆಳದಿಂಗಳಲ್ಲಿ ಯಾರೋ ಹಾಡುವುದು ಕೇಳಿಸುತ್ತಿತ್ತು.

ಆದರೆ ಈ ನಡುವೆ ಮದುವೆಯ  ಹುಡುಗನ ಕೈ ಕುಲುಕುವುದಕ್ಕೂ ಅವಕಾಶ ಸಿಕ್ಕುವುದಿಲ್ಲ. ಕ್ಯೂ ನಿಂತು ನಿಂತೂ ಕಾಲು ಬಿದ್ದು ಹೋಗಿರುತ್ತದೆ. ಊಟದ ಮನೆಗೆ ಹೋದರೆ ಅಲ್ಲಿ ಒಂದಷ್ಟು ಮಂದಿ ಊಟ ಮಾಡುತ್ತಿರುತ್ತಾರೆ. ಅವರ ಹಿಂದೆ ಕೈ ಕಟ್ಟಿ ನಿಂತುಕೊಂಡು ಮತ್ತೊಂದಷ್ಟು ಮಂದಿ ತಮ್ಮ ಸರದಿಗಾಗಿ ಕಾಯುತ್ತಿರುತ್ತಾರೆ. ಹಿಂದೆಲ್ಲ ನಿಧಾನವಾಗಲಿ ಊಟ ಅಂತ ಹೇಳುತ್ತಿದ್ದವರು. ಈಗ ಬೇಗ ತಿಂದು ಎದ್ದು ಹೋಗಿ ಎಂದು ಎಲ್ಲರೂ ಜೋರಾಗಿ ಕಿರುಚುತ್ತಿದ್ದಂತೆ ಅನ್ನಿಸುತ್ತದೆ. ಹಿಂದಿನ ಮದುವೆಗಳಲ್ಲಿ ಅಣ್ಣಂದಿರ ಮಕ್ಕಳೋ ಮಾವನ ಮಕ್ಕಳೋ ಚಿಕ್ಕಪ್ಪ ದೊಡ್ಡಪ್ಪನವರೋ ಪಕ್ಕದ ಮನೆ ಹುಡುಗನೋ ಅನ್ನ ಸಾರು ಬಡಿಸುತ್ತಿದ್ದರು. ಆಪ್ತವಾಗಿ ಮಾತಾಡುತ್ತಾ ಬಡಿಸುತ್ತಿದ್ದರು. ಇಲ್ಲಿ ಯಾರೋ ಗುರುತಿಲ್ಲದವನು ಕೈಗೆ ಪ್ಲಾಸ್ಟಿಕ್ ಕವರ್ ಕಟ್ಟಿಕೊಂಡು, ತಲೆಗೆ ಪ್ಲಾಸ್ಟಿಕ್ ಟೋಪಿ ಹಾಕಿಕೊಂಡು ಮುಖ ಕೂಡ ನೋಡದೇ ಬಡಿಸುವ ಡ್ಯೂಟಿ ಮಾಡುತ್ತಾರೆ. ಮದುವೆ ಶಿಷ್ಟಾಚಾರ ಆಗಿದೆ. ಸಂಸಾರ ಕೂಡ ಕಾಟಾಚಾರಕ್ಕೆ ಆಗಿರುವಂತೆ ಕಾಣಿಸಲಾಗುತ್ತಿದೆ. ಇದರಿಂದ ಮುಕ್ತಿ ಇಲ್ಲವೇ?

Share:

ಅರಸೀಕೆರೆ ಪಟ್ಟಣದಲ್ಲಿ ವಾಸವಿ ಜಯಂತಿ ಆಚರಣೆ

Arsikere


ಅರಸೀಕೆರೆ ಪಟ್ಟಣದ ಪೇಟೆಬೀದಿಯಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಾಸವಿ ಜಯಂತಿ ಅಂಗವಾಗಿ ಅಮ್ಮನವರಿಗೆ ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು.  ಸಾಯಂಕಾಲ ಜರುಗಿದ ಶೋಭಾಯಾತ್ರೆಯಲ್ಲಿ ಆರ್ಯವೈಶ್ಯ ಸಮಾಜಬಾಂಧವರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

(ಚಿತ್ರಗಳು : ಬಿ.ಆರ್.ಶ್ರೀನಿವಾಸ ಪ್ರಸಾದ್ ಮತ್ತು ದರ್ಶನ್)

ಅರಸೀಕೆರೆ ಪಟ್ಟಣದಲ್ಲಿ ವಾಸವಿ ಜಯಂತಿ ಆಚರಣೆ

ಅರಸೀಕೆರೆ ಪಟ್ಟಣದಲ್ಲಿ ವಾಸವಿ ಜಯಂತಿ ಆಚರಣೆ

ಅರಸೀಕೆರೆ ಪಟ್ಟಣದಲ್ಲಿ ವಾಸವಿ ಜಯಂತಿ ಆಚರಣೆ

Share:

ಗುರುವಾರ, ಮೇ 4, 2017

ಅರಸೀಕೆರೆ ತಾಲ್ಲೂಕು ಕಣಕಟ್ಟೆ ಗ್ರಾಮದ ಕರಿಯಮ್ಮದೇವಿ ರಥೋತ್ಸವ

Arsikere :

ಅರಸೀಕೆರೆ ತಾಲ್ಲೂಕು ಕಣಕಟ್ಟೆ ಗ್ರಾಮದಲ್ಲಿ ಇಂದು ಗ್ರಾಮ ದೇವತೆ ಕರಿಯಮ್ಮ ದೇವಿಯವರ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.  ಮೂರುಕಣ್ಣು ಮಾರಮ್ಮ ದೇವಿಯ ನೇತೃತ್ವದಲ್ಲಿ ಭಕ್ತಾಧಿಗಳು ರಥವನ್ನು ಎಳೆದರು.  ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

(ಚಿತ್ರ : ಮಾಡಾಳು ನಂದೀಶ)
ಅರಸೀಕೆರೆ ತಾಲ್ಲೂಕು ಕಣಕಟ್ಟೆ ಗ್ರಾಮದ ಕರಿಯಮ್ಮದೇವಿ ರಥೋತ್ಸವ

ಅರಸೀಕೆರೆ ತಾಲ್ಲೂಕು ಕಣಕಟ್ಟೆ ಗ್ರಾಮದ ಕರಿಯಮ್ಮದೇವಿ ರಥೋತ್ಸವ

Share:

ಮಂಗಳವಾರ, ಮೇ 2, 2017

ಅರಸೀಕೆರೆ ಪಟ್ಟಣದಲ್ಲಿ ಭಗೀರಥ ಜಯಂತಿ

Arsikere :

ಅರಸೀಕೆರೆ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಭಗೀರಥ ಜಯಂತಿ ಅಚರಣೆಯನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ರವರು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು.  ಭಗೀರಥ ಪೀಠದ ಶ್ರೀ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿದ್ದರು.  ತಾ.ಪಂ. ಅಧ್ಯಕ್ಷೆ ಮಂಜುಳಾಬಾಯಿ, ನಗರ ಪ್ರಾಧಿಕಾರದ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ಭಗೀರಥ ಸಮಾಜದ ಮುಖಂಡರುಗಳು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

(ಚಿತ್ರ/ಮಾಹಿತಿ : ಲಕ್ಷ್ಮೀಶ್ ಬಾಬು)


Share:

ಸೋಮವಾರ, ಮೇ 1, 2017

ಅರಸೀಕೆರೆ ಪಟ್ಟಣದಲ್ಲಿ ಕಾರ್ಮಿಕರ ದಿನಾಚರಣೆ

ಅರಸೀಕೆರೆ ಪಟ್ಟಣದಲ್ಲಿ ಕಾರ್ಮಿಕರ ದಿನಾಚರಣೆ


ಕಾರ್ಮಿಕರ ದಿನಾಚರಣೆಯ ಅಂಗವಾಗಿ ಸೋಮವಾರದಂದು ಬೆಳಿಗ್ಗೆ ಅರಸೀಕೆರೆ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ, ಮಂಡಿ ಕಾರ್ಮಿಕರ ಸಂಘ, ಟೌನ್ ಲೋಡರ್ಸ್ ಯೂನಿಯನ್, ಮಜ್ದೂರ್ ಲೋಡರ್ಸ್ ಯೂನಿಯನ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಂಡಿ ಕಾರ್ಮಿಕರ ಸಂಘದ 44ನೇ ವರ್ಷದ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.  ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು, ನಗರಸಭಾ ಅಧ್ಯಕ್ಷ ಎಂ.ಸಮೀಉಲ್ಲಾ, ಎಪಿಎಂಸಿ ಕಾರ್ಯದರ್ಶಿ ಸಿದ್ದರಾಜು, ವರ್ತಕರುಗಳು, ರೈತ ಮುಖಂಡರುಗಳು ಹಾಗೂ ಯೂನಿಯನ್ ಸದಸ್ಯರುಗಳು ಪಾಲ್ಗೊಂಡಿದ್ದರು.

(ಚಿತ್ರ : ಮಾಡಾಳು ನಂದೀಶ)


Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....