ಸೋಮವಾರ, ಜನವರಿ 15, 2018

ರೈತರ ಬಾಳಲ್ಲಿ ಸಿಹಿ ತರಲಿ ಈ ಸಂಕ್ರಾಂತಿ

ರೈತರ ಬಾಳಲ್ಲಿ ಸಿಹಿ ತರಲಿ ಈ ಸಂಕ್ರಾಂತಿ

ಕಳೆದ ಎರಡು ಮೂರು ವರ್ಷಗ ಭೀಕರ ಬರಗಾಲದಿಂದ ಮಳೆ-ಬೆಳೆ ಇಲ್ಲದೇ, ಜಾನುವಾರುಗಳಿಗೆ ಮೇವು ಹಾಗೂ ಮನುಷ್ಯರಿಗೂ ಕುಡಿಯುವ ನೀರಿಲ್ಲದೇ ತತ್ತರಿಸಿದ್ದ ಅರಸೀಕೆರೆ ತಾಲ್ಲೂಕಿನ ರೈತಾಪಿ ವರ್ಗದವರಿಗೆ ಈ ವರ್ಷದ ಆರಂಭ ಸ್ವಲ್ಪ ನೆಮ್ಮದಿಯನ್ನು ನೀಡಿದೆ. ಕಳೆದ ವರ್ಷಾಂತ್ಯದಲ್ಲಿ ಬಂದ ಸಾಧಾರಣ ಮಳೆಯಿಂದಾಗಿ ನಮ್ಮ ತಾಲ್ಲೂಕಿನ ಪ್ರಮುಖ ಬೆಳೆಯಾದ ರಾಗಿಯು ಉತ್ತಮ ಇಳುವರಿಯಾಗಿದ್ದು ರೈತರಲ್ಲಿ ಮಂದಹಾಸ ಮೂಡಿಸಿದೆ.

ಕಳೆದ ವರ್ಷ ನಮ್ಮ ತಾಲ್ಲೂಕಿನ ರೈತರು ಅನುಭವಿಸಿದ ಸಂಕಷ್ಟವನ್ನು ಹೇಳಲು ಅಸಾಧ್ಯ. ತಾವು ಸಾಕಿದ ಜಾನುವಾರುಗಳಿಗೆ ಮೇವು ನೀಡಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಮೇವು ಬ್ಯಾಂಕ್ ಗಳಿಗೆ ಹೋಗಿ ಹೊರೆ ಹುಲ್ಲನ್ನು ತಂದಿದ್ದು, ಜಾನುವಾರುಗಳಿಗೆ ನೀರೊದಗಿಸಲು ಸಾಧ್ಯವಾಗದೇ ಇದ್ದಾಗ, ತಾಲ್ಲೂಕಿನಾದ್ಯಂತ ಸರ್ಕಾರದಿಂದ ಪ್ರಾರಂಭಗೊಂಡಿದ್ದ ಗೋಶಾಲೆಗಳಿಗೆ ಕರೆದೊಯ್ದು ಅಲ್ಲಿಯೇ ಜಾನುವಾರುಗಳ ಜೊತೆ ವಾಸ ಮಾಡಿದ್ದು. ಗೋಶಾಲೆಯಲ್ಲಿ ಜಾನುವಾರುಗಳಿಗೆ ಮಾರಕ ಸಾಂಕ್ರಾಮಿಕ ರೋಗವಾದ ಕಾಲುಬಾಯಿ ಜ್ವರ ಕಂಡ ಹಿನ್ನೆಲೆಯಲ್ಲಿ ಗೋಶಾಲೆಗಳನ್ನು ಮುಚ್ಚಿದ ನಂತರ ಮತ್ತೆ ಜಾನುವಾರುಗಳನ್ನು ತಮ್ಮ ತಮ್ಮ ಸ್ಥಳಕ್ಕೆ ಕರೆದೊಯ್ದು ಅವುಗಳ ಆರೈಕೆ ಮಾಡಿದ್ದು. ಹೀಗೆ ಒಂದೇ ಎರಡೇ... ಈ ನಮ್ಮ ರೈತರು ಅನುಭವಿಸಿದ ಯಾತನೆ. ಈ ನಡುವೆ, ಅಂತರ್ಜಲ ಕುಸಿತದಿಂದಾಗಿ ತೋಟಗಳಲ್ಲಿ ಬೆಳದು ನಿಂತಿದ್ದ ಫಲಕೊಡುವ ಲಕ್ಷಾಂತರ ತೆಂಗಿನ ಮರಗಳು ತಾಲ್ಲೂಕಿನಾದ್ಯಂತ ಸುಳಿಬಿದ್ದು ನೆಲಕಚ್ಚಿದವು. ಅತ್ತದರಿ ಇತ್ತ ಪುಲಿ ಎಂಬ ಮಾತಿನಂತೆ, ಒಂದೆಡೆ ಕೃಷಿಯಿಂದಲೂ ಆದಾಯವಿಲ್ಲ ಜಾನುವಾರುಗಳ ಹಾಲು ಮಾರಿ ಜೀವನ ನಡೆಸೋಣವೆಂದರೆ, ಈ ಜಾನುವಾರುಗಳಿಗೇ ನೀರು ಮೇವಿಲ್ಲದಂತಹ ಪರಿಸ್ಥಿತಿ.

ಇಷ್ಟಾದರೂ ಛಲಬಿಡದ ತ್ರಿವಿಕ್ರಮನಂತೆ ಮತ್ತೆ ಕೃಷಿ ಕಾಯಕದಲ್ಲಿ ತೊಡಗಿದ ನಮ್ಮ ರೈತರಿಗೆ ಕಳೆದ ವರ್ಷಾಂತ್ಯದಲ್ಲಿ ಮಳೆಯು ವರವಾಗಿ ಬಂದಿತು. ಬಹುತೇಕ ಎಲ್ಲ ಕೃಷಿಕರು ಬಿತ್ತನೆ ಮಾಡಿದ್ದ ಪೈರುಗಳು ಹುಲುಸಾಗಿ ಬೆಳೆದು ಉತ್ತಮ ಫಸಲು ಬಂದಿತು. ಜಾನುವಾರುಗಳನ್ನು ಸಾಕಿದ್ದವರು ಹಿಂದೆ ಅನುಭವಿಸಿದ್ದ ಘಟನೆಯಿಂದಾಗಿ ಪಾಠ ಕಲಿತಂತಾಗಿ, ಈಗ ಬಂದಿರುವ ರಾಗಿ, ಜೋಳದ ಹುಲ್ಲನ್ನು ಮೇವಿಗಾಗಿ ಶೇಖರಿಸಿಟ್ಟಿರುವುದು ಎಲ್ಲೆಡೆ ಕಾಣಬಹುದು.

ಸಂಕ್ರಾತಿ ಹಬ್ಬವು ರೈತರಿಗೆ ಸಂತೋಷ ನೀಡುವ ಹಬ್ಬ. ಈ ಸಮಯದಲ್ಲಿ ಜಮೀನಿನಲ್ಲಿ ಬೇಳೆ ಕಾಳುಗಳ ಪೈರು ಬಂದಿದ್ದು, ಅವುಗಳನ್ನು ಕಟಾವು ಮಾಡಿ, ಕಣವನ್ನು ನಿರ್ಮಿಸಿ, ಕುಯ್ದ ಫಸಲನ್ನು ಹಸನುಮಾಡಿ ಧಾನ್ಯವನ್ನಾಗಿಸುವ ಪ್ರಕ್ರಿಯೆ ಈ ಸಂಕ್ರಾತಿಯ ಸಮಯದಲ್ಲಿ ನಡೆಯುತ್ತದೆ.

ಸೂರ್ಯನು ತನ್ನ ಪಥವನ್ನು ಇವತ್ತಿನಿಂದ ಬದಲಾಯಿಸುವಂತೆ, ನಮ್ಮ ತಾಲ್ಲೂಕಿನ ರೈತರ ಸಂಕಷ್ಟಗಳೂ ಸಹ ಇಂದಿನಿಂದ ಕೊನೆಗೊಂಡು, ಮುಂಬರುವ ದಿನಗಳಲ್ಲಿ ನಮ್ಮ ತಾಲ್ಲೂಕಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ರೈತರ ಮೊಗದಲ್ಲಿ ಸಂತಸ ತರಲಿ ಎಂದು ಪ್ರಾರ್ಥಿಸೋಣ.

ಅರಸೀಕೆರೆ ತಾಲ್ಲೂಕಿನ ಜಾಜೂರು ಗ್ರಾಮದ ಕಣವೊಂದರಲ್ಲಿ ನೆನ್ನೆ ರಾಗಿಯನ್ನು ತೂರುತ್ತಿದ್ದ ರೈತರನ್ನು ಭೇಟಿ ಮಾಡಿದೆ. ಉತ್ತಮ ಬೆಳೆಯಾಗಿರುವುದಕ್ಕೆ ಅವರೆಲ್ಲರೂ ಸಂತಸದಿಂದಿದ್ದರು. ದೇವರ ಕೃಪೆಯಿಂದ ತಾವು ಬೆಳೆದ ರಾಗಿ ಮೊದಲಾದ ಬೆಳೆಗೆ ಉತ್ತಮ ದರ ಸಿಕ್ಕರೆ ಮತ್ತಷ್ಟು ಅನುಕೂಲವಾಗುತ್ತದೆ ಎಂದರು.

"ಸಂಕ್ರಾಂತಿಯ ಸಿಹಿ ನಾಡಿನ ಎಲ್ಲ ರೈತಬಾಂಧವರಿಗೆ ದೊರೆಯಲಿ" ಎಂದು ಹಾರೈಸುತ್ತೇನೆ.

ವಂದನೆಗಳೊಂದಿಗೆ
ಶ್ರೀರಾಮ ಜಮದಗ್ನಿ
ಅರಸೀಕೆರೆ



Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....