ಭಾನುವಾರ, ಏಪ್ರಿಲ್ 30, 2017

ಅರಸೀಕೆರೆಯಲ್ಲಿ ಶ್ರೀ ಶಂಕರ ಜಯಂತಿ

ಶ್ರೀ ಶಂಕರ ಜಯಂತಿ


ಅರಸೀಕೆರೆ ಪಟ್ಟಣದ ವಾಚನಾಲಯ ರಸ್ತೆಯಲ್ಲಿರುವ ಶ್ರೀ ಭವಾನಿ ಶಂಕರ ದೇವಾಲಯದಲ್ಲಿ ಭಾನುವಾರದಂದು ಆದಿಗುರು ಶ್ರೀ ಶಂಕರ ಭಗವತ್ಪಾದರ ಜಯಂತಿ ಆಯೋಜಿಸಲಾಗಿತ್ತು.  ಶ್ರೀ ಶಂಕರ ಜಯಂತಿಯ ಅಂಗವಾಗಿ ಬೆಳಿಗ್ಗೆ 10 ಗಂಟೆಯಿಂದ ಭವಾನಿ ಶಂಕರಸ್ವಾಮಿಯವರಿಗೆ ರುದ್ರಾಭಿಷೇಕ, ಮಹಾ ಮಂಗಳಾರತಿ ನಡೆಯಿತು.  ಅರಸೀಕೆರೆ ಶಾಸಕರಾದ ಶ್ರೀ.ಕೆ.ಎಂ.ಶಿವಲಿಂಗೇಗೌಡರು ಶ್ರೀ ಶಂಕರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.  ಮಾಜಿ ಸಚಿವ ಶ್ರೀ.ಹೆಚ್.ಡಿ.ರೇವಣ್ಣನವರು, ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ವಿಪ್ರ ಬಾಂಧವರು ಪಾಲ್ಗೊಂಡಿದ್ದರು.

(ಚಿತ್ರ : ಟಿ.ಸಿ. ಪೂರ್ಣಚಂದ್ರ)


Share:

ಶನಿವಾರ, ಏಪ್ರಿಲ್ 29, 2017

ಅರಸೀಕೆರೆಯಲ್ಲಿ ಬಸವ ಜಯಂತಿ

ಅರಸೀಕೆರೆಯಲ್ಲಿ ಬಸವ ಜಯಂತಿ



ಬಸವ ಜಯಂತಿ ಪ್ರಯುಕ್ತ ಅರಸೀಕೆರೆ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಇಂದು ಬೆಳಿಗ್ಗೆ ಜಗಜ್ಯೋತಿ ಬಸವಣ್ಣನವರ ಭಾವಚಿತ್ರಕ್ಕೆ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ಪುಷ್ಪನಮನ ಸಲ್ಲಿಸಿದರು.  ತಾಲ್ಲೂಕಿನ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ವೀರಶೈವ ಮುಖಂಡರುಗಳು ಉಪಸ್ಥಿತದಿದ್ದರು.  ಸಾಯಂಕಾಲ ನಡೆದ ಬೃಹತ್ ಶೋಭಾಯಾತ್ರೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು.




Share:

ಬುಧವಾರ, ಏಪ್ರಿಲ್ 26, 2017

ಸಿಡಿಲಿನ ಆರ್ಭಟಕ್ಕೆ ಧರೆಗುರುಳಿದ ತೆಂಗಿನ ಮರ

ಅರಸೀಕೆರೆ ತಾಲ್ಲೂಕು ಮಾಡಾಳು ಗ್ರಾಮದಲ್ಲಿ ಬುಧವಾರ ಸಂಜೆ ಮಿಂಚು, ಗುಡುಗಿನೊಂದಿಗೆ ವರುಣನ ಆರ್ಭಟ ಜೋರಾಗಿತ್ತಾದರೂ ಮಳೆ ಹನಿಯದೇ ನಿರಾಸೆ ಮೂಡಿಸಿತು. ಆದರೆ ಭಾರೀ ಶಬ್ದದೊಂದಿಗೆ ಬಡಿದ ಸಿಡಿಲಿನ ಪರಿಣಾಮ ಎರಡು ಫಲವತ್ತಾದ ತೆಂಗಿನ ಮರಗಳು ಬೆಂಕಿಹತ್ತಿ ಧಗಧಗನೆ ಉರಿದು ನೆಲಕ್ಕುರುಳಿದವು.


(ಚಿತ್ರ/ಮಾಹಿತಿ : ಮಾಡಾಳು ನಂದೀಶ)
ಅರಸೀಕೆರೆ ತಾಲ್ಲೂಕು ಮಾಡಾಳು ಗ್ರಾಮದಲ್ಲಿ ಸಿಡಿಲಿನ ಆರ್ಭಟಕ್ಕೆ ಧರೆಗುರುಳಿದ ತೆಂಗಿನ ಮರ

ಅರಸೀಕೆರೆ ತಾಲ್ಲೂಕು ಮಾಡಾಳು ಗ್ರಾಮದಲ್ಲಿ ಸಿಡಿಲಿನ ಆರ್ಭಟಕ್ಕೆ ಧರೆಗುರುಳಿದ ತೆಂಗಿನ ಮರ


Share:

ಸೋಮವಾರ, ಏಪ್ರಿಲ್ 24, 2017

ಅರಸೀಕೆರೆ ತಾಲ್ಲೂಕು ಹಾರನಹಳ್ಳಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕರಿಂದ ಚಾಲನೆ

ಹಾರನಹಳ್ಳಿಅರಸೀಕೆರೆ ಹಾಸನ ರಾಜ್ಯ ರಸ್ತೆ ಹಾರನಹಳ್ಳಿ ಯಿಂದ ಗ್ರಾಮದ  ಚನ್ನಕೇಶವ ದೇವಾಲಯಕ್ಕೆ ಹೋಗುವ ಮುಖ್ಯ ರಸ್ತೆ ಹಾಗೂ ಮಸೀದಿಗೆ ಹೋಗುವ  ಮುಖ್ಯ ರಸ್ತೆ  ಯಿಂದ ಕಾಂಕ್ರೀಟ್ ರಸ್ತೆ ಕಾಗಾರಿಗೆ ಶಾಸಕ ಕೆ.ಎಂ.ಶಿವಲೀಂಗೇಗೌಡ ಭೂಮಿ ಪೂಜೆ ಸಲ್ಲಿಸಿದರು ನಂತರ ಮಾತನಾಡಿ ಲೋಕೋಪಯೋಗಿ ಇಲಾಖೆಯಿಂದ ಕೊಡುರಸ್ತೆ ಹಾಗೂ ಚರಂಡಿ ಮಾಡಿಸಲು 50 ಲಕ್ಷ ಬಿಡುಗಡೆ ಮಾಡಿಸಿರುವುದಾಗಿ ಶಾಸಕರು ತಿಳಿಸಿದರು. ಹಾರನಹಳ್ಳಿ ದೊಡ್ಡ ಗ್ರಾಮವಾಗಿದ್ದು ಸುಮಾರು 1ಕೋಟಿಗಿಂ ಹೆಚ್ಚು ಅನುದಾನ ಹಾರನಹಳ್ಳಿ ಸಮಗ್ರ ಅಭಿವೃದ್ದಿಗೆ   ನೀಡಿರುವುದಾಗಿ ತಿಳಿಸಿದರು. ಹಾರನಹಳ್ಳಿ ಸೋಮೇಶ್ವರ ದೇವಾಲಯ, ಕೋಟೆ ದುರಸ್ತಿ ಬಗ್ಗೆ ಪ್ರಾಚ್ಯ ವಸ್ತು ಇಲಾಖೆಗೆ ಅಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.  ಮುಂದಿನ ವರ್ಷ ಶ್ರವಣಬೆಳಗೂಳ ಮಸ್ತಕಾಭಿಷೇಕ  ಇರುವುದರಿಂದ ತಾಲ್ಲೂಕಿನ ಪ್ರವಾಸಿ ಸ್ಥಳ, ಮೂಲಭೂತ ಸೌಕರ್ಯ ನಾಫಲಕ ಹೀಗೆ ಅನೇಕ ಸೌಕರ್ಯಗಳ ಬಗ್ಗೆ ಅಧಿಕಾರಿಗಳಿಗೆ ಪ್ರವಾಸೋದ್ಯಮ ಇಲಾಖೆ ಮನವಿ ಸಲ್ಲಿಸಲಾಗಿದೆ ಎಂದರು  ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಅಪ್ಸರ್,ಹಿರಿಯಣ್ಣ, ಪಿಡಿಓ ರವಿ, ಧರ್ಮಣ್ಣ, ನಾಗರಾಜು ರಾಜಣ್ಣ,ಜಗದೀಶ್,ಪ್ರಕಾಶ್, ಕೆಲವು ಇಲಾಖೆ ಅಧಿಕಾರಿಗಳು ಗ್ರಾಮಸ್ಥರು ಭಾಗವಹಿಸಿದರು.


(ಚಿತ್ರ - ವರದಿ : ಹಾರನಹಳ್ಳಿ ಚಿನ್ಮಯ್)


Share:

ಡಾ.ರಾಜಕುಮಾರ್: ಬರೆಯದ ಕವಿತೆಯ ರೂಪಕ

ಬರೆಯದ ಕವಿತೆಯ ರೂಪಕ ಡಾ.ರಾಜ್


‘ಅಣ್ಣ'- ಪ್ರೀತಿಗೆ, ಹಿರಿತನಕ್ಕೆ, ಭಯಕ್ಕೆ ಮತ್ತು ಕೆಲವೊಮ್ಮೆ ದಾಸ್ಯವನ್ನು ಪ್ರದರ್ಶಿಸಲು ಬಳಸುವ ಪದ. ನಿಜ, ‘ಅಣ್ಣ' ಎಂದು  ಡಾ.ರಾಜಕುಮಾರ್‌ರನ್ನು ಯಾರು ಯಾರು ಯಾವ ಯಾವ ಕಾರಣಕ್ಕೆ ಕರೆದರು ಎನ್ನುವುದರ ಮೇಲೆ, ಅವರು ಆ ಅಣ್ಣನೊಂದಿಗಿಟ್ಟುಕೊಂಡಿದ್ದ ಸಂಬಂಧಗಳ ಅರಿವು ನಮಗಾಗುತ್ತದೆ.

ಸತ್ತ ಶ್ರೇಷ್ಠರೆಲ್ಲ ನಕ್ಷತ್ರಗಳಾಗಿ ಮಿನುಗುತ್ತಾರೆನ್ನುವುದು ಒಂದು ರಮ್ಯ ಕಲ್ಪನೆ. ಆದರೆ ಚಿತ್ರರಂಗದ ‘ಈ ತಾರೆ' ಕನ್ನಡದ ನೆಲದಲ್ಲಿ ಬರೀ ಮಿನುಗಲಿಲ್ಲ. ಬದಲಿಗೆ ಸೂರ್ಯನಾಗಿ ಪ್ರಖರಿಸಿದ್ದು ಈಗ ಇತಿಹಾಸ. ಅವರ ನಿಧನದಿಂದ ಒಂದು ಯುಗ ಮುಕ್ತಾಯವಾಯಿತೆಂದು ಇತ್ತೀಚಿನ ಬೆಳವಣಿಗೆಗಳು ದೃಢಪಡಿಸಿವೆ.

ಸಾಮಾನ್ಯರು ಸತ್ತಾಗ ಕೂಡ ಸಂತಾಪ ಸೂಚಕ ಸಭೆಗಳು ಸೂತಕ ಕಳೆಯುವವರೆಗೂ ಮಾತಲ್ಲಿ, ಆಚರಣೆಯಲ್ಲಿ ನಡೆಯುತ್ತಲೇ ಇರುತ್ತವೆ.  ರಾಜ್‌ರಂಥ ‘ಜನಪ್ರಿಯ'ರು ನಿಧನರಾದಾಗ ಆ ಸಂತಾಪದ ಕಣ್ಣೀರ ಹನಿಗಳನ್ನು ಕೂಡಿಸಿದರೆ ಸಾಗರವಾಗುವುದು ನಿಶ್ಚಿತ.  ಆದರೆ ರಾಜ್ ಕುರಿತ ಪುಸ್ತಕಗಳು, ಆಡಿಯೊ, ವಿಡಿಯೊ ಸಿ.ಡಿಗಳು, ಮಾರ್ಕೆಟ್ಟಿನ ತುಂಬ ತುಂಬಿಕೊಳ್ಳುತ್ತಿರುವಾಗ, ಸಾವು ಕೂಡ ಹೇಗೆ ವ್ಯಾಪಾರದ ಸರಕಾಗಿ ಬಿಡುತ್ತದೆ ಮತ್ತು ಇಂಥ ಚರಮ ಶ್ಲೋಕ ಬರೆಯಲೆಂದೇ ಕಾದು ಕುಳಿತವರ ಮನಸ್ಥಿತಿಯ ಬಗ್ಗೆಯೂ ಸಂಕಟವಾಗುತ್ತದೆ.

ಡಾ.ರಾಜ್ ನಿಧನದ ತರುವಾಯ, ಶವಸಂಸ್ಕಾರದವರೆಗೂ ಟಿ.ವಿ.ವಾಹಿನಿಗಳು ಬಿತ್ತರಿಸಿದ್ದನ್ನು ಸ್ಮರಿಸಿಕೊಂಡರೆ, ಆಗ ಸೇರಿದ್ದ ಜನರ ರೋಷಾವೇಷಗಳನ್ನು ನೆನೆಸಿಕೊಂಡರೆ ಎದೆ ತುಂಬಿ ಬರುತ್ತದೆ.  ಮೃತರು ತಮ್ಮ ಜೀವನದುದ್ದಕ್ಕೂ ತೋರಿದ ಸಜ್ಜನಿಕೆ, ಸರಳತೆ ಮತ್ತು ಸದಭಿರುಚಿಗಳನ್ನು ಕ್ಷಣಾರ್ಧದಲ್ಲಿ ಮರೆತು, ಮತ್ತೊಂದು ಬಗೆಯ ಐತಿಹಾಸಿಕ ಸ್ಮಾರಕವನ್ನಾಗಿಸಿದ ರೀತಿಯೇ ಕ್ಲೀಷೆ ಎನ್ನಿಸುತ್ತಿದೆ.

ಡಾ.ರಾಜ್ ಬದುಕಿಗೆ ಸಾಂಸ್ಕೃತಿಕ ಮಹತ್ವವನ್ನು ಈಚೆಗೆ ಹೊರಿಸಹೊರಟವರೆಲ್ಲ ಸೂರ್ಯನನ್ನು ತೋರಿಸಲು ದೀಪ ಹಿಡಿಯುವವರ ಹಾಗೆ ಕಾಣುತ್ತಿದ್ದಾರೆ. ವಯಸ್ಸು, ವಿದ್ಯೆ, ಅಂತಸ್ತುಗಳ ಬೇಧವಿಲ್ಲದೆ ನೋಡುಗರೆಲ್ಲರನ್ನೂ ಪ್ರಭಾವಿಸುವ ಚಲನಚಿತ್ರ ಮಾಧ್ಯಮವನ್ನು ಐದು ದಶಕಗಳ ಕಾಲ ಅಕ್ಷರಶಃ ಮುನ್ನಡೆಸಿದ ರಾಜ್, ಸಮಾಜ ವಿರೋಧಿ ಆಶಯಗಳನ್ನೆಂದೂ ತಮ್ಮ ಚಿತ್ರಗಳಲ್ಲಿ ತೋರಿಸಿಯೇ ಇಲ್ಲ.  ಅವರು ಒಂದೆರಡು ಚಿತ್ರಗಳಲ್ಲಿ ಕಳ್ಳನಾಗಿ ನಟಿಸಿದ್ದರೂ, ಆ ಪಾತ್ರಗಳಿಗೂ ನೀಡಿದ್ದ ನೈತಿಕ ಚೌಕಟ್ಟು ಮತ್ತು ಚಿತ್ರದ ಅಂತ್ಯದಲ್ಲಿ ಆ ಪಾತ್ರಗಳು ಬದಲಾಗುತ್ತಿದ್ದುದನ್ನು ಇಲ್ಲಿ ಹೇಳಲೇಬೇಕು. ಮನರಂಜನೆಯೇ ಮುಖ್ಯವಾಗುವ ಚಲನಚಿತ್ರ ಮಾಧ್ಯಮವನ್ನು ತಮ್ಮೆಲ್ಲ ತಿಕ್ಕಲುತನ, ಡಾಂಭಿಕತೆ ಮತ್ತು ಮೌಢ್ಯಗಳ  ಪ್ರಸಾರಕ್ಕೆ ಬಹುತೇಕರು ಬಳಸುತ್ತಿರುವಾಗ, ಕಳೆದ ಐವತ್ತು ವರ್ಷಗಳ ವೃತ್ತಿ ಜೀವನದುದ್ದಕ್ಕೂ ರಾಜ್ ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರಗಳನ್ನೆ ಆಯ್ಕೆ ಮಾಡಿಕೊಂಡಿರುವುದು ಅವರು ಅಂಟಿಕೊಂಡಿದ್ದ ಮೌಲ್ಯಗಳನ್ನು ಸಾರಿ ಹೇಳುತ್ತವೆ.

‘ಸಂಸ್ಕೃತಿ'ಯನ್ನು ಕುರಿತು ಬಾಯಿಗೆ ಬಂದಂತೆ ಮಾತನಾಡುವ ನಮ್ಮ ಬಹುತೇಕ ಬುದ್ಧಿ ಜೀವಿಗಳು ರಾಜ್ ಬೆಳಸಿದ, ಉಳಿಸಿದ ಸಂಗತಿಗಳ ಬಗ್ಗೆ ಏಕೆ ಮೌನ ವಹಿಸುತ್ತಾರೋ ತಿಳಿಯುವುದಿಲ್ಲ. ರಾಜ್ ಚಿತ್ರಗಳಲ್ಲಿ ನಟಿಸುವುದನ್ನು ಬಿಟ್ಟು ವರ್ಷಗಳೇ ಕಳೆದಿದ್ದರೂ ಅವರ ಜನಪ್ರಿಯತೆ ಕೊಂಚವೂ  ಕಡಿಮೆಯಾಗಿರಲಿಲ್ಲ. ಯಾರು ಏನು ಹೇಳಲಿ, ಬಿಡಲಿ, ಕೋಟ್ಯಂತರ ಜನರ ಹೃದಯ ಸಿಂಹಾಸನಾಧೀಶ್ವರನಾಗಿದ್ದ ಈ ಬಂಗಾರದ ಮನುಷ್ಯನ ಬಗ್ಗೆ ಅಭಿಮಾನ ತುಂಬಿ ಬರುತ್ತದೆ.

‘ಅಭಿಮಾನಿ ದೇವರುಗಳೆ'  -ರಾಜ್ ತಮ್ಮ ಅಭಿಮಾನಿಗಳನ್ನು ಕರೆಯುತ್ತಿದ್ದ ರೀತಿ ಇತರರಿಗೆ ಅನುಕರಣೀಯ. ಅವರು ಹಾಗೆಂದ ಮರುಕ್ಷಣವೇ ತುಂಬಿ ಬರುತ್ತಿದ್ದ ಹರ್ಷೊದ್ಗಾರಗಳನ್ನು ನೆನಪಿಸಿಕೊಳ್ಳುವುದೇ ಒಂದು ಬಗೆಯ ರೋಮಾಂಚನ. ತಾವು ಯಾರಿಂದಾಗಿ ಎತ್ತರಕ್ಕೇರಿದೆವೋ ಅದಕ್ಕೆ ಕಾರಣರಾದವರನ್ನು ಮತ್ತೆ ಮತ್ತೆ ನೆನೆಯುವುದು ಕೃತಜ್ಙತೆಯ ಭಾಗವೆನ್ನುವುದು ಆ ಮೇರು ನಟನಿಗೆ ತಿಳಿದಿತ್ತು.

ಪ್ರಾಯಶಃ ರಾಜ್‌ರಷ್ಟು ವೈವಿಧ್ಯಮಯ ಪಾತ್ರಗಳು ಕನ್ನಡದ ಇನ್ನಾವ ನಟನಿಗೂ ಸಿಗಲಾರವು. ಇತ್ತೀಚಿನ ಒಬ್ಬ ನಟ ಹೆಚ್ಚೆಂದರೆ ಎಷ್ಟು ವರ್ಷ ಈ ರಂಗದಲ್ಲುಳಿಯಬಲ್ಲ? ಖಂಡಿತ ಐವತ್ತು ವಸಂತಗಳನ್ನಂತೂ ಪೂರೈಸಲು ಸಾಧ್ಯವಿಲ್ಲ! ಸರಿಸುಮಾರು ಅರ್ಧ ಶತಮಾನಗಳ ಕಾಲ ಚಿತ್ರೋದ್ಯಮದ ಅನಭಿಷಕ್ತ ದೊರೆಯಂತಿದ್ದ ರಾಜ್, ಸಾಮಾಜಿಕ ಚಿತ್ರಗಳಿಗಿಂತ ಪೌರಾಣಿಕ, ಐತಿಹಾಸಿಕ ಚಿತ್ರಗಳಿಂದಲೇ ಹತ್ತಿರವಾದವರು. ಅವರ ಉಚ್ಚಾರ, ಸಂಭಾಷಣೆ ಒಪ್ಪಿಸುತ್ತಿದ್ದ ರೀತಿಯೇ ಅವರನ್ನು ಎತ್ತರಕ್ಕೆ ಒಯ್ದ ಸಂಗತಿಗಳು. ಮುಪ್ಪಲ್ಲೂ ಅವರ ‘ಬಾಡಿ ಲಾಂಗ್ವೇಜ್' ಮತ್ತು ಪ್ರಮಾಣ ಬದ್ಧ ಅಂಗ ಸೌಷ್ಟವ ಹಾಗೆಲ್ಲ ಮರೆಯುವಂಥವಲ್ಲ. ಕೃಷ್ಣದೇವರಾಯ, ಕವಿರತ್ನ ಕಾಳಿದಾಸ, ಮಯೂರ, ಬಬೃವಾಹನರು ಹೇಗಿದ್ದರೋ ಏನೋ ನಾವಂತೂ ಆ ಮಹಾ ಮಹಿಮರನ್ನು ರಾಜ್ ಮೂಲಕವೇ ಕಂಡುಕೊಂಡಿದ್ದೇವೆ.

ಜಾತಿ ಬಲ, ಹಣ ಬಲ, ವಿದ್ಯಾ ಬಲಗಳಿಲ್ಲದೆಯೇ ಬರಿಯ ಅಭಿನಯ ಬಲವೊಂದರಿಂದಲೇ ಕಲಾ ಸಾಮ್ರಾಟನಾಗಿ ಮೆರೆದದ್ದು ವಿಸ್ಮಯದ ಪರಮಾವಧಿ.  ಚಿತ್ರವೊಂದರ ಬಿಡುಗಡೆಯ ದಿನದ ಪ್ರಥಮ ಪ್ರದರ್ಶನಕ್ಕೆ ನಡೆದ ನುಗ್ಗಾಟದಲ್ಲಿ ಜೀವ ಕಳೆದುಕೊಂಡ ಉದಾಹರಣೆಗಳಿರುವುದು ಕೇವಲ ರಾಜ್‌ಗೆ ಮಾತ್ರ. ಪ್ರಾಯಶಃ ರಾಜ್ ನಂಬಿದ್ದು ಕಲೆಯನ್ನು ಮಾತ್ರ. ಅದು ಅವರೊಳಗಿನ ಕಲಾವಿದನಿಗಿದ್ದ ಸಜ್ಜನಿಕೆಯ ದ್ಯೋತಕ.ರಾಜ್ ರಂಗಭೂಮಿಯ ಕೊಡುಗೆ. ಅವರ ಇಷ್ಟದಂತೆ ನಡೆದುಕೊಳ್ಳಲು ಅವರಿಗೆ ಬಿಟ್ಟಿದ್ದಿದ್ದರೆ ರಾಜ್ ರಂಗಭೂಮಿಯ ಸಂಪರ್ಕವನ್ನು ಕಡಿದುಕೊಳ್ಳುತ್ತಲೇ ಇರಲಿಲ್ಲವೇನೋ!

ಅವರ ನೇತೃತ್ವ ಸಿಗದಿದ್ದಲ್ಲಿ ಗೋಕಾಕ್ ಚಳವಳಿ, ಅದಕ್ಕೆ ಸಿಕ್ಕ ವ್ಯಾಪಕ ವಿಸ್ತಾರಗಳನ್ನು ಪಡೆಯುತಿತ್ತೋ ಇಲ್ಲವೋ ಊಹಿಸುವುದು ಕಷ್ಟದ ಕೆಲಸ. ಆ ವರದಿಯನ್ನು ಕೊಟ್ಟ ಡಾ.ವಿ.ಕೃ.ಗೋಕಾಕ್ ಯಾರೆಂದು ತಿಳಿಯದ, ಆ ವರದಿಯ ವಿವರಗಳೇನೆಂಬುದನ್ನೂ ಅರಿಯದ, ಆದರೆ ರಾಜ್ ನೇತೃತ್ವ ವಹಿಸಿದ ಕಾರಣಕ್ಕೆ ಅದನ್ನು ಬೆಂಬಲಿಸಿದ, ಅದೆಷ್ಟೋ ಮುಗ್ಧ ಜೀವಿಗಳಿದ್ದಾರೆನ್ನ್ನುವ ಸತ್ಯದಿಂದಲೂ ನಾವು ಪಾಠ ಕಲಿಯಲೇ ಇಲ್ಲ. ಕೆಂಪೇಗೌಡ ರಸ್ತೆಯ ಚಿತ್ರಮಂದಿರಗಳಲ್ಲಿ ಕನ್ನಡದ ಚಿತ್ರಗಳಿಗೆ ಅವಕಾಶ ಸಿಗದಿದ್ದಾಗಲೂ ರಾಜ್ ಮೊಳಗಿಸಿದ ರಣ ದುಂಧುಭಿಯೇ ಅದನ್ನು ಆಗ ಮಾಡಿತೆಂದರೆ ಅದು ಅವರ ಶಕ್ತಿ ಸಾಮರ್ಥ್ಯದ ಕುರುಹಲ್ಲದೇ ಮತ್ತೇನು? ಇತರ ಭಾಷೆಗಳಿಂದ ಡಬ್ಬಿಂಗ್ ಆದ ಚಿತ್ರಗಳನ್ನು ಉಳಿದೆಲ್ಲ ಭಾಷೆಗಳು ಒಪ್ಪಿಕೊಂಡರೂ, ಕನ್ನಡ ಚಿತ್ರೋದ್ಯಮದ ಉಳಿವಿಗಾಗಿ ಅದನ್ನು ವಿರೋಧಿಸಿ ವ್ಯಾಪಕವಾಗಿ ಚಳವಳಿ ನಡೆಸಿದ ಕೀರ್ತಿ ರಾಜ್‌ಗಲ್ಲದೆ ಮತ್ತಾರಿಗೂ ಸಲ್ಲುವುದಿಲ್ಲ.

ಅವರು ‘ಸಂಪತ್ತಿಗೆ ಸವಾಲ್'ನ ನಂತರ ತಮ್ಮ ಚಿತ್ರಗಳಿಗೆ ತಾವೇ ಹಾಡ ತೊಡಗಿದಾಗ, ಪಿ.ಬಿ.ಯವರ ಅಭಿಮಾನಿಗಳು ಮುನಿದು ಗೊಣಗಿಕೊಂಡರು. ಪಿ.ಬಿ ಯವರದು ಸುಮಧುರ ಕಂಠವೇನೋ ಹೌದು. ಅವರ ಸ್ವರ ಮಾಧುರ್ಯವೂ ಅಧ್ಭುತವಾದುದು, ನಿಜ.  ಆದರೆ ಅದರಲ್ಲಿ ವೈವಿಧ್ಯತೆ ಇತ್ತೆ? ಅವರು ರಾಜ್‌ಗೆ ಹಾಡಿದ ಹಾಗೇ ಕಲ್ಯಾಣಕುಮಾರ್‌ಗೆ, ಉದಯಕುಮಾರ್‌ಗೆ ಹಾಡಿದ್ದಾರೆ. ಇಲ್ಲಿ ಎಸ್.ಪಿ. ಚಿತ್ರದ ನಾಯಕರಿಗೆ ತಕ್ಕಂತೆ ಹಾಡುವುದನ್ನು ಗಮನಿಸ ಬೇಕು.

ಎಷ್ಟೆಲ್ಲ ಖ್ಯಾತಿ, ಜನಪ್ರಿಯತೆ ಮತ್ತು ಹಣ ಸಂಪಾದಿಸಿದರೂ ರಾಜ್ ಚಿತ್ರ ರಂಗಕ್ಕೇನು ಮಾಡಿದ್ದಾರೆ ಎಂದು ಕೇಳುವವರೂ ನಮ್ಮ ನಡುವೆ ಇದ್ದಾರೆ. ಒಪ್ಪೋಣ. ಒಂದು ವೇಳೆ ಅವರು ಸ್ಟುಡಿಯೋ ಸ್ಥಾಪಿಸಿದ್ದಿದ್ದರೆ ಅದನ್ನು ನಡೆಸುವ ಹೈರಾಣದಲ್ಲಿ ಅವರ ಅಧ್ಭುತ ಚಿತ್ರಗಳಿಂದ ನಾವೆಲ್ಲ ವಂಚಿತರಾಗಿರುತ್ತಿದ್ದೆವು. ಅಥವ ಈಗಿನ ನಮ್ಮ ನಾಯಕ ನಟರಂತೆ ಅವರೇ ಚಲನ ಚಿತ್ರದ ಎಲ್ಲ ವಿಭಾಗಗಳಲ್ಲೂ ಕೈ ಆಡಿಸಿದ್ದಿದ್ದರೆ ಚಿ.ಉದಯ ಶಂಕರ್, ಪಂತುಲು, ದೊರೆ-ಭಗವಾನ್, ಲಿಂಗಪ್ಪ, ಹುಣಸೂರು ಮುಂತಾದವರೆಲ್ಲ ಎಲ್ಲಿರುತ್ತಿದ್ದರು? ಅವರು ಡಬ್ಬಿಂಗ್ ವ್ಯಾಪಕತೆ ತಗ್ಗಿಸಲು ಗೆಳೆಯರ ಜೊತೆ ಸೇರಿ ನಿರ್ಮಿಸಿದ ರಣಧೀರ ಕಂಠೀರವನನ್ನು ಹಾಗೆಲ್ಲ ಮರೆಯಲಾದೀತೆ? ರಾಜಕುಮಾರ್ ಮತ್ತು ನರಸಿಂಹರಾಜು ಜೋಡಿ ಮನರಂಜನೆಯ ಮೂಲಕವೇ ನೋಡುಗರಿಗೆ ಕೊಡುತ್ತಿದ್ದ ನೀತಿ ಬೋಧೆ ಈಗಿನ ಚಿತ್ರಗಳಲ್ಲಿ ಕಲ್ಪಿಸಿಕೊಳ್ಳಲಾದರೂ  ಸಾಧ್ಯವೆ?

ಚಲನ ಚಿತ್ರ ಮಾಧ್ಯಮ ಸಾಂಸ್ಕೃತಿಕ ಮಾಧ್ಯಮವಾಗಿ ಉಳಿಯಲಾರದಂಥ ನೀಚತನ ಇಂದು ಆ ಉದ್ದಿಮೆಯಲ್ಲಿ ವ್ಯಾಪಕವಾಗಿದೆ. ಇವತ್ತು ಬರುತ್ತಿರುವ ಒಂದೇ ಒಂದು ಚಿತ್ರವನ್ನು, ರಾಜ್ ಮಕ್ಕಳ ಚಿತ್ರಗಳನ್ನೂ ಸೇರಿದಂತೆ, ಮನೆಯವರೆಲ್ಲ ಒಟ್ಟಿಗೆ ಕುಳಿತು ನೋಡಲು ಸಾಧ್ಯವೇ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ.

ಇಷ್ಟೆಲ್ಲ ವರ್ಷಗಳ ಕಾಲ ನಮ್ಮ ಹೃದಯ ಸಿಂಹಾಸನದಲ್ಲಿ ಕುಳಿತು ನಮ್ಮ ಕನಸುಗಳಿಗೆಲ್ಲ ತಮ್ಮ ನಾಯಕನ ವರ್ಚಸ್ಸಿನಿಂದಲೇ ಉತ್ತರ ಕೊಡುತ್ತಿದ್ದ ರಾಜ್ ಬಗ್ಗೆ ನಮ್ಮ ಜನಸಾಮಾನ್ಯರ ಪ್ರೀತಿ ಆಕಾಶದೆತ್ತರದ್ದು. ಆದರೆ, ನಮ್ಮ ಲೇಖಕರು, ಕವಿಗಳಿಗೆ ರಾಜ್ ಒಂದು ವಸ್ತುವಾಗಿ ಕಾಡದೇ ಇದ್ದುದು ಅತಿ ಆಶ್ಚರ್ಯವನ್ನು, ಅನುಮಾನವನ್ನು ಹುಟ್ಟುಹಾಕುತ್ತದೆ. ಕೇವಲ ಕುತೂಹಲಕ್ಕೆಂದು ಅದನ್ನು ಶೋಧಿಸ ಹೊರಟರೆ, ದೊಡ್ದ ರಂಗೇ ಗೌಡ ಮತ್ತು ಕಲ್ಯಾಣ್ ಬಿಟ್ಟು ಉಳಿದವರಾರೂ ರಾಜ್ ಮೇಲೆ ಕವಿತೆ ಬರೆದೇ ಇಲ್ಲ.ಇವರಿಬ್ಬರೂ ಚಿತ್ರ ರಂಗಕ್ಕೆ ಸೇರಿದವರಾದ್ದರಿಂದ ರಾಜ್ ಬರಹಗಾರರ  ವಲಯದ ಮೆಲೆ ಯಾವ ಪ್ರಭಾವವನ್ನೂ ಉಂಟುಮಾಡಲಿಲ್ಲವೇ ಎನ್ನಿಸತೊಡಗುತ್ತದೆ.  ಆದರೆ ರಾಜ್‌ರನ್ನೇಕೆ, ಇಡೀ ಚಿತ್ರರಂಗವನ್ನೇ ಸೀರಿಯಸ್ ಕಲ್ಚರಲ್ ವಲಯವನ್ನಾಗಿ ಗ್ರಹಿಸದ ಆಷಾಢ ಭೂತಿತನ ನಮ್ಮ ಬರಹಗಾರರಲ್ಲಿದೆಯೋ ಅಥವ ಚಿತ್ರ ರಂಗವೇ ಇವರ ಮಿತಿಗಳನ್ನರಿತು ದೂರವಿಟ್ಟಿದೆಯೋ ಇನ್ನೂ ಇತ್ಯರ್ಥ ವಾಗಬೇಕಾದ ಸಂಗತಿಯಾಗಿದೆ.

ರಾಜ್ ಮೇಲೆ ಕವಿತೆ ಕಟ್ಟದ ಮಾತ್ರಕ್ಕೆ ಅಥವ ಅವರ ಸಾಧನೆ ಕುರಿತು ಸೆಮಿನಾರ್ ಮಾಡದ ಮಾತ್ರಕ್ಕೆ ಅವರ ಸಾಧನೆಗಳೇನೂ ಮರೆಯಾಗುವುದಿಲ್ಲ. ಅವರ ಅಭಿಮಾನಿಗಳು, ಅಭಿಮಾನಿ ಎಂದರೆ, ನಕ್ಷತ್ರ ಹೊತ್ತುಕೊಂಡು ಮೆರವಣಿಗೆ ಮಾಡಿ ಉಪವಾಸವಿದ್ದು ಮೊದಲ ಪ್ರದರ್ಶನ ನೋಡುವವನಲ್ಲ, ತನ್ನ ಬದುಕಿಗೆ ರಾಜ್ ಪಾತ್ರವೊಂದನ್ನು ಮಾದರಿಯನ್ನಾಗಿಸಿಕೊಂಡು ಅದನ್ನೇ ಆದರ್ಶವನ್ನಾಗಿ ಸ್ವೀಕರಿಸಿದವನು. ಅಂಥ ಲಕ್ಷ ಲಕ್ಷ ಅಭಿಮಾನಿಗಳು ಅವರಿಗಿದ್ದಾರೆ. ಅವರ ಇತ್ತೀಚಿನ ಆಕಸ್ಮಿಕ, ಗುರಿ ಮೊದಲಾದ ಕೆಲವೇ ಕೆಲವು ಚಿತ್ರಗಳನ್ನು ಹೊರತು ಪಡಿಸಿ ಉಳಿದ ಅದರಲ್ಲೂ ಅವರ  ಪೌರಾಣಿಕ ಮತ್ತು ಐತಿಹಾಸಿಕ ಚಿತ್ರಗಳೇನಾದರೂ ಟಿ.ವಿ.ಯಲ್ಲಿ ಬರುತ್ತಿದ್ದರೆ ನಿಂತು ನೋಡದ ಕನ್ನಡಿಗನ್ಯಾರೂ ಇರಲು ಸಾಧ್ಯವೇ ಇಲ್ಲ. ಹಾಗೇನಾದರು ಇದ್ದರೆ ಅವನು ಕೇವಲ ರಾಜ್ ಅಭಿಮಾನಿ ಅಲ್ಲವೆಂದಲ್ಲ, ಬದಲಿಗೆ ಕನ್ನಡದ ಬಗ್ಗೆಯೇ ನಿರಭಿಮಾನವಿರುವ ಈ ನೆಲದ ಅನ್ನವನ್ನುಂಡು ಪರರಿಗೆ ಜೈ ಎನ್ನುವವ ಎಂದರ್ಥ.

ರಾಜ್ ಬದುಕಿನ ಅನೇಕ ಘಟನೆಗಳನ್ನು ಪೋಣಿಸಿ ಅವರನ್ನೊಬ್ಬ ಸಂತನನ್ನಾಗಿಯೋ, ಉದಾತ್ತನನ್ನಾಗಿಯೋ ಅಥವ ಅಪಾರ ಮಾನವ ಪ್ರೇಮಿಯೆಂದೋ ಸಾಬೀತು ಮಾಡಬಹುದು.  ಆದರೆ ರಾಜ್ ಕೂಡ  ನಮ್ಮ ನಿಮ್ಮಂಥ ಸಾಮಾನ್ಯ ಮನುಷ್ಯರೆ ಆಗಿದ್ದರು. ಅವರಿಗೂ ಸಾಂಸಾರಿಕ ಬಂಧನಗಳು, ಕಟ್ಟುಪಾಡುಗಳು ಮಿತಿ-ನಿರ್ಮಿತಿಗಳು ಇದ್ದವು.  ಹಾಗಾಗಿದ್ದರಿಂದಲೇ ರಾಜ್, ‘ರಾಜಕುಮಾರ'ನಾಗದೇ ನಮ್ಮ ಮನೆಯ ಹುಡುಗನೇ ಆಗಿದ್ದರು. ಆ ಕಾರಣಕ್ಕೇ ಅವರು ನಾಡಿನ ಅಭಿಮಾನದ ಸಂಕೇತವಾಗುತ್ತಾರೆ ಮತ್ತು ಬರೆಯದ ಕವಿತೆಯ ರೂಪಕವಾಗಿ ಕಾಡುತ್ತಲೇ ಇರುತ್ತಾರೆ.

                                                                                                                          

Share:

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು

ಇಂದು (ಏಪ್ರಿಲ್ 24) ಕರ್ನಾಟಕ ಚಿತ್ರರಂಗದ ಕಣ್ಮಣಿ, ಕರ್ನಾಟಕ ರತ್ನ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ, ನಟಸಾರ್ವಭೌಮ, ಗಾನಗಂಧರ್ವ, ಕಲಾಜ್ಯೋತಿ. ರಸಿಕರ ರಾಜ, ಕಲಾ ಕೌಸ್ತುಭ, ಪದ್ಮಭೂಷಣ ಡಾ.ರಾಜ್ ಕುಮಾರ್ ರವರ 88ನೇ ಹುಟ್ಟುಹಬ್ಬ.  ಈ ಮಹಾನ್ ಚೇತನದ ಹುಟ್ಟುಹಬ್ಬದ ಸಂದರ್ಭದಲ್ಲಿ, ಅರಸೀಕೆರೆಗೆ 1968ರಲ್ಲಿ ಭೇಟಿ ನೀಡಿದ್ದ ಡಾ.ರಾಜ್ ಕುಮಾರ್ ರವರ ಕೆಲವು ಅಪರೂಪದ ಚಿತ್ರಗಳನ್ನು ನಿಮ್ಮೊಂದಿಗೆ ಶೇರ್ ಮಾಡಿಕೊಳ್ಳಬಯಸುತ್ತೇವೆ.


ಡಾ. ರಾಜ್ ಕುಮಾರ್ ರವರ 100 ಚಿತ್ರ “ಭಾಗ್ಯದ ಬಾಗಿಲು”. 1968 ರಲ್ಲಿ ತೆರೆಕಂಡ ಈ ಚಿತ್ರ ಕರ್ನಾಟಕದ ಹಲವು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿತು.  ಈ ಚಿತವು ಅರಸೀಕೆರೆಯಲ್ಲಿಯೂ ಶತದಿನೋತ್ಸವ ಆಚರಿಸಿತು.  ಈ ಸಂಭ್ರಮಾಚರಣೆಗಾಗಿ ಅರಸೀಕೆರೆಗೆ ಖುದ್ದು ರಾಜ್ ಕುಮಾರ್ ರವರು ಆಗಮಿಸಿದ್ದರು.  ಅರಸೀಕೆರೆಯ ಡಬಲ್ ಸವರನ್ ಕಂಪನಿಯ ಮಾಲೀಕರಾದ ಬಿ.ಪಿ.ಮಲ್ಲಿಕಾರ್ಜುನಪ್ಪನವರ ಲಾರಿಯ ಮೇಲೆ ರಾಜ್ ಕುಮಾರ್ ರವರ ಮೆರವಣಿಗೆ ಅಪಾರ ಅಭಿಮಾನಿಗಳ ನಡುವೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.  ನಂತರ ನಡೆದ ಸಮಾರಂಭದಲ್ಲಿ ಅಂದಿನ ಪುರಸಭಾ ಅಧ್ಯಕ್ಷರಾಗಿದ್ದ ಕೆ.ಪಿ.ಸುಂದರರಾಜ ಶೆಟ್ಟಿ ರವರು ರಾಜ್ ಕುಮಾರ್ ರವರನ್ನು ಸನ್ಮಾನಿಸಿದರು.  ಇದೇ ಸಮಾರಂಭದಲ್ಲಿ ಅರಸೀಕೆರೆಯಲ್ಲಿ  ರಾಜ್ ಕುಮಾರ್ ರವರಿಗೆ “ನಟಸಾರ್ವಭೌಮ” ಎಂಬ ಬಿರುದನ್ನು ನೀಡಲಾಯಿತು (ಈ ಬಗ್ಗೆ ಅಧಿಕೃತವಾದ / ಲಿಖಿತವಾದ ಯಾವುದೇ ದಾಖಲೆಗಳು ನಮಗೆ ದೊರೆತಿರುವುದಿಲ್ಲ.  ಅಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅರಸೀಕೆರೆಯ ಅನೇಕ ಹಿರಿಯರು ಈ ಮಾತನ್ನು ಅನುಮೋದಿಸಿರುವುದರಿಂದ ಇಲ್ಲಿ ಉಲ್ಲೇಖಿಸಿದ್ದೇವೆ).   ಕಾರ್ಯಕ್ರಮದ ನಂತರ ಡಬಲ್ ಸವರನ್ ಕಂಪನಿಯ ಮಾಲೀಕರಾದ ಬಿ.ಪಿ.ಮಲ್ಲಿಕಾರ್ಜುನಪ್ಪನವರ ಮನೆಯಲ್ಲಿ ನೆಲದಲ್ಲಿಯೇ ಕುಳಿತು ರಾಜ್ ಕುಮಾರ್ ರವರು ಊಟ ಮಾಡಿದ್ದರು.  ಮಲ್ಲಿಕಾರ್ಜುನಪ್ಪನವರ ಕುಟುಂಬದವರು ರಾಜ್ ಕುಮಾರ್ ರವರ ಜೊತೆ ಒಂದು ಗ್ರೂಪ್ ಫೋಟೋ  ತೆಗೆಸಿಕೊಂಡಿದ್ದರು.

(ಚಿತ್ರಗಳು : ದಿ.ಬಸವರಾಜ್, ಸಂಸ್ಥಾಪಕರು, ಬಸವರಾಜ್ ಸ್ಟೂಡಿಯೋ, ಅರಸೀಕೆರೆ)
(ಚಿತ್ರಗಳ ಸಂಗ್ರಹಣೆ / ಮಾಹಿತಿ : ಶ್ರೀ.ಟಿ.ಎಸ್.ರವೀಂದ್ರನಾಥ್, ಮಾಲೀಕರು ಸಂತ್ಯಕಾಂತ ಫರ್ನೀಚರ್ಸ್, ಪೇಟೆಬೀದಿ ಅರಸೀಕೆರೆ)

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು


ಅರಸೀಕೆರೆ ಪುರಸಭಾ ಅಧ್ಯಕ್ಷರಾಗಿದ್ದ ಕೆ.ಪಿ.ಸುಂದರರಾಜ ಶೆಟ್ಟಿ ರವರು ರಾಜ್ ಕುಮಾರ್ ರವರನ್ನು ಸನ್ಮಾನಿಸಿದರು 

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು


Share:

ಶನಿವಾರ, ಏಪ್ರಿಲ್ 22, 2017

ಅರಸೀಕೆರೆಯಲ್ಲಿ ಭೂಮಿ ದಿನ ಆಚರಣೆ

Arsikere : 


ಭೂಮಿ ದಿನದ ಅಂಗವಾಗಿ ಶನಿವಾರದಂದು ಅರಸೀಕೆರೆ ಪಟ್ಟಣದ ಪೇಟೆಬೀದಿಯಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ಸಂಸ್ಕಾರ ಭಾರತೀ ಅರಸೀಕೆರೆ ಘಟಕದ ಸಹಯೋಗದಲ್ಲಿ  ಹೆಸರಾಂತ ರಂಗೋಲಿ ಕಲಾವಿದೆ ಸುನಂದಾ ಕಠಾರಿ ರವರು “ಭೂಮಿ ನಮನ” ಶೀರ್ಷಿಕೆಯಲ್ಲಿ ಸುಂದರವಾದ ಬೃಹತ್ ರಂಗೊಲಿಯನ್ನು ರಚಿಸಿದರು.


ಭೂಮಿ ದಿನದ ಹಿನ್ನೆಲೆ :-
ಭೂಮಿ ದಿನ ಏಪ್ರಿಲ್ 22 ರಂದು ವಿಶ್ವಾದ್ಯಂತ ಆಚರಿಸಲಾಗುವ ವಾರ್ಷಿಕ ಘಟನೆಯಾಗಿದೆ, ಪರಿಸರ ರಕ್ಷಣೆ ಬೆಂಬಲವನ್ನು ವಿವಿಧ ಪ್ರದರ್ಶನಗಳ ಮೂಲಕ ನಡೆಸಲಾಗುತ್ತದೆ. 1970 ರಲ್ಲಿ ಮೊದಲ ಭೂಮಿ ದಿನ ಆಚರಿಸಲಾಯಿತು. 193 ರಾಷ್ಟ್ರಗಳಲ್ಲಿ ಈ ದಿನ ಆಚರಿಸಲಾಗುತ್ತದೆ.

ಕೈಗಾರಿಕೆಗಳ ಮಾಲಿನ್ಯದಿಂದ ವಾತಾವರಣ ಕೆಡುತ್ತಿದ್ದು, ಮಾಲಿನ್ಯಯುಕ್ತವಾಗುತ್ತಿದೆ ಎಂದು ಅಮೆರಿಕದಲ್ಲಿ 1970ರಲ್ಲಿ ಪರಿಸರಪ್ರೇಮಿಗಳ ಚಳವಳಿ ನಡೆಯಿತು. ಇದು ಕೆಲವೇ ದಿನಗಳಲ್ಲಿ ಬೃಹತ್ ಸ್ವರೂಪವನ್ನೂ ಪಡೆಯಿತು. ಪರಿಸರ ಪ್ರೇಮಿಗಳು ಅಷ್ಟೇ ಅಲ್ಲ, ನಾಗರಿಕರೆಲ್ಲ ಎಚ್ಚೆತ್ತುಕೊಂಡು ಈ ಮಾಲಿನ್ಯ ಹೋಗದಿದ್ದರೆ ಉಳಿಗಾಲವಿಲ್ಲ ಎಂದರಿತುಕೊಂಡರು. ಆಗ ಸರ್ಕಾರ ಮಾಲಿನ್ಯ ತಡೆಗೆ ನಿಯಮಗಳನ್ನು ರೂಪಿಸಿ, ಜಾರಿಗೂ ತಂದಿತು. ಈ ಹೋರಾಟದ ಫಲವೇ ಭೂಮಿ ದಿನ. ಈ ಚಳವಳಿಗೆ ಸರ್ಕಾರ ಮನ್ನಣೆ ನೀಡಿ ಪರಿಸರ ರಕ್ಷಣೆ, ಭೂಮಿ ಸಂರಕ್ಷಣೆಗೆ ಒತ್ತು ನೀಡುವ ಭರವಸೆ ನೀಡಿದ ಸೂಚಕವಾಗಿ ಪ್ರತಿವರ್ಷ ಏಪ್ರಿಲ್ 22ರಂದು ವಿಶ್ವಭೂಮಿ ದಿನವಾಗಿ ಆಚರಣೆ ಮಾಡಲಾಗುತ್ತದೆ.

ಈ ಭೂಮಿ ದಿನ ನಂತರದ ದಿನಗಳಲ್ಲಿ, ವರ್ಷಗಳಲ್ಲಿ ವಿಶ್ವದಾದ್ಯಂತ ವಿಸ್ತಾರವಾಯಿತು. ಭೂಮಿ ಸಂರಕ್ಷಣೆಯಲ್ಲಿ ಮಾನವನ ಪಾತ್ರದ ಬಗ್ಗೆ ಅರಿವು ಮೂಡಿಸುವ ವೇದಿಕೆಗಳು ಸೃಷ್ಟಿಯಾದವು. ಪರಿಸರ ಕಾಳಜಿಯುಳ್ಳ ಸಂಸ್ಥೆಗಳು ಕೈಜೋಡಿಸಿದವು. ಕೆಲವು ಕಂಪನಿಗಳು ತಮ್ಮ ಕಾರ್ಪೊರೇಟ್ ಹೊಣೆಗಾರಿಕೆಯ (ಸಿಎಸ್‌ಆರ್) ಮೂಲಕವೂ ಕಾರ್ಯಕ್ರಮಗಳನ್ನು ಆಯೋಜಿಸಿದವು. ಪ್ರತಿಯೊಂದು ವರ್ಷಕ್ಕೂ ಒಂದು ಥೀಮ್ ನೀಡಲಾಯಿತು. ಅದರಂತೆ ಭೂಮಿ ರಕ್ಷಣೆಯಲ್ಲಿ, ಭೂಮಿಯನ್ನು ಮಾಲಿನ್ಯ ಮುಕ್ತಗೊಳಿಸಲು, ಪರಿಸರ ಕಾಪಾಡಲು, ಹಸಿರು ಉಳಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

(ಚಿತ್ರ : ರಂಗನಾಥ ಹೆಬ್ಬಾರ್, ಸೂರ್ಯ ಸ್ಟೂಡಿಯೋ)
(ಭೂಮಿದಿನದ ಬಗ್ಗೆ ಮಾಹಿತಿ : ವಿಕಿಪೀಡಿಯಾ)

ಅರಸೀಕೆರೆಯಲ್ಲಿ ಭೂಮಿ ದಿನ ಆಚರಣೆ

ಅರಸೀಕೆರೆಯಲ್ಲಿ ಭೂಮಿ ದಿನ ಆಚರಣೆ

ಅರಸೀಕೆರೆಯಲ್ಲಿ ಭೂಮಿ ದಿನ ಆಚರಣೆ


Share:

ಅರಸೀಕೆರೆ ಬಳಿ ಭೀಕರ ರಸ್ತೆ ಅಪಘಾತ – ಸ್ಥಳದಲ್ಲಿಯೇ ಇಬ್ಬರ ಸಾವು

Arsikere :

ಅರಸೀಕೆರೆ ತಾಲ್ಲೂಕು ಕಸಬಾ ಹೋಬಳಿ ರಾಮಸಾಗರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಶನಿವಾರ ಬೆಳಿಗ್ಗೆ ಸುಮಾರು 8 ಗಂಟೆಯ ಸಮಯದಲ್ಲಿ ಟಾಟಾ ವಿನ್ಜರ್ ವ್ಯಾನ್ ಮತ್ತು ಮಾರುತಿ ಆಲ್ಟೋ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದರಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜರುಗಿದೆ. 


ಉಡುಪಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಮಾರುತಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ದಾಸನಪುರದ ರಂಗ (27 ವರ್ಷ) ಮತ್ತು ಗೋವಿಂದ (26 ವರ್ಷ) ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಇದೇ ಕಾರಿನಲ್ಲಿದ್ದ ದಯಾನಂದ ಹಾಗೂ ಮಂಜೇಗೌಡ ಎಂಬುವರಿಗೆ ತೀವ್ರಸ್ವರೂಪದ ಗಾಯವಾಗಿದೆ.  ಟಾಟಾ ವ್ಯಾನಿನ ಚಾಲಕರಿಗೂ ಗಂಭೀರ ಗಾಯಗಳಾಗಿದ್ದು  ಇವರುಗಳಿಗೆ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಿಕೊಡಲಾಗಿದೆ.

ದುರ್ಘಟನೆ ಸಂಭವಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಕೆಲವು ನಿಮಿಷಗಳ ಕಾಲ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು.  ಅಪಘಾತಕ್ಕೊಳಗಾಗಿದ್ದ ವಾಹನಗಳನ್ನು ಪೊಲೀಸರು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಿದರು.   ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಚಿತ್ರ/ಮಾಹಿತಿ : ಅರಸೀಕೆರೆ ಗ್ರಾಮಾಂತರ ಪೊಲೀಸ್ ಇಲಾಖೆ)







Share:

ಶುಕ್ರವಾರ, ಏಪ್ರಿಲ್ 21, 2017

ಅರಸೀಕೆರೆ ಪಟ್ಟಣದಲ್ಲಿ ನಲ್ಲಿಯ ನೀರಲ್ಲಿ ಸ್ನಾನ ಮಾಡಿದ ಆನೆ

Arsikere : 

ಅರಸೀಕೆರೆ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ.  ಬೆಳಗ್ಗೆ 11 ಗಂಟೆಯ ನಂತರ ಹೊರಗೆ ಓಡಾಡಲೂ ಕಷ್ಟವಾಗುವಷ್ಟು ಬಿಸಿಲಿನ ಝಳ ಮುಖಕ್ಕೆ ರಾಚುತ್ತಿದೆ.   ಈ ಬಿಸಿಲ ಝಳ ಪ್ರಾಣಿ ಪಕ್ಷಿಗಳನ್ನೂ ಹೈರಾಣಾಗುವಂತೆ ಮಾಡಿದೆ.  ಇಂದು ಮಧ್ಯಾನ್ಹ  ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿರುವ ನಗರಸಭೆಯ ನೀರು ಸರಬರಾಜು ಕಚೇರಿಯ ಮುಂಭಾಗದಲ್ಲಿ, ಖಾಸಗಿ ಮಠಕ್ಕೆ ಸೇರಿದ ಹೆಣ್ಣಾನೆಯೊಂದು ಬಿಸಿಲಿನ ತಾಪವನ್ನು ಕಡಿಮೆ ಮಾಡಿಕೊಳ್ಳಲು ಸಾರ್ವಜನಿಕರ ಉಪಯೋಗಕ್ಕೆ ಅಳವಡಿಸಿರುವ ನಲ್ಲಿ ನೀರನ್ನು ಮೈಮೇಲೆ ಸುರಿದುಕೊಂಡಿತು.  ಪಟ್ಟಣಗಳಲ್ಲೇ ಸಾಕುಪ್ರಾಣಿಗಳಿಗೆ ಈ ಪರಿಸ್ಥಿತಿಯಾಗಿರುವಾಗ, ಇನ್ನು ಈ ಬೇಸಿಗೆಯ ಬರದಲ್ಲಿ ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳ ಪಾಡು ಹೇಳತೀರದು.
ಅರಸೀಕೆರೆ ಪಟ್ಟಣದಲ್ಲಿ ನಲ್ಲಿಯ ನೀರಲ್ಲಿ ಸ್ನಾನ ಮಾಡಿದ ಆನೆ

ಅರಸೀಕೆರೆ ಪಟ್ಟಣದಲ್ಲಿ ನಲ್ಲಿಯ ನೀರಲ್ಲಿ ಸ್ನಾನ ಮಾಡಿದ ಆನೆ


ಅರಸೀಕೆರೆ ಪಟ್ಟಣದಲ್ಲಿ ನಲ್ಲಿಯ ನೀರಲ್ಲಿ ಸ್ನಾನ ಮಾಡಿದ ಆನೆ


Share:

ಗುರುವಾರ, ಏಪ್ರಿಲ್ 20, 2017

ಅರಸೀಕೆರೆಯಲ್ಲಿ ಶ್ರೀ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಜ್ಯೋತಿ ರಥಯಾತ್ರೆ

ಅರಸೀಕೆರೆಯಲ್ಲಿ ಶ್ರೀ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಜ್ಯೋತಿ ರಥಯಾತ್ರೆ


ಹಾಸನ ಜಿಲ್ಲೆ ಅರಸೀಕೆರೆ ನಗರಕ್ಕೆ ಭಗವದ್ ಶ್ರೀ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವದ ಅಂಗವಾಗಿ ಶ್ರೀ ರಾಮಾನುಜ ಜ್ಯೋತಿ ಭಕ್ತಿರಥಯಾತ್ರೆಯು ಇಂದು (ದಿನಾಂಕ 20-04-2017ನೇ ಗುರುವಾರ) ಸಂಜೆ ಆಗಮಿಸಿತು.  ರಥಯಾತ್ರೆಯೊಂದಿಗೆ ಶ್ರೀ ಯದುಗಿರಿ ಯತಿರಾಜ ಮಠ, ಮೇಲುಕೋಟೆಯ ಶ್ರೀ ಶ್ರೀ ಶ್ರೀ ಯದುಗಿರಿ ಯತಿರಾಜ ರಾಮಾನುಜ ನಾರಾಯಣ ಜೀಯರ್ ಸ್ವಾಮಿಗಳು ಆಗಮಿಸಿದ್ದರು. ಶ್ರೀ ಲಕ್ಷ್ಮೀನರಸಿಂಹ ಕ್ಷೇತ್ರ ಅರಸೀಕೆರೆಯ ಪರಂಪರ ಅವಧೂತ ಸದ್ಗುರು ಶ್ರೀ ಸತೀಶ್ ಶರ್ಮಾಜಿ ಮಹಾರಾಜ್ ರವರುಗಳ  ದಿವ್ಯ ಸಾನಿಧ್ಯದಲ್ಲಿ  ಅರಸೀಕೆರೆ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಬೃಹತ್ ಶೋಭಾಯಾತ್ರೆ ಜರುಗಿತು.  ನಂತರ ಶ್ರೀ ಸೀತಾರಾಮ ಕಲ್ಯಾಣ ಮಂದಿರದಲ್ಲಿ ಶ್ರೀಗಳಿಂದ ಆಶೀರ್ವಚನ ನಡೆಯಿತು.








Share:

ಅರಸೀಕೆರೆ ತಾಲ್ಲೂಕು ಯಳವಾರೆ ಹುಚ್ಚಮ್ಮ ದೇವಿಯವರ ವೈಭವದ ರಥೋತ್ಸವ

ಅರಸೀಕೆರೆ ತಾಲ್ಲೂಕು ಯಳವಾರೆ ಹುಚ್ಚಮ್ಮ ದೇವಿಯವರ ವೈಭವದ ರಥೋತ್ಸ


ಅರಸೀಕೆರೆ ತಾಲ್ಲೂಕು ಹಾರನಹಳ್ಳಿ ಸಮೀಪದ ಯಳವಾರೆ ಗ್ರಾಮದೇವತೆ ಶ್ರೀ ಹುಚ್ಚಮ್ಮ ದೇವಿಯವರ ಜಾತ್ರ ಮಹೋತ್ಸವು ಇಂದು ಬೆಳಿಗ್ಗೆ ವೈಭವದಿಂದ ನೆಡಯಿತು.  ಶ್ರೀ ಹುಚ್ಚಮ್ಮ ದೇವಿಯವರ ಮೂಲ ಸನ್ನಿದಾನದಲ್ಲಿ ಬುವಾರ ತಡರಾತ್ರಿ ನೂರಾರು ಮಹಿಳೆಯರು ಗುಗ್ಗಳಸೇವೆಯಲ್ಲಿ ಪಾಲ್ಗೊಂಡಿದ್ದರು. ಗಂಗಾಸ್ನಾನ, ಕೋಗಲ್ ಸೇವೆ ಮಂಗಳಾರತಿ ನೆಡಯಿತು. ಗುರುವಾರ ಬೆಳಿಗ್ಗೆ ಹುಚ್ಚಮ್ಮದೇವಿ, ಕೋಡಮ್ಮದೇವಿಯವರ ಸಿಡಿಸೇವೆಯಲ್ಲಿ ನೂರಾರು ಮಕ್ಕಳು ಹಾಗೂ ಹರಕೆ ಹೊತ್ತವರು ದೇವರ ಜೊತೆಯಲ್ಲಿ  ಸಿಡಿಕಂಬ ಸುತ್ತಿದ್ದರು.   ಜೇನುಕಲ್ಲು  ಸಿದ್ದೇಶ್ವರ ಸ್ವಾಮಿಯ ಸಣ್ಣ ರಥಕ್ಕೆ ಹೂವಿನಿಂದ ಶೃಂಗಾರವನ್ನು ಮಾಡಲಾಗಿತ್ತು.  ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರಿಗೆ ವಿಶೇಷ ಅಲಂಕಾರ ಮಾಡಿ ನೂರಾರು ಭಕ್ತರು ಅಜ್ಜಯ್ಯನ  ರಥವನ್ನು ಎಳೆದರು.

ನಂತರ ಚಲುವರಾಯ ಸ್ವಾಮಿಯವರ ಬೆಳ್ಳಿಕತ್ತಿ ಸೇವೆ ನೊಡಲು ನೂರಾರು ಭಕ್ತಾದಿಗಳು ಸೇರಿದರು. ಕತ್ತಿಸೇವೆ ನೆಡೆದ ನಂತರ ಹಚ್ಚಮ್ಮದೇವಿ ಮಹಾರಥೋತವಕ್ಕೆ ಚಾಲನೆ ನೀಡಲಾಯಿತು. ರಥದಲ್ಲಿ ಶ್ರೀ ಕೋಡಮ್ಮದೇವಿ, ಹುಚ್ಚಮ್ಮದೇವಿಯವರಿಗೆ ಪೂಜೆ ನೆಡೆದನಂತರ ಸಾವಿರಾರು ಭಕ್ತಾದಿಗಳು ದೇವಿಯ ನಾಮಸ್ಮರಣೆಯಲ್ಲಿ ರಥವನ್ನು ಎಳೆದರು. ಭಕ್ತರು ಬಾಳೆಹಣ್ಣು, ಹೂವುಗಳನ್ನುರಥಕ್ಕೆಎಸೆದು ಭಕ್ತಿಭಾವ ಸಮರ್ಪಿಸಿದರು. ರಥಕ್ಕೆ ಹೂವಿನಿಂದ ಶೃಂಗರಿಸಲಾಗಿತು.

ಹುಚ್ಚಮ್ಮದೇವಿ ಮೂಲ ಸನ್ನಿಧಾನದಲ್ಲಿ ವಿಶೇಷ ಅಲಂಕಾರ ಮಾಡಲಾಗಿತು ದೂರದ ಊರುಗಳಿಂದ ಆಗಮಿಸಿದ್ದ ಭಕ್ತರು ಹಣ್ಣು ಕಾಯಿ ಅರ್ಪಿಸಿ ದೇವರ ದರ್ಶನ ಪಡೆದರು. ಅರೆವಾದ್ಯ, ರಡೆವಾದ್ಯ, ಕಹಳೆವಾದನ, ದೋಣ್ಣುವಾದ್ಯಕ್ಕೆ ತಕ್ಕಂತೆ ಸೋಮನಕುಣಿತ ಆಕರ್ಷಣೆಯಾಗಿತು. ಹಾರನಹಳ್ಳಿ, ಎರೆಹಳ್ಳಿ, ಬೋರನಕೊಪ್ಪಲು, ಬ್ಬೂರಹಳ್ಳಿ, ಣ್ಣಾಯ್ಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರುಗಳು ಪಾಲ್ಗೊಂಡಿದರು. ಬಿಸಿಲಿನ ದಗೆ ತಡೆಯಲಾರದೆ ಜಾತ್ರೆಗೆ ಬಂದ ಭಕ್ತಾಧಿಗಳು ಜೂಸ್, ಕಬ್ಬಿನಹಾಲು, ತಂಪಾದ ಪಾನೀಯ ಮೊರೆ ಹೋದರು. ಪುರಿ ಭತ್ತಾಸು ವ್ಯಾಪಾರ ಜೋರಾಗಿತು ಜನಪ್ರತಿನಿಧಿಗಳು ಸೇರಿದಂತೆ ಹಲವರು ಈ ಜಾತ್ರೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.


(ಚಿತ್ರ/ಮಾಹಿತಿ : ಹಾರನಹಳ್ಳಿ ಚಿನ್ಮಯ್)

ಅರಸೀಕೆರೆ ತಾಲ್ಲೂಕು ಯಳವಾರೆ ಹುಚ್ಚಮ್ಮ ದೇವಿಯವರ ವೈಭವದ ರಥೋತ್ಸವ

ಅರಸೀಕೆರೆ ತಾಲ್ಲೂಕು ಯಳವಾರೆ ಹುಚ್ಚಮ್ಮ ದೇವಿಯವರ ವೈಭವದ ರಥೋತ್ಸವ

ಜೇನುಕಲ್ಲು ಸಿದ್ದೇಶ್ವರ ರಥ

ಹುಚ್ಚಮ್ಮದೇವಿ ಮೂಲ ಸನ್ನಿಧಾನ

Share:

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....