ಗುರುವಾರ, ಡಿಸೆಂಬರ್ 21, 2017

ಶಿವ ಸಂಚಾರ ನಾಟಕೋತ್ಸವ : ಚೋರ ಚರಣದಾಸ

"ಶಿವ ಸಂಚಾರ ನಾಟಕೋತ್ಸವ"

ಶ್ರೀ ಶಿವಕುಮಾರ ಬಳಗ ಮತ್ತು ತರಳಬಾಳು ಯುವ ವೇದಿಕೆ, ಅರಸೀಕೆರೆ ತಾಲ್ಲೂಕು ಇವರುಗಳ ಸಂಯುಕ್ತಾಶ್ರಯದಲ್ಲಿ, ಅರಸೀಕೆರೆ ಪಟ್ಟಣದ ಹೊಯ್ಸಳೇಶ್ವರ ಕಾಲೇಜು ಆವರಣದಲ್ಲಿ ಆಯೋಜಿಸಿರುವ  "ಶಿವಸಂಚಾರ ನಾಟಕೋತ್ಸವ"ದ ಎರಡನೇ ದಿನದ ನಾಟಕೋತ್ಸವದ ಉದ್ಘಾಟನಾ ಸಮಾರಂಭ ಇಂದು ಸಂಜೆ ಸಾಣೇಹಳ್ಳಿ ಶ್ರೀಮಠದ ಪಟ್ಟಾಧ್ಯಕ್ಷರಾದ ಶ್ರೀಶ್ರೀಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯದಲ್ಲಿ ಜರುಗಿತು. ಅರಸೀಕೆರೆಯ ಶಾಸಕರಾದ ಶ್ರೀ. ಕೆ.ಎಂ.ಶಿವಲಿಂಗೇಗೌಡರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.

ಇಂದು ಸಂಜೆ ಪ್ರದರ್ಶನಗೊಂಡ ನಾಟಕ "ಚೋರ ಚರಣದಾಸ"

ಪ್ರಖ್ಯಾತ ನಿರ್ದೇಶಕ ಹಬೀಬ್ ತನ್ವೀರ್ ರವರು ರಾಜಸ್ಥಾನದ ಒಂದು ಜಾನಪದ ಕಥೆಯನ್ನು ಆಧರಿಸಿ ಹಿಂದಿಯಲ್ಲಿ ರೂಪಿಸಿದ ನಾಟಕವನ್ನು ಕನ್ನಡಕ್ಕೆ ಡಾ.ಸಿದ್ದಲಿಂಗ ಪಟ್ಟಣಶಟ್ಟಿರವರು ಅನುವಾದಿಸಿ ರಂಗರೂಪಕ್ಕೆ ತಂದಿದ್ದಾರೆ.  ಚರಣದಾಸ ಎಂಬ ಒಬ್ಬ ಸಾಮಾನ್ಯ ಕಳ್ಳ ಮತ್ತು ಅವನ ವಿಚಿತ್ರ ನಡೆ, ಬಡವರ ಮತ್ತು ಶೋಷಿತರ ಬಗೆಗಿನ ಕಳಕಳಿ, ಧರ್ಮ, ಗುರು, ಸಂಪ್ರದಾಯ ಮತ್ತು ಸತ್ಯನಿಷ್ಠೆ ಮುಂತಾದ ಗುಣಗಳನು ಎತ್ತಿತೋರಿಸುವ ಈ ನಾಟಕದಲ್ಲಿ ಹಾಸ್ಯ, ಸತ್ಯ, ನೀತಿ ಮತ್ತು ಸರಳ ಜೀವನದ ಪ್ರತಿಪಾದನೆಯಿದೆ.  ಈ ನಾಟಕವನ್ನು ಮಾಲತೇಶ್ ರಾ ಬಡಿಗೇರ್ ರವರು ನಿರ್ದೇಶನ ಮಾಡಿದ್ದಾರೆ.











Share:

ಬುಧವಾರ, ಡಿಸೆಂಬರ್ 20, 2017

ಅರಸೀಕೆರೆಯಲ್ಲಿ ಶಿವ ಸಂಚಾರ ನಾಟಕೋತ್ಸವ : ಮೋಳಿಗೆ ಮಾರಯ್ಯ

"ಶಿವ ಸಂಚಾರ ನಾಟಕೋತ್ಸವ"


ಶ್ರೀ ಶಿವಕುಮಾರ ಬಳಗ ಮತ್ತು ತರಳಬಾಳು ಯುವ ವೇದಿಕೆ, ಅರಸೀಕೆರೆ ತಾಲ್ಲೂಕು ಇವರುಗಳ ಸಂಯುಕ್ತಾಶ್ರಯದಲ್ಲಿ, ಅರಸೀಕೆರೆ ಪಟ್ಟಣದ ಹೊಯ್ಸಳೇಶ್ವರ ಕಾಲೇಜು ಆವರಣದಲ್ಲಿ ಡಿಸೆಂಬರ್ 20, 21, 22 ರಂದು ಮೂರು ದಿನಗಳ ಕಾಲ "ಶಿವಸಂಚಾರ ನಾಟಕೋತ್ಸವ" ವನ್ನು ಹಮ್ಮಿಕೊಳ್ಳಲಾಗಿದೆ.

ಮೊದಲ ದಿನದ ನಾಟಕೋತ್ಸವದ ಉದ್ಘಾಟನಾ ಸಮಾರಂಭವು ಇಂದು (20-12-2017) ಸಂಜೆ  ಹಾರನಹಳ್ಳಿ ಸುಕ್ಷೇತ್ರ ಕೋಡಿಮಠ ಶ್ರೀಶ್ರೀಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಜರುಗಿತು. ಅರಸೀಕೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಗಂಜಿಗೆರೆ ಚಂದ್ರಶೇಖರ್, ಹಳೆಬೀಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಸಿ.ನಾಗರಾಜು, ಹಾಸನ ಜಿ.ಪಂ. ಸದಸ್ಯರಾದ ಮಾಡಾಳು ಸ್ವಾಮಿ, ತಾ.ಪಂ. ಇ.ಓ ಚಂದ್ರಶೇಖರ್ ಹಾಗೂ ಸಾಧು ವೀರಶೈವ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.

ಇವತ್ತು ಪ್ರದರ್ಶನಗೊಂಡ ನಾಟಕ "ಮೋಳಿಗೆ ಮಾರಯ್ಯ"

ಸಾಣೇಹಳ್ಳಿ ಮಠದ ಪಟ್ಟಾಧ್ಯಕ್ಷರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಈ ನಾಟಕದ ರಚನೆ ಮಾಡಿದ್ದಾರೆ.   ಶ್ರೀ ಮಹದೇವ ಹಡಪದ್ ರವರು ನಾಟಕದ ನಿರ್ದೇಶನ ಮಾಡಿದ್ದಾರೆ.

"ಮೋಳಿಗೆ ಮಾರಯ್ಯ" :-
12 ನೇ ಶತಮಾನದ ಬಸವಾದಿ ಶಿವಶರಣರ ತಾತ್ವಿಕ ಬದುಕಿಗೆ ಆಕರ್ಷಿತರಾಗಿ ಬೇರೆ ಬೇರೆ ರಾಜ್ಯ, ರಾಷ್ಟ್ರಗಳಿಂದ ಕಲ್ಯಾಣಕ್ಕೆ ಬಂದವರು ಹಲವರು.  ಅವರಲ್ಲಿ ಮೋಳಿಗೆ ಮಾರಯ್ಯ ಕೂಡ ಒಬ್ಬರು.  ಅವರು ಮೊದಲಿಗೆ ಕಾಶ್ಮೀರ ರಾಜ್ಯದಲ್ಲಿ ರಾಜನಾಗಿದ್ದವರು.  ಆಗ ಅವರ ಹೆಸರು ಮಹದೇವ ಭೂಪಾಲ.  ಅವರು ತಮ್ಮ ಸಂಪತ್ತು, ರಾಜ್ಯ ರಾಜಪದವಿಯನ್ನು ತ್ಯಜಿಸಿ ಸಾಮಾನ್ಯನಂತೆ ಕಲ್ಯಾಣಕ್ಕೆ ಬಂದು ಕಟ್ಟಿಗೆ ಕಾಯಕದ ಮೂಲಕ ಶರಣನಾದ ಪರಿ ಈ ನಾಟಕಲ್ಲಿ ನಿರೂಪಿತವಾಗಿದೆ.  ಅವರೊಡನೆ ಕಲ್ಯಾಣಕ್ಕೆ ಬಂದ ಪತ್ನಿ ಮಹಾದೇವಮ್ಮ, ಕಳ್ಳಚಿಕ್ಕಯ್ಯ ಮತ್ತು ನಿಜಶರಣೆ ಬೊಂತಾದೇವಿಯ ವಿವರವೂ ಇಲ್ಲಿದೆ.  ಶರಣರ ಕಾಯಕಶೀಲ ಬದುಕು ಇಂದಿನ ಜನಮಾನಸಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಈ ನಾಟಕದ ಪ್ರಯೋಗ ರೂಪಿತವಾಗಿದೆ.

ಕಲ್ಯಾಣದಿಂದ ಶರಣರ ವಿಚಾರಗಳ ಪ್ರಚಾರಕ್ಕೆ ಹೋಗಿದ್ದ ಬಹುರೂಪಿಗಳ ಜೋಳಿಗೆಯ ಕಳವು ಮತ್ತು ಬೊಂತಾದೇವಿಯ ಕನಸಿನೊಂದಿಗೆ ಆರಂಭವಾಗುವ ನಾಟಕವು, ವಚನಗಳ ತಾತ್ವಿಕ ಅರಿವನ್ನು ವಿಸ್ತರಿಸುತ್ತಾ ನುಡಿದಂತೆ ನಡೆದ ಶರಣರ ಭಾವ ಬದುಕನ್ನು ವಿಸ್ತಾರಪಡಿಸುವುದು.  "ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ" ಎನ್ನುವ ಸಂದೇಶವನ್ನು ಮಾರಯ್ಯನವರು ಸಮಾಜಕ್ಕೆ ತಿಳಿಸುವರು.

ಬಸವಣ್ಣನವರ ಆಶಯಗಳು ಅವರು ಬದುಕಿದ್ದಾಗಲೇ ಸಾಕಷ್ಟು ಜನಮಾನಸವನ್ನು ತಲುಪಿದ್ದವು.  ದೂರದೂರದ ಶರಣರೆಲ್ಲರೂ ಕಲ್ಯಾಣದತ್ತ ಆಕರ್ಷಿತರಾಗಿ ಬಂದಿದ್ದರು.  ಅಂಥ ಬರುವಿಕೆಯ ಕೇಂದ್ರವಸ್ತುವನ್ನಾಗಿ ಉಳ್ಳ ಈ ನಾಟಕವು, ದಾಸೋಹದ ಮಹಿಮೆಯನ್ನು ಮತ್ತು ಜಂಗಮಾರಾಧನೆಯ ಮಹತ್ತನ್ನು, ಸರಳತೆಯ ಸವಿಯನ್ನು ಹೇಳುತ್ತದೆ.








Share:

ಸೋಮವಾರ, ನವೆಂಬರ್ 20, 2017

ಅರಸೀಕೆರೆ ಬಳಿ ಭೀಕರ ರಸ್ತೆ ಅಪಘಾತ - 40 ಜನರಿಗೆ ಗಾಯ

Arsikere


ಅರಸೀಕೆರೆ ತಾಲ್ಲೂಕು ಕಸಬಾ ಹೋಬಳಿ ಮೈಲನಹಳ್ಳಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಭಾನುವಾರ ತಡರಾತ್ರಿ ಬಸ್ ಮತ್ತು ಲಾರಿಯ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಚಾಲಕರು ಸೇರಿದಂತೆ 40 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಬೆಂಗಳೂರಿನಿಂದ  ಸಿಮೆಂಟ್ ಚೀಲಗಳನ್ನು ಕೊಂಡೊಯ್ಯುತ್ತಿದ್ದ ಕೊಂಡೊಯ್ಯುತ್ತಿದ್ದ ಲಾರಿಯ ನಡುವೆ ಮೈಲನ ಹಳ್ಳಿ ಗ್ರಾಮದ ಬಳಿ ಇರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯ ತಿರುವಿನಲ್ಲಿ ಅಪಘಾತವಾಗಿದೆ.  ಅಪಘಾತದ ತೀವ್ರತೆಗೆ ಲಾರಿ ಮತ್ತು ಬಸ್ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಗಾಯಗೊಂಡ ಕೆಲವರಿಗೆ ತಿಪಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೆ ಕೆಲವರಿಗೆ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗಳಿಗೆ ಕಳಿಸಿಕೊಡಲಾಗಿದೆ. ಅಪಘಾತದ ಪರಿಣಾಮ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಕೆಲವು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.  ಅರಸೀಕೆರೆ ಮತ್ತು ತಿಪಟೂರು ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.  ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರಮಾಹಿತಿ : ಪೊಲೀಸ್ ಇಲಾಖೆ





Share:

ಗುರುವಾರ, ನವೆಂಬರ್ 16, 2017

ಅರಸೀಕೆರೆಯಲ್ಲಿ ಮುಂಜಾನೆಯ ಮಂಜು



ಅರಸೀಕೆರೆ ಪಟ್ಟಣದಲ್ಲಿ ಗುರುವಾರ ಮುಂಜಾನೆ ದಟ್ಟವಾದ ಮಂಜು ಕವಿದು ನೋಡಲು ಮಲೆನಾಡಿನಂತೆ ಕಾಣುತ್ತಿತ್ತು.  ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾದ ಮಂಜು ನೋಡನೋಡುತ್ತಿದ್ದಂತೆ ದಟ್ಟವಾಗತೊಡಗಿತು.   8 ಗಂಟೆಯ ಹೊತ್ತಿಗೆ ಮಂಜು ಸಂಪೂರ್ಣ ಕರಗಿಹೋಯಿತು.







Share:

ಸೋಮವಾರ, ನವೆಂಬರ್ 6, 2017

ಅರಸೀಕೆರೆಯಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ

"ಪರಿವರ್ತನಾ ಯಾತ್ರೆ"


ನವ ಕರ್ನಾಟಕದ ನಿರ್ಮಾಣಕ್ಕಾಗಿ ಭಾರತೀಯ ಜನತಾ ಪಕ್ಷವು ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಯು ಇಂದು ಬೆಳಿಗ್ಗೆ ಅರಸೀಕೆರೆಗೆ ಆಗಮಿಸಿತು. ಮಾಜಿ ಮುಖ್ಯಮಂತ್ರಿ ಶ್ರೀ.ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಆಗಮಿಸಿದ ಈ ರಥಯಾತ್ರೆಯು ಅರಸೀಕೆರೆಗೆ ಬರುವ ಹೊತ್ತಿಗೆ ಪಟ್ಟಣದಲ್ಲಿ ಜೋರಾದ ಮಳೆ ಬರುತ್ತಿತ್ತು.  ನೂರಾರು ಕಾರ್ಯಕರ್ತರುಗಳು ಮಳೆಯನ್ನು ಲೆಕ್ಕಿಸದೇ ರಥಯಾತ್ರೆಯ ಜೊತೆ ಬೈಕ್ ರಾಲಿಯಲ್ಲಿ ಪಾಲ್ಗೊಂಡರು.  ರಥಯಾತ್ರೆಗೆಂದೇ ನಿರ್ಮಿಸಿರುವ ವಾಹನದಲ್ಲಿ ಮಾಜಿ ಸಚಿವರಾದ ವಿ.ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆಯವರು ಉಪಸ್ಥಿತರಿದ್ದರು.

ಪಟ್ಟಣದ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಗೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪನವರು, ಇಂದು "ಕನಕ ಜಯಂತಿ" ಇದ್ದದ್ದರಿಂದ, ಮೊದಲಿಗೆ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ವೇದಿಕೆಯನ್ನೇರಿದರು. ಈ ಸಮಯದಲ್ಲಿ ಸ್ವಲ್ಪ ಹೊತ್ತು ಮಳೆ ನಿಂತಿದ್ದರಿಂದ ಕಾರ್ಯಕ್ರಮ ಸುಗಮವಾಗಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾಜಿ ಸಂಸದೆ ತೇಜಸ್ವಿನಿ ರಮೇಶ್, ಮಾಜಿ ಸಚಿವರಾದ ಶ್ರೀರಾಮುಲು, ವಿ.ಸೋಮಣ್ಣ, ಅರಸೀಕೆರೆಯ ಮಾಜಿ ಶಾಸಕರುಗಳಾದ ಕೆ.ಪಿ.ಪ್ರಭುಕುಮಾರ್, ಎ.ಎಸ್.ಬಸವರಾಜು, ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಿವಿಟಿ ಬಸವರಾಜು ಹಾಗೂ ಮುಖಂಡರುಗಳು ಮಾತನಾಡಿದರು.

ಕೊನೆಯದಾಗಿ ಬಿ.ಎಸ್.ಯಡಿಯೂರಪ್ಪನವರು ಸಭೆಯನ್ನುದ್ದೇಶಿಸಿ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ ಮತ್ತೆ ಜೋರಾದ ಮಳೆ ಪ್ರಾರಂಭವಾಯಿತು.  ಶಾಮಿಯಾನದಿಂದ ಮಳೆನೀರು ಕೆಳಗೆ ಬೀಳತೊಡಗಿದಾಗ ಜನರು ಅನಿವಾರ್ಯವಾಗಿ ಕುಳಿತ ಕುರ್ಚಿಯನ್ನೇ ತಲೆಯಮೇಲೆ ಹಿಡಿದು ಮಳೆಯಿಂದ ರಕ್ಷಣೆ ಪಡೆದರು. ವೇದಿಕೆಯ ಮೇಲಿದ್ದ ಗಣ್ಯರುಗಳೂ ಸಹ ಮಳೆಯಿಂದ ರಕ್ಷಣೆ ಪಡೆಯಲು ಹರಸಾಹಸ ಪಟ್ಟರು.  ಯಡಿಯೂರಪ್ಪನವರು ತಾವು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಯೋಜನೆಗಳು, ಅರಸೀಕೆರೆ ತಾಲ್ಲೂಕಿಗೆ ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿ, ಹಾಲಿ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಿದರು.

ಕಾರ್ಯಕ್ರಮದಲ್ಲಿ ಅರಸೀಕೆರೆ ನಗರ ಬಿಜೆಪಿ ಅಧ್ಯಕ್ಷ ಮನೋಜ್ ಕುಮಾರ್ ಸ್ವಾಗತಿಸಿದರು, ಬಿಜೆಪಿ ವಕ್ತಾರ ಎನ್.ಡಿ.ಪ್ರಸಾದ್ ನಿರೂಪಣೆ ಮಾಡಿದರು. ಸ್ಥಳೀಯ ಬಿಜೆಪಿ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ರಥಯಾತ್ರೆಯು ಅರಸೀಕೆರೆಯಿಂದ ಬಾಣಾವರ, ಜಾವಗಲ್ ಮಾರ್ಗವಾಗಿ ಹಳೇಬೀಡು ತಲುಪಿತು.

















Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....