ಶನಿವಾರ, ಡಿಸೆಂಬರ್ 31, 2016

2016 ನೇ ಇಸವಿಗೆ ವಿದಾಯ

2016 ನೇ ಇಸವಿಗೆ ವಿದಾಯ

ಅರಸೀಕೆರೆ ತಾಲ್ಲೂಕಿಗೆ 2016ನೇ ಇಸವಿಯು ಭೀಕರ ಕ್ಷಾಮದ ಮುನ್ಸೂಚನೆ ನೀಡಿತು..  ಎಂದಿನಂತೆ ಮಳೆಯ ಕೊರತೆಯಿಂದ ಜಾನುವಾರುಗಳ ಮೇವಿಗೆ ಹಾಗೂ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಯಾಯಿತು.  7600 ಹೆಕ್ಟೇರ್ ನಷ್ಟು ಕೃಷಿ ಭೂಮಿ ಇರುವ ನಮ್ಮ ತಾಲ್ಲೂಕಿನಲ್ಲಿ ಕೇವಲ 155 ಹೆಕ್ಟೇರ್ ನಷ್ಟು (ಶೇಕಡಾ 2%) ಮಾತ್ರ ಕೃಷಿ ನಡೆದಿದೆ ಎಂದರೆ ನಮ್ಮ ತಾಲ್ಲೂಕಿನ ಬರದ ಪರಿಸ್ಥಿತಿ ಹೇಗಿದೆ ಎಂದು ಊಹಿಸಬಹುದು.  ಇನ್ನು ಅಲ್ಪಸ್ವಲ್ಪ ಬೆಳೆ ಬೆಳೆದ ರೈತರಿಗೆ ಕೀಟ ಬಾಧೆ, ಬೆಳೆಗಳಿಗೆ ರೋಗಬಾಧೆ ತಗುಲಿ ಮತ್ತಷ್ಟು ಹಾನಿಯಾಯಿತು.  ವಾಣಿಜ್ಯ ಬೆಳೆಗಳಾದ ತೆಂಗು ಹಾಗೂ ಕೊಬ್ಬರಿಯ ಬೆಲೆ ಕುಸಿತ ರೈತರಿಗೆ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಿತು.  ಸಾಲ ಮಾಡಿ ಬೋರ್ ಕೊರೆಸಿದರೆ 800 ಅಡಿ ಆಳ ಹೋದರೂ ಹನಿ ನೀರು ಸಿಗುತ್ತಿಲ್ಲ.  ಜಲ ಕ್ಷಾಮ ಈಗಾಗಲೇ ನಮ್ಮ ತಾಲ್ಲೂಕಿನಲ್ಲಿ ಪ್ರಾರಂಭಗೊಂಡಿದೆ.  ಮುಂಬರುವ ದಿನಗಳಲ್ಲಿ ನಮ್ಮ ತಾಲ್ಲೂಕಿನ ರೈತರು ಹಾಗೂ ಗ್ರಾಮೀಣ ಭಾಗದ ಜನರು ಹೇಗೆ ಜೀವನ ಮಾಡುತ್ತಾರೋ ಆ ದೇವರೇ ಬಲ್ಲ.

ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ಈ ವರ್ಷ ಒಂದೇ ಒಂದು ಹನಿ ನೀರು ಬಾರದೇ ತನ್ನ ಬರಡುತನವನ್ನು ಮುಂದುವರೆಸಿತು.  ಬಿಸಿಲು ಹೀಗೆಯೇ ಮುಂದುವರಿದರೆ ಅಲ್ಪಸ್ವಲ್ಪ ನೀರಿರುವ ಅರಸೀಕೆರೆಯ ಕಂತೇನಹಳ್ಳಿ ಕೆರೆಯೂ ಕೂಡ ಇನ್ನೇನು ಕೆಲವೇ ದಿನಗಳಲ್ಲಿ ಬರಡು ಭೂಮಿಯಂತಾಗುವುದರಲ್ಲಿ ಸಂಶಯವಿಲ್ಲ. 

ನಿರಾಶೆಯ ಕಾರ್ಮೋಡದ ನಡುವೆ ಒಂದೆರಡು ಆಶಾದಾಯಕ ಕೆಲಸಗಳೂ ನಮ್ಮ ಪಟ್ಟಣದಲ್ಲಿ ಜರುಗಿತು.  ಅರಸೀಕೆರೆ ಶಾಸಕರಾದ ಶ್ರೀ.ಕೆ.ಎಂ.ಶಿವಲಿಂಗೇಗೌಡರ ಅವಿರತ ಪ್ರಯತ್ನದ ಫಲವಾಗಿ ಹೇಮಾವತಿ ಕುಡಿಯುವ ನೀರು ಪಟ್ಟಣದ ಮನೆಮನೆಗೆ ಸರಬರಾಜಾಯಿತು.  ಪಟ್ಟಣಕ್ಕೆ ಅಗತ್ಯವಾಗಿದ್ದ ಒಳಚರಂಡಿ ವ್ಯವಸ್ಥೆಯೂ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿತು.  ಕಾಮಗಾರಿಗಳಿಂದ ಹದಗೆಟ್ಟಿದ್ದ ಕೆಲವು ರಸ್ತೆಗಳಿಗೆ ಡಾಂಬರೀಕರಣವಾಯಿತು.

ಮುಂಬರುವ 2017ನೇ ಇಸವಿಯು ನಮ್ಮ ತಾಲ್ಲೂಕಿಗೆ ಉತ್ತಮ ಮಳೆ ತಂದು ಈ ಭೂಮಿಯಲ್ಲಿ ಉತ್ತಮ ಬೆಳೆ ಬರುವಂತಾಗಲಿ.  ಬರದಿಂದ ಕಂಗೆಟ್ಟಿರುವ ರೈತರ ಮೊಗದಲ್ಲಿ ಸಂತಸ ಅರಳಲಿ ಎಂದು ಹಾರೈಸುತ್ತಾ 2016ನೇ ಇಸವಿಗೆ ವಿದಾಯ ಕೋರುತ್ತೇನೆ.

ಇನ್ನೇನು ಕೆಲವೇ ಕ್ಷಣಗಳಲ್ಲಿ ಮಾನ್ಯ ಪ್ರಧಾನ ಮಂತ್ರಿಯವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ.  ಅವರು ಇಂದು ತೆಗೆದುಕೊಳ್ಳುವ ಕ್ರಮಗಳು ರಾಷ್ಟ್ರಕ್ಕೆ ಒಳ್ಳೆಯದಾಗುವಂತಿರಲಿ ಎಂದು ಬಯಸುತ್ತೇನೆ.

ಶ್ರೀರಾಮ ಜಮದಗ್ನಿ

ಅರಸೀಕೆರೆ.


Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....