ಶನಿವಾರ, ಫೆಬ್ರವರಿ 17, 2018

ವೈರಾಗ್ಯ ಮೂರ್ತಿಗೆ 88ನೇ ಮಹಾಮಸ್ತಕಾಭಿಷೇಕ

ವೈರಾಗ್ಯ ಮೂರ್ತಿಗೆ 88ನೇ ಮಹಾಮಸ್ತಕಾಭಿಷೇಕ

ಜೈನ ಕಾಶಿ ಶ್ರವಣಬೆಳಗೊಳದಲ್ಲಿ ಶನಿವಾರ ಸಂಭ್ರಮ ಮನೆಮಾಡಿತ್ತು. ಜಗತ್ತಿನ ಅತಿದೊಡ್ಡ ಏಕಶಿಲಾ ಮುರ್ತಿ ಭಗವಾನ್ ಬಾಹುಬಲಿ ಸ್ವಾಮಿಯ ವಿಗ್ರಹಕ್ಕೆ ಹನ್ನೆರಡು ವರ್ಷಗಳ ನಂತರ ನಡೆಯುವ ಮಹಾ ಮಜ್ಜನಕ್ಕೆ ಜಗತ್ತಿನ ಮೂಲೆ ಮೂಲೆಗಳಿಂದ ಜನಸಾಗರ ಹರಿದುಬಂದಿತ್ತು. ಜರ್ಮನ್ ತಂತ್ರಜ್ಞಾನದಿಂದ ನಿರ್ಮಿಸಿದ್ದ ಅಟ್ಟಣಿಗೆಯ ಮೇಲೆ ಕುಳಿತಿದ್ದ ಐದು ಸಾವಿರಕ್ಕೂ ಅಧಿಕ ಜನ ಪ್ರಥಮ ಕಳಶದಲ್ಲಿ ಬಾಹುಬಲಿಯ ಮಸ್ತಕದ ಮೇಲೆ ಬೀಳುವ ಪವಿತ್ರ ಜಲವನ್ನು ನೋಡುವ ಕುತೂಹಲದಲ್ಲಿದ್ದರು.
ಬೆಳಿಗ್ಗೆಯಿಂದಲೇ ವಿಂಧ್ಯಗಿರಿ ಬೆಟ್ಟದ ಮೇಲೆ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭವಾಗಿದ್ದವು. ಬಾಹುಬಲಿಯ ಮೂರ್ತಿಯ ಮುಂಭಾಗದಲ್ಲಿ ನಿರ್ಮಿಸಿದ್ದ ಮಂಡಲದಲ್ಲಿ 108 ಕಳಶಗಳನ್ನು ಸ್ಥಾಪಿಸಲಾಗಿತ್ತು. ಪ್ರಥಮ ಕಳಸವನ್ನು 11.60 ಕೋಟಿ ರೂಪಾಯಿಗಳಿಗೆ ರಾಜಸ್ಥಾನದ ಅಶೋಕ್ ಪಾಟ್ನಿ ಕುಟುಂಬದವರು ಖರೀದಿಸಿದ್ದರು. ಈ ಹಣದಲ್ಲಿ ಶ್ರವಣಬೆಳಗೊಳದಲ್ಲಿ 200 ಹಾಸಿಗೆ ಉಳ್ಳ ಸುಸಜ್ಜಿತ ಆಸ್ಪತ್ರೆಯನ್ನು ಕಟ್ಟಲಾಗುವುದೆಂದು ಭಟ್ಟಾರಕ ಸ್ವಾಮಿಗಳು ತಿಳಿಸಿದರು.

ಮಧ್ಯಾನ್ಹ 2.30 ರ ಸಮಯಕ್ಕೆ ಗೊಮ್ಮಟನ ಹಿಂಭಾಗದ ಅಟ್ಟಣಿಗೆಗೆ ಆಗಮಿಸಿದ ಪಾಟ್ನಿ ಕುಟುಂಬದವರು, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳ ಮಾರ್ಗದರ್ಶನದಂತೆ ಬಾಹುಬಲಿಗೆ ಪವಿತ್ರ ಜಲದಿಂದ ಅಭಿಷೇಕ ನೆರವೇರಿಸಿದರು. ಇದಾದ ನಂತರ, ಉಳಿದ ಕಳಸಗಳನ್ನು ಖರೀದಿಸಿದವರು ಒಬ್ಬರನಂತರ ಒಬ್ಬರಂತೆ ಪವಿತ್ರ ಜಲಾಭಿಷೇಕ ನೆರವೇರಿಸಿದರು.
ಬಾಹುಬಲಿಗೆ ಜಲಾಭಿಷೇಕವನ್ನು ಮಾಡಲು, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರಿಗಾಗಿ ನಿರ್ಮಿಸಿದ್ದ ವಿಶೇಷ ಡೋಲಿ ವ್ಯವಸ್ಥೆಯನ್ನು ನಿರಾಕರಿಸಿ 630 ಮೆಟ್ಟಿಲುಗಳ ಬೆಟ್ಟವನ್ನು ಹತ್ತಿ ಬಂದರು. ಅಟ್ಟಣಿಗೆಯನ್ನೇರಿದ ಮುಖ್ಯಮಂತ್ರಿಗಳು ಬಾಹುಬಲಿಗೆ ಜಲಾಭಿಷೇಕ ಮಾಡಿದರು. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು, ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಸಚಿವೆ ಉಮಾಶ್ರೀ ಸೇರಿದಂತೆ ಅನೇಕ ಗಣ್ಯರು ಮುಖಮಂತ್ರಿಗಳ ಜೊತೆ ಇದ್ದರು.

ಜಲಾಭಿಷೇಕಗಳು ಮುಕ್ತಾಯಗೊಂಡ ನಂತರ ಬಾಹುಬಲಿಗೆ ಎಳೆನೀರು, ಕಬ್ಬಿನಹಾಲು, ಹಾಲು, ಶ್ವೇತ ಕಲ್ಕಚೂರ್ಣ, ಅರಿಶಿಣ, ಗಿಡಮೂಲಿಕೆಗಳ ಕಷಾಯ, ಚತುಷ್ಕೋನ ಕಳಶಗಳು, ಶ್ರೀಗಂಧ, ಚಂದನ, ಅಷ್ಟಗಂಧ, ಕೇಸರ ಗಳಿಂದ ಅಭಿಷೇಕ ಮಾಡಲಾಯಿತು, ರಜತ, ಸುವರ್ಣ ವೃಷ್ಟಿ, ಪುಷ್ಪವೃಷ್ಟಿಗಳನ್ನು ನೆರವೇರಿಸಿ ಮಹಾಮಂಗಳಾರತಿ ಮಾಡಲಾಯಿತು.

ಚಿತ್ರಗಳು : ಶ್ರೀರಾಮ ಜಮದಗ್ನಿ
ಅವಿಸ್ಮರಣೀಯ ಕ್ಷಣ

ಹನ್ನೆರಡು ವರ್ಷಗಳಿಂದ ಜಗತ್ತಿನಾದ್ಯಂತ ಅನೇಕ ಭಕ್ತರು, ಸಾರ್ವಜನಿಕರು ಕಾಯುತ್ತಿದ್ದ ಆ ಅದ್ಭುತ ಗಳಿಗೆ....
ಪ್ರಥಮ ಕಳಶದ ನೀರು ಭಗವಾನ್ ಬಾಹುಬಲಿ ಮೂರ್ತಿಯ ಮಸ್ತಕದ ಮೇಲೆ ಬಿದ್ದ ಕ್ಷಣ
ಜಿಲ್ಲಾ ಉಸ್ತುವಾರಿ ಸಚಿವರಿಂದ ಜಲಾಭಿಷೇಕ

ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪಶುಸಂಗೋಪನಾ ಸಚಿವರಾದ ಶ್ರೀ ಎ.ಮಂಜುರವರು ತಮ್ಮ ಧರ್ಮಪತ್ನಿಯೊಡನೆ ಬಾಹುಬಲಿಗೆ ಜಲಾಭಿಷೇಕ ನೆರವೇರಿಸಿದರು.
ರಾಜರ್ಷಿಯಿಂದ ಜಲಾಭಿಷೇಕ

ಮಾತನಾಡುವ ಮಂಜುನಾಥ.... ರಾಜರ್ಷಿ ಪದ್ಮವಿಭೂಷಣ ಪರಮಪೂಜ್ಯ ಶ್ರೀ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಬಾಹುಬಲಿಗೆ ಪವಿತ್ರ ಜಲಾಭಿಷೇಕ
ಮನ್ಮಥನ ಮಸ್ತಕದಿಂದ ಚಿಮ್ಮಿದ ಪವಿತ್ರ ಜಲಧಾರೆ

ಬಾಹುಬಲಿ ಮಹಾಮಸ್ತಕಾಭಿಷೇಕವನ್ನು ಚಂದ್ರಗಿರಿ ಬೆಟ್ಟದಿಂದ ನೋಡುತ್ತಿರುವ ಭಕ್ತರು

ಮುಖ್ಯ ಮಂತ್ರಿಗಳಿಂದ ಜಲಾಭಿಷೇಕ

ಕರ್ನಾಟಕದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಂದ ಜಲಾಭಿಷೇಕ

ಮುಖ್ಯಮಂತ್ರಿಗಳಿಗೆ ಆಶೀರ್ವಾದ

ಬಾಹುಬಲಿಗೆ ಜಲಾಭಿಷೇಕ ನೆರವೇರಿಸಿದ ನಂತರ ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನವರು ಮಹಾಮಸ್ತಕಾಭಿಷೇಕದ ಆಚಾರ್ಯತ್ವ ವಹಿಸಿರುವ ಪರಮಪೂಜ್ಯ ವರ್ಧಮಾನ ಸಾಗರ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದರು

ಪವಿತ್ರ ಜಲಾಭಿಷೇಕ
ಎಳನೀರಿನ ಅಭಿಷೇಕ

ಬಾಹುಬಲಿಗೆ ಎಳನೀರಿನ ಅಭಿಷೇಕ ನೆರವೇರಿಸುತ್ತಿರುವ ರಾಜರ್ಷಿ ಪದ್ಮವಿಭೂಷಣ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ವಿರಾಟ್ ವಿರಾಗಿಗೆ ಕ್ಷೀರಾಭಿಷೇಕ

ಹಾಲಿನ ಹೊಳೆಯಲ್ಲಿ ಮಿಂದ ಬಾಹುಬಲಿ
ಸಚಿವರ ಕುಟುಂಬ

ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎ.ಮಂಜು ರವರು ತಮ್ಮ ಧರ್ಮಪತ್ನಿ, ಮಗಳು, ಅಳಿಯ ಸೇರಿದಂತೆ ಕುಟುಂಬ ಸಮೇತ ಬಾಹುಬಲಿಯ ಪಾದದ ಬಳಿ ಕುಳಿತು ಮಹಾಮಸ್ತಕಾಭಿಷೇಕ ವೀಕ್ಷಿಸಿದರು

ಪರಮಪೂಜ್ಯ ರಾಜರ್ಷಿ ಪದ್ಮವಿಭೂಷಣ ಡಾ.ಡಿ. ವೀರೇಂದ್ರ ಹೆಗ್ಗಡೆಯವರು

ಛಾಯಾಗ್ರಹಣವೆಂಬ ಹವ್ಯಾಸ

ಈ ಹವ್ಯಾಸಗಳೇ ಹೀಗೆ... ಬಿಡಲು ಆಗುವುದಿಲ್ಲ.

ಪರಮಪೂಜ್ಯ ರಾಜರ್ಷಿ ಪದ್ಮವಿಭೂಷಣ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಭಾರತದ ಅತ್ಯುತ್ತಮ ಛಾಯಾಗ್ರಾಹರಲ್ಲಿ ಒಬ್ಬರು

ಪೂಜ್ಯರು ಮಹಾಮಸ್ತಕಾಭಿಷೇಕದ ಫೋಟೋ ತೆಗೆಯುತ್ತಿರುವ ದೃಶ್ಯ

ಬೆಂಗಳೂರು ಡಿಸಿಪಿ ಶ್ರೀ. ಜಿನೇಂದ್ರ ಖಣಗಾವಿ, ಪೊಲೀಸ್ ದಕ್ಷಿಣ ವಲಯ, ಮೈಸೂರು ಐಜಿ ಸಾಹೇಬರಾದ ಶ್ರೀ ವಿಫುಲ್ ಕುಮಾರ್ ಮತ್ತು ಮಹಾಮಸ್ತಕಾಭಿಷೇಕ 2018 ರ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀಮತಿ ಸರಿತಾ ಜೈನ್ ರವರು
ಶ್ವೇತಕಲ್ಕಚೂರ್ಣಾಭಿಷೇಕ

ಬಂಗಾರದ ಮೂರ್ತಿಯಂತೆ ಕಂಗೊಳಿಸಿದ ಬಾಹುಬಲಿ

ಮಹಾಮಸ್ತಕಾಭಿಷೇಕದ ಉದ್ಘಾಟನೆಯ ದಿನ, ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜರ್ಷಿ ಪದ್ಮವಿಭೂಷಣ ಡಾ. ಡಿ.ವೀರೇಂದ್ರ ಹೆಗ್ಗಡೆಯವರು " ಬಾಹುಬಲಿ ವಿಗ್ರಹವನ್ನು ಚಾವುಂಡರಾಯ ಬಂಗಾರದಲ್ಲಿ ನಿರ್ಮಿಸಿದ್ದರೆ ಇಷ್ಟು ವರ್ಷ ಇರುತ್ತಿತ್ತೋ ಇಲ್ಲವೋ ತಿಳಿಯದು... ಆದರೆ ಆತ ಕಲ್ಲಿನಿಂದ ನಿರ್ಮಿಸಿ ಸಹಸ್ರಸಹಸ್ರ ವರ್ಷಗಳು ಇರುವಂತೆ ಮಾಡಿದ್ದಾನೆ" ಎಂದು ಹೇಳಿದ್ದರು...

ನೆನ್ನೆ ನಡೆದ ಅರಿಶಿಣದ ಅಭಿಷೇಕದ ಸಮಯದಲ್ಲಿ ಬಾಹುಬಲಿಯ ಮೂರ್ತಿ ಅಪ್ಪಟ ಬಂಗಾರದ ವಿಗ್ರಹದಂತೆ ಕಾಣುತ್ತಿತ್ತು.

ಗಿಡಮೂಲಿಕೆಗಳ ಕಷಾಯ

ಭಾರತದ ವಿವಿಧ ಭಾಗಗಳಲ್ಲಿ ದೊರಕುವ ಅಪರೂಪದ ಗಿಡಮೂಲಿಕೆಗಳಿಂದ ತಯಾರಿಸಿರುವ ಕಷಾಯದಿಂದ ಅಭಿಷೇಕ.

ಈ ಅಭಿಷೇಕ ನಡೆಯುವಾಗ ಗಿಡಮೂಲಿಕೆಗಳ ಘಮಘಮಿಸುವ ಸುವಾಸನೆ ಹೊರಬರುತ್ತಿತ್ತು.

ಗಿಡಮೂಲಿಕೆಗಳ ಕಷಾಯ

ಭಾರತದ ವಿವಿಧ ಭಾಗಗಳಲ್ಲಿ ದೊರಕುವ ಅಪರೂಪದ ಗಿಡಮೂಲಿಕೆಗಳಿಂದ ತಯಾರಿಸಿರುವ ಕಷಾಯದಿಂದ ಅಭಿಷೇಕ.

ಈ ಅಭಿಷೇಕ ನಡೆಯುವಾಗ ಗಿಡಮೂಲಿಕೆಗಳ ಘಮಘಮಿಸುವ ಸುವಾಸನೆ ಹೊರಬರುತ್ತಿತ್ತು.

ಚಂದಣದ ಗೊಂಬೆ

ಚಂದಣದ ಅಭಿಷೇಕ ಪ್ರಾರಂಭವಾಗುವ ಹೊತ್ತಿಗೆ ಕತ್ತಲಾಗತೊಡಗಿತ್ತು... ವಿದ್ಯುತ್ ದೀಪಗಳ ಬೆಳಕಿನಲ್ಲಿ ಕಂಡ ಬಾಹುಬಲಿ

ಆನಂದಭಾಷ್ಪ

ವೈರಾಗ್ಯ ಮೂರ್ತಿಗೆ ಜರುಗುತ್ತಿದ್ದ ಮಹಾಮಜ್ಜನವನ್ನು ನೋಡುತ್ತಿದ್ದ ಜೈನ ಸನ್ಯಾಸಿನಿಯೊಬ್ಬರ ಕಣ್ಣಿನಲ್ಲಿ ಧಾರಾಕಾರವಾಗಿ ಹರಿದ ಆನಂದಭಾಷ್ಪ




ಬಾಹುಬಲಿಯ ಮಸ್ತಕಾಭಿಷೇಕವನ್ನು ವೀಕ್ಷಿಸಲು ವಿಂಧ್ಯಗಿರಿ ಬೆಟ್ಟದಮೇಲೆ ನಿರ್ಮಿಸಿರುವ ಜರ್ಮನ್ ತಂತ್ರಜ್ಞಾನದ ಅಟ್ಟಣಿಗೆ, ಚಂದ್ರಗಿರಿ ಬೆಟ್ಟ, ಶ್ರವಣಬೆಳಗೊಳದ ವಿಹಂಗಮ ಪನೋರಾಮಿಕ್ ಚಿತ್ರ



Share:

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....